ರಾಜ್ಯದೆಲ್ಲೆಡೆ ಮಳೆಯ ಮುನ್ಸೂಚನೆ
ಬೆಂಗಳೂರು : ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಕರಾವಳಿ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲಿ ಚದುರಿದಂತೆ ಮಳೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೋಟಾದಲ್ಲಿ 5 ಸೆಂಟಿ ಮೀಟರ್, ಬೆಳ್ತಂಗಡಿ, ಸುಬ್ರಹ್ಮಣ್ಯ, ಮೂಡಿಬಿದರೆ, ಕುಂದಾಪುರಗಳಲ್ಲಿ ತಲಾ 4 ಸೆಂಟಿ ಮೀಟರ್, ಬಾಗಮಂಡಲ, ಪುತ್ತೂರು, ಮಂಕಿ, ಶಿರಾಲಿಗಳಲ್ಲಿ ತಲಾ 3, ಬಂಟ್ವಾಳ, ಅಂಕೋಲ, ಶಿರಸಿ, ಬನವಾಸಿ, ಕಾರವಾರ, ಪಣಂಬೂರು, ಹಂಗಲ್, ಶಿರಾಳಕೊಪ್ಪಗಳಲ್ಲಿ ತಲಾ 2 ಸೆಂಟಿಮೀಟರ್ ಮಳೆ ಆಗಿದೆ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಕೂಡ ಚದುರಿದಂತೆ ಹಗುರವಾಗಿ ಮಳೆ ಆಗಿದೆ.
ಭಾನುವಾರದವರೆಗಿನ ಮುನ್ಸೂಚನೆಯಂತೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿ ಮಳೆ ಕರಾವಳಿಯಲ್ಲಿ ಬೀಳಲಿದೆ. ಒಳನಾಡಿನಲ್ಲೂ ಮಳೆಯ ನಿರೀಕ್ಷೆ ಇದೆ. ಕರಾವಳಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಳೆ ಬೀಳುವ ಸಂಭವ ಇದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳೂ ಇದಕ್ಕೆ ಹೊರತಾಗಿಲ್ಲ. ಅಂದರೆ ರಾಜ್ಯದೆಲ್ಲೆಡೆ ಮಳೆಯಾಗುವ ಮುನ್ಸೂಚನೆ ದೊರೆತಂತಾಗಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣ ಇದ್ದು, ಒಂದೆರಡು ವರಸೆ ಮಳೆ ಆಗಲಿದೆ.