ಆಲಮಟ್ಟಿ ಅಣೆಕಟ್ಟೆ ಮಾಸಾಂತ್ಯದಲ್ಲಿ ರಾಷ್ಟ್ರಕ್ಕೆ ಸಮರ್ಪಣೆ?
ಬೆಂಗಳೂರು : ಆಲಮಟ್ಟಿ ಅಣೆಯನ್ನು ಎತ್ತರಿಸುವ ಕಾರ್ಯ ಭರದಿಂದ ಸಾಗಿದ್ದು, ಬಹುತೇಕ ಅಂತಿಮ ಹಂತ ತಲುಪಿದೆ. ಸರ್ವೋನ್ನತ ನ್ಯಾಯಾಲಯ ಅಣೆಕಟ್ಟೆಯ ಎತ್ತರವನ್ನು 519 ಮೀಟರ್ಗಳಷ್ಟು ಎತ್ತರಿಸಲು ಕರ್ನಾಟಕಕ್ಕೆ ಅನುಮತಿ ನೀಡಿದ ತರುವಾಯ ಸಮರೋಪಾದಿಯಲ್ಲಿ ನಡೆದ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದೆ.
ಈ ವರ್ಷ ದಾಖಲೆಯ 515 ಮೀಟರ್ ನೀರನ್ನು ಅಣೆಕಟ್ಟೆಯಲ್ಲಿ ಸಂಗ್ರಹಿಸಲಾಗಿದೆ. ತತ್ಪರಿಣಾಮವಾಗಿ ಬಾಗಲಕೋಟೆಯ ಕೆಲ ಭಾಗ ಮುಳುಗಡೆಯಾಗಿದೆ. ಬಹು ಉಪಯೋಗಿ ಉದ್ದೇಶದಿಂದ ಕೂಡಿದ ಈ ಅಣೆಕಟ್ಟೆಯಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಗೂ ಈಗ ಚಾಲನೆ ದೊರೆತಿದೆ. ಕರ್ನಾಟಕ ವಿದ್ಯುತ್ ನಿಗಮ ವಿದ್ಯುತ್ ಉತ್ಪಾದಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಈ ಯೋಜನೆ ಪೂರ್ಣವಾಗಿ ಎಷ್ಟೋ ವರ್ಷಗಳಾಗಬೇಕಿತ್ತು. ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳು ಈ ಬಗ್ಗೆ ಸರ್ವೋನ್ನತ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದ ಕಾರಣ ಯೋಜನೆ ವಿಳಂಬವಾಗಿತ್ತು.
524 ಮೀಟರ್ಗೆ ಅಣೆಯನ್ನು ಎತ್ತರಿಸಬೇಕೆಂಬ ಉದ್ದೇಶ ರಾಜ್ಯ ಸರಕಾರಕ್ಕಿತ್ತಾದರೂ 514 ಮೀಟರ್ಗಳ ಅಣೆಕಟ್ಟೆಯನ್ನು 519 ಮೀಟರ್ಗಳಗೆ ಎತ್ತರಿಸಲು ಮಾತ್ರ ಸರ್ವೋನ್ನತ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅನುಮತಿಸಿತ್ತು. ಈ ಮಧ್ಯೆ ಜಲಾಶಯದಲ್ಲಿ ಸ್ಕಿನ್ಪ್ಲೇಟ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಇನ್ನು ಎತ್ತರಿಸಿದ ಅಣೆಕಟ್ಟೆಯನ್ನು ರಾಷ್ಟ್ರಕ್ಕೆ ಎಂದು ಸಮರ್ಪಿಸಲಾಗುವುದು ಎಂಬ ಬಗ್ಗೆ ಎಲ್ಲರ ಕುತೂಹಲ.
ರಾಜ್ಯದ ಉನ್ನತಾಧಿಕಾರಿಗಳ ಮೂಲದ ರೀತ್ಯ ಎತ್ತರಿಸ ಅಣೆಕಟ್ಟೆಯನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ನಲ್ಲಿ ರಾಷ್ಟ್ರಕ್ಕೆ ಸಮರ್ಪಿಸುವುದು ಬಹುತೇಕ ಖಚಿತ. ಉದ್ಘಾಟನೆಯ ದಿನಾಂಕವನ್ನು ನಿಗದಿ ಪಡಿಸುವ ಬಗ್ಗೆ ಕೂಡ ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧೀ ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಮಂತ್ರಿಸುವ ಬಗ್ಗೆ ಕೂಡ ಸಲಹೆಗಳು ಬಂದಿವೆ ಎಂದು ತಿಳಿದುಬಂದಿದೆ. ಸರಕಾರ ಒಂದು ವರ್ಷವನ್ನು ಪೂರೈಸಲಿರುವ ಶುಭ ಸಂದರ್ಭದಲ್ಲೇ ಪ್ರಮುಖ ಮೈಲಿಗಲ್ಲಾಗಲಿರುವ ಎತ್ತರಿಸಿದ ಅಣೆಕಟ್ಟೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದು ಸೂಕ್ತ ಎಂಬುದು ಕಾಂಗ್ರೆಸ್ ವಲಯದ ಅಭಿಪ್ರಾಯವಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...