ರಾಷ್ಟ್ರವ್ಯಾಪಿಯಾಗಿರುವ ನಕಲಿ ಛಾಪಾ ಕಾಗದ ಮಾರಾಟ ಜಾಲ?
ಬೆಂಗಳೂರು : ಆಗಸ್ಟ್ 20ರಂದು ಬಯಲಾದ ಬೃಹತ್ ನಕಲಿ ಛಾಪಾ ಕಾಗದ ಜಾಲದ ಸುದ್ದಿ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ದೂರುಗಳು ಹರಿಯುತ್ತಿವೆ : ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕುಗಳಿಂದ ತಿಳಿಯದೆ ಪಡೆದಿರುವ ರೆವಿನ್ಯೂ ಸ್ಟಾಂಪ್ಗಳಿರುವ ದಾಖಲೆಗಳು, ಛಾಪಾ ಕಾಗದಗಳು ನಕಲಿ ಆಗಿರುವ ಸಾಧ್ಯತೆ ಇದ್ದು, ಗ್ರಾಹಕರಿಂದ ದೂರುಗಳು ಹರಿದು ಬರುತ್ತಿದೆ. ಇದೊಂದು ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ ಎಂದು ಹಣಕಾಸು ಸಂಸ್ಥೆಗಳ ಅಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗೊಂದಲಕ್ಕೆ ಸಿಲುಕಿರುವ ಜನ : ಬ್ಯಾಂಕಿನ ಸಂಚಿತ ಠೇವಣಿ, ಜಮೀನು- ನಿವೇಶನಗಳ ನೋಂದಾವಣೆ, ಗುತ್ತಿಗೆ ದಾಖಲೆಗಳು, ಜಂಟಿ ವ್ಯವಹಾರ ಮುಂತಾದವುಗಳಿಗೆ ಛಾಪಾ ಕಾಗದ ಹಾಗೂ ರೆವಿನ್ಯೂ ಸ್ಟಾಂಂಪ್ಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಪೊಲೀಸರು ಪತ್ತೆ ಹಚ್ಚಿರುವ ಬೃಹತ್ ನಕಲಿ ಜಾಲದಿಂದ, ತಮ್ಮ ತಮ್ಮ ದಾಖಲೆಗಳು ಅಸಲಿಯೋ ನಕಲಿಯೋ ಎಂಬ ಆತಂಕ ಜನರಲ್ಲಿ ಮೂಡಿದ್ದು ನೋಂದಾವಣೆ ಕಚೇರಿಗಳಿಗೆ, ತಾಲೂಕು ಕಚೇರಿಗಳಿಗೆ ಹಾಗೂ ಬ್ಯಾಂಕುಗಳಿಗೆ ಎಡತಾಕುತ್ತಿದ್ದಾರೆ.
ಮಾಹಿತಿ ಹೆಕ್ಕಲು ಹೆಚ್ಚು ಸಮಯ ಬೇಕು : ‘ನಾವು ಬೇರೆ ರಾಜ್ಯಗಳಿಗೂ ಈ ನಕಲಿ ಜಾಲದ ಬಗೆಗೆ ತಿಳಿಸಿದ್ದೇವೆ. ಜಾಲದಲ್ಲಿ -ಭಾಗಿಯಾಗಿರುವ ಶ್ರೀ ಸಾಯಿ ಸ್ಟಾಂಪ್ ವೆಂಡರ್ಸ್ಗೆ ಮುಂಬೈನಿಂದ ನಕಲಿ ಛಾಪಾ ಕಾಗದ ಸರಬರಾಜಾಗಿರುವುದು ಪತ್ತೆಯಾಗಿದೆ. ಇದೇ ರೀತಿ ಬೇರೆ ಯಾವ ಯಾವ ರಾಜ್ಯಗಳಿಗೆ ನಕಲಿ ಛಾಪಾ ಕಾಗದಗಳು ಸರಬರಾಜಾಗಿವೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಈ ಜಾಲದ ಬಗೆಗೆ ವಿವರಣಾತ್ಮಕ ಮಾಹಿತಿ ಸಂಗ್ರಹಿಸಲು ಅನೇಕ ತಿಂಗಳುಗಳು ಬೇಕು’ ಎನ್ನುತ್ತಾರೆ ಹಗರಣದ ತನಿಖೆ ನಡೆಸುತ್ತಿರುವ ನಗರದ ಎಸಿಪಿ ಜಿ. ಎ.--ಬಾವ.
ಜನ ತಾವಾಗೇ ಬಂದು ಹೇಳಬೇಕು : ಮೋಸದ ವ್ಯವಹಾರ ನಡೆಸಿರುವ ಶ್ರೀ ಸಾಯಿ ಸ್ಟಾಂಪ್ ವೆಂಡರ್ನಿಂದ ಛಾಪಾ ಕಾಗದ ಹಾಗೂ ರೆವಿನ್ಯೂ ಸ್ಟಾಂಪ್ ಖರೀದಿಸಿರುವ ಜನ ತಾವಾಗೇ ಮುಂದೆ ಬಂದು ವಿಷಯ ತಿಳಿಸಬೇಕು. ಆದ್ದರಿಂದ ಮಾಹಿತಿ ಸಂಗ್ರಹಣೆ ಸಹಜವಾಗೇ ವಿಳಂಬವಾಗಲಿದೆ. ಬಹುರಾಷ್ಟ್ರೀಯ ಕಂಪನಿಗಳು, ವಿಮಾ ಕಂಪನಿಗಳು, ಬ್ಯಾಂಕುಗಳು, ಸರ್ಕಾರಿ ಕಚೇರಿಯಲ್ಲಿ ಜಮೀನು ಇತ್ಯಾದಿ ನೋಂದಾವಣೆ ಮಾಡಿಸಿರುವ ಜನ ನಕಲಿ ಛಾಪಾ ಕಾಗದಗಳನ್ನು ಖರೀದಿಸಿದ್ದಾರೆ ಎಂದಿದ್ದಾರೆ.
ನಗರ ಪೊಲೀಸರು 10 ಕೋಟಿ ರುಪಾಯಿ ಮೌಲ್ಯದ ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದ್ದು, 10 ಜನರನ್ನು ಬಂಧಿಸಿದ್ದಾರೆ. 34 ಲಕ್ಷ ರುಪಾಯಿ ಹಣವನ್ನೂ ವಶಪಡಿಸಿಕೊಂಡಿದ್ದಾರೆ. ಛಾಪಾ ಕಾಗದಗಳನ್ನು ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗಗಳಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದ್ದು, ಹೊರ ರಾಜ್ಯಗಳಲ್ಲೂ ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂದು ಎಸಿಪಿ ತಿಳಿಸಿದ್ದಾರೆ.
ಮುಂಬೈ ಪೊಲೀಸರಿಗೆ ಎಚ್ಚರ : ಮುಂಬೈನಿಂದ ನಕಲಿ ಛಾಪಾ ಕಾಗದಗಳನ್ನು ಸರಬರಾಜು ಮಾಡುತ್ತಿದ್ದ ಲಾರಾ ಎಂಬ ವ್ಯಕ್ತಿಯನ್ನು ಪತ್ತೆ ಹಚ್ಚಿ, ಬಂಧಿಸುವಂತೆ ಮುಂಬೈ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಕಳೆದ ಎಂಟು ತಿಂಗಳಿಂದ ಈ ಕಳ್ಳ ವ್ಯವಹಾರ ನಡೆದಿದ್ದು, ನಕಲಿ ಸರಕನ್ನು ಸಂಗ್ರಹಿಸಿಡಲಾಗಿದ್ದ ಮನೆಗೆ ನಡೆಸಿದ ಧಾಳಿಯಿಂದ ಪ್ರಕರಣ ಬಯಲಾಯಿತು ಎಂದು ಬಾವಾ ಹೇಳಿದ್ದಾರೆ.
(ಐಎ-ಎ-ನ್-ಎ-ಸ್)