ಸೋಮವಾರದಿಂದ ರಾಜ್ಯ ವಿಧಾನಮಂಡಲಗಳಚಳಿಗಾಲದ ಅಧಿವೇಶನ
ಬೆಂಗಳೂರು : ಕೃಷ್ಣ ಸರಕಾರ ವರ್ಷ ಪೂರೈಸಿರುವ ಸಂದರ್ಭದಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಸೋಮವಾರ ಆರಂಭವಾಗಲಿದೆ.
ಮಾಹಿತಿ ತಂತ್ರಜ್ಞಾನ, ಶಿಕ್ಷಣ, ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಲಾಗಿದೆ ಎಂಬ ಸರಕಾರದ ಹೇಳಿಕೆಗಳ ಹಿನ್ನೆಲೆಯಲ್ಲಿ ಸರಕಾರದ ಒಂದು ವರ್ಷದ ಸಾಧನೆಯನ್ನು ಒರೆಗೆ ಹಚ್ಚುವ ವೇದಿಕೆ ಸಜ್ಜಾಗಿದೆ.
ರಾಜ್ ಅಪಹರಣದ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನೇಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳುತ್ತಿದೆ. ಅಪಹರಣದ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಲಾಯಿತು ಎಂದು ದೂರುತ್ತಿರುವ ಪ್ರತಿಪಕ್ಷಗಳು, ಸರಕಾರವನ್ನು ತರಾಟೆಗೆ ತೆಗದುಕೊಳ್ಳಲು ಸಜ್ಜಾಗುತ್ತಿವೆ. ಈ ಹಿನ್ನಲೆಯಲ್ಲಿ ಈ ಬಾರಿಯ ಅಧಿವೇಶನ ಕುತೂಹಲ ಕೆರಳಿಸಿದೆ.
ಅಧಿವೇಶನದಲ್ಲಿ ಮಾಹಿತಿ ಹಕ್ಕು, ನೀರಾವರಿ ಸಹಕಾರ ಸಂಘಗಳ ರಚನೆ, ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಮುಂತಾದ ಮಸೂದೆಗಳು ಚರ್ಚೆಗೆ ಬರಲಿವೆ. ಅಕ್ಟೋಬರ್ 10ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ನ ಸಭಾಪತಿ ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ. ಗ್ರಾಮೀಣ ಕೃಪಾಂಕ, ಕೃಷ್ಣಾ ನದಿ ನೀರಿನ ‘ಬಿ’ ಯೋಜನೆಯಲ್ಲಿ ರಾಜ್ಯದ ಪಾಲು ಮುಂತಾದ ಪ್ರಮುಖ ವಿಷಯಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ.