ಚಿತ್ರರಂಗದ ಚಟುವಟಿಕೆ ಆರಂಭಿಸದಂತೆ ವಾಣಿಜ್ಯ ಮಂಡಳಿಗೆ ಒತ್ತಡ
ಬೆಂಗಳೂರು : ರಾಜ್ಕುಮಾರ್ ಅವರೇ ಚಿತ್ರೋದ್ಯಮದ ಕೆಲಸ ಕಾರ್ಯ ಆರಂಭವಾಗಬೇಕು ಎಂದು ಪ್ರಾರ್ಥಿಸಿದ್ದರೂ, ರಾಜ್ ಅಭಿಮಾನಿಗಳು, ಚಿತ್ರರಂಗದ ಚಟುವಟಿಕೆ ಆರಂಭಿಸದಂತೆ ಶುಕ್ರವಾರ ವಾಣಿಜ್ಯ ಮಂಡಳಿಗೆ ಒತ್ತಡ ಹೇರಿದ್ದಾರೆ. ಇದಕ್ಕಾಗಿ ಮಂಡಳಿಯ ಎದುರು ಶುಕ್ರವಾರ ರಾಜ್ ಅಭಿಮಾನಿಗಳು ಹಾಗೂ ಕನ್ನಡ ಸಂಘ- ಸಂಸ್ಥೆಗಳ ಕಾರ್ಯಕರ್ತರು ಭಾರಿ ಪ್ರದರ್ಶನ ನಡೆಸಿದರು.
ಪ್ರತಿಭಟನಾಕಾರರನ್ನು ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಸಮಾಧಾನಪಡಿಸಿದರು. ರಾಜ್ ಅಭಿಮಾನಿಗಳ ಒತ್ತಾಯಕ್ಕೆ ಮನ್ನಣೆ ನೀಡಿರುವ ಮಂಡಳಿ ಇನ್ನೂ ಕೆಲ ಕಾಲ ಚಿತ್ರೋದ್ಯಮ ಬಂದ್ ಆಚರಿಸಲು ನಿರ್ಧರಿಸಿದೆ. ರಾಜ್ಕುಮಾರ್ ಅವರ ಮಾತುಗಳ ಮೇಲೆ ನಮಗೆ ಅಪಾರ ಗೌರವ ಇದೆ. ಆದಾಗ್ಯೂ ರಾಜ್ ಬರುವ ತನಕ ಚಿತ್ರೋದ್ಯಮದ ಕೆಲಸ ಕಾರ್ಯ ಮುಂದುವರಿಸಲು ಯಾರೂ ಇಚ್ಛಿಸುತ್ತಿಲ್ಲ . ಇದು ಸಾರ್ವತ್ರಿಕ ನಿರ್ಧಾರ ಎಂದು ಕೆ.ಸಿ.ಎನ್. ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಕುಮಾರ್ ಅವರ ಮನವಿಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಮಂಡಳಿಯ ತುರ್ತು ಸಭೆಯಲ್ಲಿ ಸಾ.ರಾ. ಗೋವಿಂದು, ರಾಕ್ಲೈನ್ ವೆಂಕಟೇಶ್, ನಿರ್ದೇಶಕ ಸಿದ್ಧಲಿಂಗಯ್ಯ, ರಾಮು, ಅಶೋಕ್ ಮುಂತಾದವರು ಪಾಲ್ಗೊಂಡಿದ್ದರು.
ತುರ್ತುನಿಧಿಯಿಂದ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ : ಚಿತ್ರೋದ್ಯಮದ ಕೆಲಸ ನಡೆಯುತ್ತಿಲ್ಲವಾದ್ದರಿಂದ ಕಾರ್ಮಿಕರು ಉಪವಾಸ ಬೀಳುವಂತಾಗಿರುವುದನ್ನು ಮನಗಂಡ ಉದ್ಯಮ ತುರ್ತುನಿಧಿಯಿಂದ ಶುಕ್ರವಾರದಿಂದಲೇ ಉಚಿತವಾಗಿ 10 ಕೆ.ಜಿ. ಅಕ್ಕಿ, ಒಂದು ಕೆ.ಜಿ. ಬೇಳೆ, ಸಕ್ಕರೆ ಹಾಗೂ ಅಡಿಗೆ ಅನಿಲ ಪೂರೈಸಲು ನಿರ್ಧರಿಸಿದೆ.
ಈ ವಿಷಯವನ್ನು ಕರ್ನಾಟಕ ಚಲನಚಿತ್ರ ಕಲಾವಿದರ, ತಂತ್ರಜ್ಞರ, ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಆಶೋಕ್ ತಿಳಿಸಿದ್ದಾರೆ.
ರಾಜ್ಕುಮಾರ್ ಕುಟುಂಬದಲ್ಲಿ ಹೆಚ್ಚಿದ ಕಳವಳ: ಈ ಮಧ್ಯೆ ರಾಜ್ಕುಮಾರ್ ಅವರ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ಅವರ ಕುಟುಂಬ ವರ್ಗದವರು ವ್ಯಾಕುಲಗೊಂಡಿದ್ದಾರೆ. ರಾಜ್ ಇಲ್ಲದ ನಿವಾಸಕ್ಕೆ ಅಭಿಮಾನಿಗಳು ಬಂದು ಹೋಗುತ್ತಿದ್ದಾರೆ. ರಾಜ್ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಆದರೂ ದುಗುಡ ಮನೆ ಮಾಡಿದೆ.
ಗುರುವಾರ ರಾತ್ರಿ ರಾಜ್ಕುಮಾರ್ ಅವರ ವಿಡಿಯೋ ಸಂದೇಶ ಬಿತ್ತರವಾದಾಗ, ಅವರ ಬಾಡಿದ ಮುಖ ನೋಡಿದ ಮೇಲಂತೂ ರಾಜ್ ಕುಟುಂಬದಲ್ಲಿ ಹೇಳಿಕೊಳ್ಳಲಾರದ ತಳಮಳ ಉಂಟಾಗಿದೆ. ಎಲ್ಲ ಪ್ರಯತ್ನಗಳೂ ಆದ ಮೇಲೆ ಈಗ ದೇವರ ಮೇಲೆ ಭಾರ ಹಾಕಿ ಕುಳಿತಿದ್ದಾರೆ. ಗೋಪಾಲ್ ಜತೆಯೇ ರಾಜ್ ಬರುತ್ತಾರೆಂದು ನಿರೀಕ್ಷಿಸಿದ್ದ ಪಾರ್ವತಮ್ಮ ರಾಜ್ಕುಮಾರ್ ಈಗ ಮಂಕಾಗಿದ್ದಾರೆ.