ಪಾರ್ವತಮ್ಮ ರಾಜ್ಕುಮಾರ್ ಅಸ್ವಸ್ಥ , ಮಲ್ಯ ಆಸ್ಪತ್ರೆಗೆ ದಾಖಲು
ಬೆಂಗಳೂರು : ವರನಟ ರಾಜ್ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಅವರನ್ನು ನಗರದ ಮಲ್ಯ ಆಸ್ಪತ್ರೆಗೆ ಸೇರಿಸಲಾಗಿದೆ. ತಮ್ಮ ಸದಾಶಿವನಗರದ ಮನೆಯಲ್ಲಿ ಬುಧವಾರ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು.
ಪಾರ್ವತಮ್ಮ ರಾಜ್ಕುಮಾರ್ ಅವರು ತೀವ್ರ ರಕ್ತದ ಒತ್ತಡದಿಂದ ಬಳಲಿ, ಕುಸಿದು ಬಿದ್ದರು ಎಂದು ರಾಜ್ಕುಮಾರ್ ಕುಟುಂಬದ ಮೂಲಗಳು ತಿಳಿಸಿವೆ. ಪಾರ್ವತಮ್ಮ ಅವರು ದೀರ್ಘಕಾಲದಿಂದಲೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಬುಧವಾರ ಸಂಜೆ ಈ ಸಮಸ್ಯೆ ಉಲ್ಬಣಗೊಂಡಿತು. ಪಾರ್ವತಮ್ಮ ಅವರು ಎದೆ ನೋವಿನಿಂದ ಬಳಲಿ, ತೀವ್ರವಾಗಿ ಬೆವರುತ್ತಿದ್ದರು ಎಂದು ರಾಜ್ಕುಮಾರ್ ಅವರ ಕುಟುಂಬದ ವೈದ್ಯರಾದ ಡಾ. ರಮಣರಾವ್ ತಿಳಿಸಿದ್ದಾರೆ.
ರಾಜ್ಕುಮಾರ್ ಅವರ ಅಪಹರಣವಾಗಿ ಇಂದಿಗೆ 53 ದಿನಗಳು ಕಳೆದಿವೆ. ರಾಜ್ ಅವರ ಅನುಪಸ್ಥಿತಿಯಲ್ಲಿ ಪಾರ್ವತಮ್ಮನವರಿಗೆ ಮಾನಸಿಕ ಒತ್ತಡ ಹೆಚ್ಚಾಗಿರುವ ಕಾರಣ, ರಕ್ತದೊತ್ತಡ ಹೆಚ್ಚಿದೆ. ನಿರಂತರ ಆತಂಕ, ನಿರೀಕ್ಷೆ, ದುಗುಡಗಳಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ತತ್ತರಿಸಿರುವ ಅವರು, ಇಷ್ಟೂ ದಿನ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಕುಟುಂಬದ ಇತರ ಸದಸ್ಯರಿಗೆ ಧೈರ್ಯ ಹೇಳುತ್ತಿದ್ದರು ಎಂದು ಅವರು ಪುತ್ರ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ. ರಾಜ್ಕುಮಾರ್ ಅವರ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದಿಂದ ಕಂಗೆಟ್ಟಿದ್ದ ರಾಜ್ಕುಮಾರ್ ಕುಟುಂಬದ ಸದಸ್ಯರು ಪಾರ್ವತಮ್ಮನವರ ಅನಾರೋಗ್ಯದಿಂದ ಮತ್ತಷ್ಟು ಆತಂಕಗೊಂಡಿದ್ದಾರೆ.