ಅದಕ್ಷ ಹಾಗೂ ಭ್ರಷ್ಟರನ್ನು ಕಡ್ಡಾಯ ನಿವೃತ್ತಿಗೊಳಿಸಲು ಚಿಂತನೆ
ಬೆಂಗಳೂರು : ಸರಕಾರಿ ಸೇವೆಯಲ್ಲಿನ 80 ಸಾವಿರ ಹುದ್ದೆಗಳನ್ನು ರದ್ದುಗೊಳಿಸಲು ಸರಕಾರ ಬದ್ಧವಾಗಿದ್ದು, ಹೊಸ ಹುದ್ದೆಗಳನ್ನು ಸೃಷ್ಟಿಸುವಾಗ ಅಗತ್ಯಕ್ಕೆ ಅನುಗುಣವಾಗಿ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬುಧವಾರ ಹೇಳಿದ್ದಾರೆ.
ಅಲ್ಲದೆ ಅದಕ್ಷ ಮತ್ತು ಭ್ರಷ್ಟ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲು ಸರಕಾರಿ ನೌಕರರ ಸೇವಾ ನಿಯಮಗಳ 285 ನೇ ಕಲಂನ್ನು ಪ್ರಬಲವಾಗಿಸುವ ದೃಷ್ಟಿಯಿಂದ ಕಾನೂನು ತಿದ್ದುಪಡಿ ತರಲಾಗವುದು ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮತ್ತು ಇಲಾಖಾ ಮುಖ್ಯಸ್ಥರಿಂದ ವರದಿ ಪಡೆಯಲಾಗುವುದು. ರಾಜ್ಯ ಸರಕಾರಿ ನೌಕರರ ಸೇವಾ ನಿಯಮಗಳ 285 ನೇ ಕಲಂನ್ನು ಜಾರಿಗೊಳಿಸುವುದು ತುಸು ಕಷ್ಟಕರವಾಗಿದೆ ಎಂದ ಕೃಷ್ಣ , ಅಗತ್ಯವೆನಿಸಿದಲ್ಲಿ ಕಾನೂನು ಇಲಾಖೆಯ ಜೊತೆ ಚರ್ಚೆ ನಡೆಸಿ ಕಾಯಿದೆಗೆ ತಿದ್ದುಪಡಿ ತರಲಾಗುವುದು ಎಂದರು.
ಬಡವರಿಗೆ ನೀಡುವ ಸಹಾಯಧನವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದಿಲ್ಲ . ಈ ಸಹಾಯಧನಕ್ಕೆ ಅನರ್ಹರಾದವರನ್ನು ಹೊರಗಿಡಲಾಗುವುದು ಎಂದೂ ಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)