ವಾಸ್ತುವಿಗಾಗಿ ಸರಕಾರಿ ಹಣ ಖರ್ಚು ಮಾಡಿದ ಮುಖ್ಯಮಂತ್ರಿಗೆ ನೋಟೀಸ್
ಬೆಂಗಳೂರು : ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಅನುಗ್ರಹ’ದ ವಾಸ್ತು ಸರಿಪ-ಡಿ-ಸ-ಲು ಸರಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ನೋಟೀಸ್ ಜಾರಿ ಮಾಡಿದೆ.
ಸರಕಾರದ ಹಣವನ್ನು ವಾಸ್ತು ಹೆಸರಿನಲ್ಲಿ ಅವೈಜ್ಞಾನಿಕವಾಗಿ ಖರ್ಚು ಮಾಡಿರುವುದನ್ನು ಪ್ರಶ್ನಿಸಿ, ಬೆಂಗಳೂರಿನ ಜಿ.ಕೆ. ಗೋವಿಂದರಾವ್ ಮತ್ತು ದೊರೆ ಸ್ವಾಮಿ ಅವರು ಸಲ್ಲಿಸಿದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯ ಮೂರ್ತಿ ಅಶೋಕ್ ಭಾನ್ ಮತ್ತು ನ್ಯಾಯಮೂರ್ತಿ ಗುರುರಾಜನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೋಮವಾರ ವಿಚಾರಣೆಗೆ ಅಂಗೀಕರಿಸಿತು. ಕೋರ್ಟ್ , ಈ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಲೋಕೋಪಯೋಗಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಕಾರ್ಯದರ್ಶಿಗಳನ್ನು ಪ್ರತಿವಾದಿಗಳೆಂದು ಗುರುತಿಸಿದೆ.
ಅನುಗ್ರಹದ ವಾಸ್ತು ವಿನ್ಯಾಸವನ್ನು ಮುಖ್ಯ ಮಂತ್ರಿಗಳ ಆಸಕ್ತಿಗನುಗುಣವಾಗಿ ಬದಲಾಯಿಸಲಾಗಿದೆ. ಪ್ರತಿವಾದಿಗಳು ಪೂರ್ವಾಪರವಿಲ್ಲದೆ ಈ ನಿವಾಸದ ವಾಸ್ತು ಬದಲಾವಣೆಗಾಗಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 1.2 ಕೋಟಿ ರೂಪಾಯಿಗಳನ್ನು ಅವೈಜ್ಞಾನಿಕವಾಗಿ ಖರ್ಚು ಮಾಡಿದ್ದಾರೆ, ವಾಸ್ತು ಹೆಸರಿನಲ್ಲಿ ಈ ವರೆಗೆ ಖರ್ಚಾದ ಹಣದ ಲೆಕ್ಕಪತ್ರವನ್ನು ಕೋರ್ಟ್ ಮುಂದೆ ಹಾಜರು ಪಡಿಸಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿ ಸಿದ್ದಾರೆ.