ಜವಳಿ ಉದ್ದಿಮೆ ಪುನಶ್ಚೇತನಕ್ಕೆ ಹೊಸ ನೀತಿ - ಧನಂಜಯಕುಮಾರ್
ಮಂಗಳೂರು: ದೇಶದ ಜವಳಿ ಉದ್ದಿಮೆಯನ್ನು ಪುನಶ್ಚೇತನಗೊಳಿಸಲು ರಾಷ್ಟ್ರೀಯ ಜವಳಿ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಜವಳಿಖಾತೆ ಸಹಾಯಕ ಸಚಿವ ವಿ. ಧನಂಜಯಕುಮಾರ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಚಿವರು ಈ ವರ್ಷಾಂತ್ಯದಲ್ಲಿ ನೂತನ ಜವಳಿ ನೀತಿಯನ್ನು ಜಾರಿಗೆ ತರಲಾಗುವುದು ಎಂದರು. ಕರಕುಶಲ ಕೈಗಾರಿಕೆಗಳನ್ನು ಉತ್ತೇಜಿಸಲು ದೀನದಯಾಳ ಉಪಾಧ್ಯ ಕರಕುಶಲ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ 700 ಕೋಟಿ ರುಪಾಯಿ ಖರ್ಚು ಮಾಡಲಾಗುತ್ತದೆ. ದೇಶದ ಜವಳಿ ಉದ್ಯಮ, ಕಳೆದ ಆರ್ಥಿಕ ವರ್ಷದಲ್ಲಿ 57ಸಾವಿರದ 737ಕೋಟಿ ರು. ಮೊತ್ತದ ವಹಿವಾಟು ನಡೆಸಿದೆ. ದೇಶದ ಒಟ್ಟು ರಫ್ತು ಪ್ರಮಾಣದಲ್ಲಿ ಜವಳಿ ಉದ್ಯಮದ ಪಾಲು ಶೇಕಡಾ 38ರಷ್ಟು ಎಂದು ಅಂಕಿ ಅಂಶ ನೀಡಿದರು.
ದೇಶದಲ್ಲಿ 30 ಸಾವಿರ ಟನ್ ರೇಷ್ಮೆಗೆ ಬೇಡಿಕೆ ಇದ್ದು, ಉತ್ಪಾದನೆ 17 ಸಾವಿ ಟನ್ ಇದೆ ಹಾಗಾಗಿ ಚೀನಾ ಮತ್ತು ಕೊರಿಯಾಗಳಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇಕಡಾ 10ರಷ್ಟು ಎಂದು ಸಚಿವರು ವಿವರಿಸಿದ್ದಾರೆ.
ರಾಜ್ಯ 5 ಗಿರಣಿಗಳಿಗೆ ಕಾಯಕಲ್ಪ : ರಾಷ್ಟ್ರೀಯ ಜವಳಿ ನಿಗಮದಡಿ ಕರ್ನಾಟಕ ರಾಜ್ಯದ 5 ಪ್ರಮುಖ ಜವಳಿಗಿರಣಿಗಳರುವ ದಾವಣಗೆರೆ, ಗುಲ್ಬರ್ಗಾಗಳಲ್ಲಿ ತಲಾ ಒಂದು ಹಾಗೂ ಬೆಂಗಳೂರಿನ ಮೂರು ಗಿರಣಿಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ತೆರಿಗೆ ದಾಳಿ ಪಾತ್ರ ಇಲ್ಲ : ಹಿಂದಿ ಸಿನಿಮಾ ತಾರೆಯರು ಮತ್ತು ಕ್ರಿಕೆಟಿಗರ ಮನೆ ಮೇಲೆ ನಡೆದ ಆದಾಯತೆರಿಗೆ ದಾಳಿಯಲ್ಲಿ ತಮ್ಮ ಪಾತ್ರ ಇಲ್ಲ ಎಂದಿರುವ ಅವರು, ತಮ್ಮ ಖಾತೆ ಬದಲಾವಣೆಗೆ ಆದಾಯ ತೆರಿಗೆ ದಾಳಿಗಳು ಕಾರಣ ಎಂಬ ವರದಿಗಳನ್ನು ತಳ್ಳಹಾಕಿದ್ದಾರೆ.
(ಮಂಗಳೂರು ಪ್ರತಿನಿಧಿಯಿಂದ)