ಶುಕ್ರವಾರದಿಂದ ಕನ್ನಡ ಚಲನಚಿತ್ರ ಪ್ರದರ್ಶನ ಆರಂಭ
ಬೆಂಗಳೂರು : ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರ ಪ್ರತಿರೋಧ, ಸಂಸತ್ ಸದಸ್ಯ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಹಾಗೂ ಸಾ.ರಾ. ಗೋವಿಂದು ಅವರ ಅನುಪಸ್ಥಿತಿಯಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನವನ್ನು ಶುಕ್ರವಾರದಿಂದ ಪುನಾರಂಭಿಸುವ ಬಗ್ಗೆ ಮಂಡಳಿ ನಿರ್ಧಾರ. ಇವು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ವಿದ್ಯಮಾನ.
ಗುರುವಾರ ರಾತ್ರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್ ಈ ವಿಷಯ ತಿಳಿಸಿದರು. ಚಂದ್ರು ಅವರು ತಲ್ಲಂ ನಂಜುಂಡಶೆಟ್ಟಿ, ಸಂತೋಷ್ ಚಿತ್ರಮಂದಿರದ ಮಾಲಿಕರೂ ಸೇರಿದಂತೆ ಪ್ರಮುಖ ಪ್ರದರ್ಶಕರು ಹಾಗೂ ಚಿತ್ರ ಮಂದಿರ ಮಾಲಿಕರ ಒತ್ತಡಕ್ಕೆ ಒಳಗಾಗಿದ್ದರು.
ಈ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಸಾ.ರಾ. ಗೋವಿಂದು ವಿಮಾನ ನಿಲ್ದಾಣದಲ್ಲಿದ್ದರು. ಸರ್ವೋಚ್ಚ ನ್ಯಾಯಾಲಯದಲ್ಲಿ ಶುಕ್ರವಾರ ಅಬ್ದುಲ್ ಕರೀಂ ಅವರ ತಕರಾರು ಅರ್ಜಿ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ರಾಕ್ಲೈನ್ ವೆಂಕಟೇಶ್ ಹಾಗೂ ವಕೀಲರಾದ ವೇಣುಗೋಪಾಲ್ ದೆಹಲಿಗೆ ತೆರಳಿದ್ದಾರೆ.
ರಾಜ್ಕುಮಾರ್ ಅವರು ಮರಳಿ ಬರುವತನಕ ಕನ್ನಡ ಚಿತ್ರೋದ್ಯಮದ ಯಾವುದೇ ಚಟುವಟಿಕೆ ನಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೊನೆಗೂ ಚಿತ್ರ ಪ್ರದರ್ಶಕರ ಹಾಗೂ ಚಲನಚಿತ್ರ ಮಂದಿರಗಳ ಮಾಲಿಕರ ಒತ್ತಡಕ್ಕೆ ಮಣಿದಿದೆ.
ರಾಜ್ಕುಮಾರ್ ಅವರ ಅಪಹರಣವಾದ ದಿನದಿಂದಲೂ ಅಂದರೆ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಚಿತ್ರೀಕರಣ, ಚಿತ್ರ ಪ್ರದರ್ಶನವೂ ಸೇರಿದಂತೆ ಕನ್ನಡ ಚಲನಚಿತ್ರ ರಂಗದ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಇತ್ತೀಚೆಗೆ ರಜನಿಯವರ ಸಂದೇಶದಿಂದ ಕನ್ನಡ ಚಿತ್ರೋದ್ಯಮ ಬಂದ್ ಆಚರಿಸುತ್ತಿರುವ ವಿಷಯ ತಿಳಿದ ರಾಜ್ಕುಮಾರ್ ಚಿತ್ರೋದ್ಯಮದ ಕೆಲಸ ಆರಂಭಿಸುವಂತೆ ಮನವಿ ಮಾಡಿದ್ದರು.
ರಾಜ್ ಅವರ ಮಾತಿನಲ್ಲಿ ನಮಗೆ ಗೌರವವಿದೆ ಆದರೂ ರಾಜ್ಕುಮಾರ್ ಅವರು ಹಿಂತಿರುಗಿ ಬರುವ ತನಕ ನಾವು ಚಿತ್ರೋದ್ಯಮದ ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳಲು ಸಿದ್ಧರಿಲ್ಲ ಎಂದು ವಾಣಿಜ್ಯ ಮಂಡಳಿ ಸ್ಪಷ್ಟ ಪಡಿಸಿತ್ತು. ಈ ಮಧ್ಯೆ ಚಿತ್ರ ಪ್ರದರ್ಶಕರ ಒತ್ತಡ ತಾಳಲಾರದೆ ಅನಿವಾರ್ಯವಾಗಿ ಮಂಡಳಿ ಗಣೇಶ ಚತುರ್ಥಿಯ ದಿನವಾದ ನಾಳೆಯಿಂದ ಚಿತ್ರ ಪ್ರದರ್ಶನ ಪುನಾರಂಭಿಸಲು ನಿರ್ಧರಿಸಿದೆ. ಈ ಬಗ್ಗೆ ಮಂಡಳಿಯ ಹೇಳಿಕೆ ಹೊರಬಿದ್ದಿದೆ.
ಕೊನೆ ಮಾತು : ದೊಡ್ಡಬಳ್ಳಾಪುರದ ಚಿತ್ರಮಂದಿರ ಒಂದರಲ್ಲಿ ಕಳೆದ ಒಂದು ವಾರದಿಂದಲೂ ಕನ್ನಡ ಚಲನಚಿತ್ರ ಒಂದರ ಪ್ರದರ್ಶನ ನಡೆಯುತ್ತಿದೆ. ಚಿತ್ರದ ಹೆಸರು : ಯಾರಿಗೆ ಸಾಲತ್ತೆ ಸಂಬಳ, ಚಿತ್ರಮಂದಿರ ಮಾಲಿಕರು : ಕೆ.ಸಿ.ಎನ್. ಚಂದ್ರಶೇಖರ್.