ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ನಿಲುವಿನ ಪ್ರಮಾಣ ಪತ್ರ ಸಲ್ಲಿಕೆ
ಬೆಂಗಳೂರು : ಮೈಸೂರು ಟಾಡಾ ಬಂದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಬುಧವಾರ ಸರ್ವೋನ್ನತ ನ್ಯಾಯಾಲಯದಲ್ಲಿ ರಾಜ್ಯದ ನಿಲುವನ್ನು ವಿವರಿಸುವ ಪ್ರಮಾಣಪತ್ರವನ್ನು ಸಲ್ಲಿಸಿದೆ. ಈ ವಿಷಯವನ್ನು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಪತ್ರಕರ್ತರಿಗೆ ತಿಳಿಸಿದರು.
ರಾಜ್ ಬಿಡುಗಡೆ ಸಂಬಂಧ ರಾಜ್ಯ ಅನುಸರಿಸಬೇಕಾದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಕೇಂದ್ರ ಸಚಿವರುಗಳೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬುಧವಾರ ದೆಹಲಿಗೆ ತೆರಳಲಿದ್ದಾರೆ. ಗುರುವಾರ ದೆಹಲಿಯಲ್ಲಿ ಕರೆದಿರುವ ಉಪಹಾರ ಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರುಗಳು ರಾಜ್ ಬಿಡುಗಡೆ ಸಂಬಂಧ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಬೇಕು ಕೃಷ್ಣ ಕೋರಿದ್ದಾರೆ.
ಆಡ್ವಾಣಿ ಅವರೊಂದಿಗೆ ಚರ್ಚೆ : ಒಂದೊಮ್ಮೆ ಸಂಧಾನದ ಪ್ರಯತ್ನಗಳು ವಿಫಲವಾದರೆ ಕೇಂದ್ರದ ನೆರವು ಪಡೆಯುವ ಹಿನ್ನೆಲೆಯಲ್ಲಿ ಕೃಷ್ಣ ಅವರು ಗುರುವಾರ ಕೇಂದ್ರ ಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಹಿತಾಸಕ್ತಿ ಅರ್ಜಿ : ಈ ಮಧ್ಯೆ ಟಾಡಾ ಬಂದಿಗಳನ್ನು ಬಿಡದಂತೆ ಸರ್ವೋನ್ನತ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಜಯನಗರ ನಾಗರಿಕರು ಸರ್ವೋನ್ನತ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದ ಸೂಕ್ಷ್ಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಂದಿಗಳನ್ನು ಬಿಡುಗಡೆ ಮಾಡಲು ತಡೆಯಾಜ್ಞೆ ತೆರವು ಗೊಳಿಸುವಂತೆ ಜಯನಗರ ನಿವಾಸಿಗಳಾದ ಎಂ.ಎಸ್. ಅಂಬಿಕಾ, ಸಿ. ವಸಂತಾ, ಬಿ.ಸಿ. ನರಸಿಂಹಮೂರ್ತಿ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದಾರೆ.
ಬೂಟಾಸಿಂಗ್ ಭೇಟಿ: ಕೇಂದ್ರದ ಮಾಜಿ ಸಚಿವ ಬೂಟಾಸಿಂಗ್ ಬುಧವಾರ ಡಾ. ರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದರು. ಸಿಂಗ್ ಅವರೊಂದಿಗೆ ಮಾಜಿ ಸಚಿವರಾದ ಎಸ್. ರಮೇಶ್ ಹಾಗೂ ಗುರುಪಾದಪ್ಪ ನಾಗಮಾರಪಲ್ಲಿ ಸಹ ಇದ್ದರು. ಕನ್ನಡದ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ ವಿನೋದ್ರಾಜ್ ಸಹ ರಾಜ್ಕುಮಾರ್ ಅವರ ಮನೆಗೆ ತೆರಳಿ ರಾಜ್ಕುಮಾರ್ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪ್ರತಿಮೆ ಸ್ಥಾಪನೆಗೆ ಅಡ್ಡಿ : ಈ ಮಧ್ಯೆ ರಾಜ್ ಬಿಡುಗಡೆಗಾಗಿ ಮೌನ ಮೆರವಣಿಗೆ ಹಮ್ಮಿಕೊಂಡಿದ್ದ ವಾಟಾಳ್ ನಾಗರಾಜ್ ಅವರು ತಾವು ಯಾವುದೇ ಕಾರಣಕ್ಕೂ ತಿರುವಳ್ಳರ್ ಪ್ರತಿಮೆಯನ್ನು ಸ್ಥಾಪನೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅನುಮತಿ ಇಲ್ಲದೆ ಮೌನ ಮೆರವಣಿಗೆ ನಡೆಸಲೆತ್ನಿಸಿದ ವಾಟಾಳ್ ಹಾಗೂ ಬೆಂಬಲಿಗರನ್ನು ಬುಧವಾರ ಬೆಳಗ್ಗೆ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಚೆನ್ನೈ : ಈ ಮಧ್ಯೆ ರೇಡಿಯೋ ವೆಂಕಟೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ವಿಚಾರಣೆಯನ್ನು ಈ ತಿಂಗಳ 29ರ ತನಕ ಮುಂದೂಡಿದೆ.