ಹೀಗೇಕೆ ಕಾಡುತಿ, ಬಂದಾರೋ ಬಾರೋ ಮಳೆರಾಯ !
ಬೆಂಗಳೂರು : ಕಳೆದ ಕೆಲವು ದಿನಗಳಿಂದಲೂ ರಾಜ್ಯಾದ್ಯಂತ ಮಳೆ ಕಾಲು ಕೀಳುವಂತೆ ತೋರುತ್ತಿದೆ.
ನಿನ್ನೆಯಿಂದ ಬೆಂಗಳೂರಿನಲ್ಲಿ ಅತ್ತ ಜಡಿಮಳೆಯಲ್ಲದ ಇತ್ತ ಸುರಿಮಳೆಯೂ ಅಲ್ಲದ ಒಂಥರಾ ತುಂತುರು ಮಳೆ ಬೀಳುತ್ತಿದೆ. ಯಾವ ಕೆಲಸಕ್ಕೂ ಬಿಡದೆ ಜಿನುಗುಡತ್ತಲೇ ಇರುವ ಬೆಂಗಳೂರು ಮಳೆಯನ್ನು ಜನ ಶಪಿಸುತ್ತಿದ್ದಾರೆ. ನೆರೆಯ ಆಂಧ್ರ ಮತ್ತು ಒರಿಸ್ಸಾಗಳ ಚಂಡಮಾರುತದ ಬೆದರಿಕೆ ಕಡಿಮೆಯಾಗಿದೆ.
ಮೋಡದ ಮರೆಯಲ್ಲಿ ಅವಿತಿರುವ ಸೂರ್ಯನಿಂದ ಬೆಂಗಳೂರಿಗರಿಗೆ ಚಳಿಯಷ್ಟೇ ಸಿಕ್ಕಿದೆ. ಮಳೆರಾಯನ ಅನುಪಸ್ಥಿತಿಯಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಸೂರ್ಯ ತನ್ನ ಪ್ರತಾಪ ಮೆರೆದಿದ್ದಾನೆ. ತತ್ಪರಿಣಾಮವಾಗಿ ನಾಡಿನ ಅಲ್ಲಲ್ಲಿ ಒಣಹವೆ ಮೂಡಿದೆ. ಹಗಲಿನ ಉಷ್ಣಾಂಶದಲ್ಲಿ ಕೊಂಚ ಏರು ಪೇರಾಗಿದೆ. ಕೆಲವೆಡೆ ದಿನದ ಉಷ್ಣತೆ ಏರಿದೆ.
ಗುರುವಾರದಂತೆಯೇ ಕರಾವಳಿಯ ಕೆಲವೆಡೆ ದಿನದ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಾಗಿತ್ತು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡು ಬರುವುದಿಲ್ಲ. ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ ಆಗುವ ಸಂಭವ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ.