ಮಂಗಳೂರು ಫಸ್ಟ್ , ಮಂಡ್ಯ ಲಾಸ್ಟ್ : ಮುಖ್ಯಮಂತ್ರಿ
ಮಂಗಳೂರು : ಮಂಗಳೂರು, ಕ್ಷಮಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ - ಆ ಜಿಲ್ಲೆಯವರು ಎಲ್ಲರಿಗಿಂತ ಮೊದಲು. ಓದಿನಲ್ಲಿ, ತಂತ್ರಜ್ಞಾನದಲ್ಲಿ ಅದು ಬಹಳ ಮುಂದೆ. ಬೆಂಗಳೂರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಹೆಸರು ಮಾಡಿದೆಯೋ ಹಾಗೆಯೇ ಮಂಗಳೂರು ವಿಶ್ವ ಭೂಪಟದಲ್ಲಿ ಪ್ರಾಮುಖ್ಯತೆ ಪಡೆದಿದೆ.
ಇದು ಯಾರೋ ಹೇಳಿದ ಮಾತಲ್ಲ. ನಮ್ಮ ರಾಜ್ಯದ ಹೈಟೆಕ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಹೇಳಿದ ಹೆಮ್ಮೆಯ ಮಾತು. ಅವರು ಬರೀ ಇಷ್ಟೇ ಹೇಳಿದ್ದರೆ, ಬರಿ ಹೊಗಳಿಕೆಯ ಮಾತು ಎಂದಷ್ಟೇ ಅನ್ನಿಸುತ್ತಿತ್ತು. ಆದರೆ ಅವರು ನೀಡಿರುವ ಉಪಮೆ - ಹೋಲಿಕೆ ಎಲ್ಲರ ಹುಬ್ಬೇರಿಸಿದೆ.
‘ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಪ್ರಕಟವಾದಾಗ ನಿಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ನನ್ನ ಮಂಡ್ಯ ಜಿಲ್ಲೆ ಲಾಸ್ಟ್ನಲ್ಲಿರುತ್ತೆ. ಇದೇ ನನ್ನ ಮತ್ತು ನಿಮ್ಮ ಜಿಲ್ಲೆಯ ನಡುವಿನ ವ್ಯತ್ಯಾಸ ’ ಎಂದು ಮುಖ್ಯಮಂತ್ರಿಗಳು ಸೋಮವಾರ ಮಂಗಳೂರಿನಲ್ಲಿ ಹೇಳಿದಾಗ ಚಪ್ಪಾಳೆಯ ಸುರಿಮಳೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಗಳಿ ಮಾತನಾಡಿದ ಕೃಷ್ಣ, ಬೆಂಗಳೂರಿನಷ್ಟೇ ಮಂಗಳೂರೂ ಹೆಸರು ಗಳಿಸಿದೆ. ಇಲ್ಲಿನವರು ಸುಶಿಕ್ಷಿತರು, ಬುದ್ಧಿವಂತರು ಮಿಗಿಲಾಗಿ ದೂರದೃಷ್ಟಿ ಉಳ್ಳವರು ಎಂದು ಕೊಂಡಾಡಿದರು. ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ, ಹೆಸರಾಂತ ಉದ್ಯಮಗಳ ಉನ್ನತ ಸ್ತರದಲ್ಲಿ ದಕ್ಷಿಣ ಕನ್ನಡದ ಮಂದಿ ಇರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊನೆ ಸಿಡಿ : ಮಂಗಳೂರಿನ ವೇದಿಕೆಯಲ್ಲಿ ಅಲ್ಲಿನ ಮಂದಿಯನ್ನು ಮೆಚ್ಚಿಸಲು ಮುಖ್ಯಮಂತ್ರಿ ಏನೋ, ಇರುವ ವಿಷಯವನ್ನು ಇದ್ದಂತೆ ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಮಂಡ್ಯದ ಮಂದಿ ತಮ್ಮನ್ನು ಅನ್ಯ ಜಿಲ್ಲೆಯಲ್ಲಿ ಹೀಗಳೆದ ಬಗ್ಗೆ ರೊಚ್ಚಿಗೆದ್ದರೇನು ಗತಿ ಎಂದು ಕೃಷ್ಣ ಯೋಚಿಸದಿರುವುದು ಆಶ್ಚರ್ಯವೇ ಸರಿ.