ನಡೆದುಬಂದ ದಾರಿ
ಎರಡು ವಾರಗಳ ಮೊದಲೇ ಗಣೇಶನ ಹಬ್ಬದ ಸಂಭ್ರಮ ಹಳ್ಳಿಗಳ ಮನೆಗಳಲ್ಲಿ ಮೂಡಿದೆ. ಗೃಹಿಣಿಯರು ಅದರಲ್ಲೂ ನಮ್ಮ ಮನೆಯ ಅಜ್ಜಿಯರು, ಗಣೇಶನ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಅಗತ್ಯವಾದ ಗೆಜ್ಜೆ ವಸ್ತ್ರಗಳನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ. ಗಣೇಶನ ಹಬ್ಬದ ದಿನ ವಿವಾಹಿತ ಗಂಡಸರು, 21 ಎಳೆ ಹಾಗೂ 21 ಹಿಡಿಯ ಗೆಜ್ಜೆ ವಸ್ತ್ರಗಳನ್ನು ಗಣಪನಿಗೆ ಅರ್ಪಿಸುವುದು ಹಿಂದಿನಿಂದ ನಡೆದು ಬಂದ ಪದ್ಧತಿ. ಬ್ರಹ್ಮಚಾರಿಗಳು ಹಾಗೂ ಮಕ್ಕಳಿಂದ 16 ಹಿಡಿ ಹಾಗೂ ಹದಿನಾರು ಎಳೆಯ ಗೆಜ್ಜೆ - ವಸ್ತ್ರಗಳನ್ನು ಗಣಪನಿಗೆ ಸಮರ್ಪಿಸುತ್ತಾರೆ. ಹೀಗಾಗಿ ಈ ಗೆಜ್ಜೆ - ವಸ್ತ್ರಗಳ ಸಿದ್ಧತೆಯಲ್ಲಿ ಮನೆಯ ಹೆಂಗಸರು ನಿರತರಾಗಿದ್ದಾರೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ - ಧಾರವಾಡದಂತಹ ನಗರಗಳಲ್ಲಿ ಇಬ್ಬರೊಂದಾಗಿ ದುಡಿಯುವ ಮನೆಗಳಲ್ಲಿ ಗೆಜ್ಜೆ ವಸ್ತ್ರಗಳನ್ನು ಮಾಡಲು ಬಿಡುವಿಲ್ಲದೆ, ಮಾರುಕಟ್ಟೆಯ ಗ್ರಂಧಿಗೆ ಅಂಗಡಿಗಳಲ್ಲಿ ಸಿದ್ಧವಾಗಿ ಸಿಗುವ ಗೆಜ್ಜೆವಸ್ತ್ರಗಳನ್ನು ತರುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಾರುಕಟ್ಟೆಯ ಎಲ್ಲ ಗ್ರಂಧಿಗೆ ಅಂಗಡಿಗಳಲ್ಲೂ, ಗೆಜ್ಜೆ - ವಸ್ತ್ರ, ವರ್ತಿಯಿಂದ ಅಲಂಕರಿಸಲಾದ ಹತ್ತಿಯ ಹಾರಗಳು ಪ್ರದರ್ಶನಗೊಂಡಿವೆ.
ಗೌರಿ ಹಬ್ಬಕ್ಕೆ ಅಗತ್ಯವಾದ ಬಳೆ - ಬಿಚ್ಚೋಲೆ, ಹೊಸ ಮೊರಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಬಟ್ಟೆಯಂಗಡಿಗಳಲ್ಲಿ ಹೊಸ ನಮೂನೆಯ ಸೀರೆಗಳು, ಮಕ್ಕಳ ಬಟ್ಟೆಗಳು ಷೋಕೇಸ್ ಅಲಂಕರಿಸಿವೆ. ರಿಯಾಯಿತಿಯ ಭರಾಟೆಯೂ ಆಗಲೇ ಆರಂಭಗೊಂಡಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಈಬಾರಿ ಅಂತಹ ಪೈಪೋಟಿ ಕಾಣಬರುತ್ತಿಲ್ಲವಾದರೂ, ಸಂಪ್ರದಾಯದ ರೀತ್ಯ ನಡೆಯುವ ಎಲ್ಲ ಕಾರ್ಯಕ್ರಮಗಳೂ ಭರದಿಂದ ಸಾಗಿವೆ. ಬೆಲೆ ಏರಿಕೆಯ ಬಿಸಿ ಹಬ್ಬಕ್ಕೆ ಹನ್ನೆರಡು ದಿನ ಮೊದಲೇ ಮಾರುಕಟ್ಟೆಯನ್ನು ಹಾಗೂ ನಾಗರಿಕರನ್ನು ತಟ್ಟಿದೆ.
ಗಣೇಶನ ನೈವೇದ್ಯಕ್ಕಾಗಿ ಸಂಪ್ರದಾಯಸ್ಥರ ಮನೆಗಳಲ್ಲಿ ಆಗಲೇ ಮಡಿಯಲ್ಲಿ ಚಕ್ಕುಲಿ, ಕೋಡುಬಳೆ, ತೆಂಗೊಳಲು, ಮಸ್ಸೂರಿ, ಕಜ್ಜಾಯ, ಪಂಚಕಜ್ಜಾಯವೇ ಮುಂತಾದ ತಿಂಡಿಗಳ ತಯಾರಿಕೆ ನಡೆಯುತ್ತಿದೆ. ಸಿಹಿ ಅಂಗಡಿಗಳ ಮಾಲಿಕರು, ಹಬ್ಬಕ್ಕಾಗಿ ಹೊಸ ಬಗೆಯ ಸಿಹಿ ತಿಂಡಿಗಳ ತಯಾರಿಕೆಯ ಸಿದ್ಧತೆ ನಡೆಸಿದ್ದಾರೆ. ಬಳೆ ಅಂಗಡಿಗಳು, ಗ್ರಂಧಿಗೆ ಅಂಗಡಿಗಳಲ್ಲಿ ಗಣೇಶನ ಮಂಟಪಗಳು, ಬೆಂಡಿನಲ್ಲಿ ಮಾಡಿದ ಅಲಂಕಾರಿಕ ಸಾಧನಗಳು, ಕಾಗದದ ಹೂಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿವೆ.
ಬೀದಿ ಬೀದಿಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ, ತಮ್ಮ ಶಕ್ತ್ಯಾನುಸಾರ ಗಣೇಶನ ಕೂರಿಸುವ ತವಕದಲ್ಲಿ ಪುಟ್ಟ ಮಕ್ಕಳು ಸಹ, ಗೋಲಕಗಳನ್ನು ಹಿಡಿದು ರಸ್ತೆಯಲ್ಲಿ ಓಡಾಡುವ ಜನರಿಂದ ಕಾಣಿಕೆ ವಸೂಲಿಯಲ್ಲಿ ನಿರತರಾಗಿದ್ದಾರೆ. ಮೈಕ್ಸೆಟ್ ಹಾಗೂ ಸೀರಿಯಲ್ ಸೆಟ್ ಅಂಗಡಿಗಳಿಗೆ ಡಿಮ್ಯಾಂಡ್ ಬಂದಿದೆ. ಕುಳಿತಿರುವ, ನಿಂತಿರುವ, ಸರ್ಪಭೂಷಣನಾದ, ತ್ರಿಶೂಲ ಧಾರಿಯಾದ, ಸಿದ್ಧಿ ಬುದ್ಧಿಯರ ಸಹಿತನಾದ ಗಣೇಶನ ನೂರಾರು ಬಗೆಯ ಮಣ್ಣಿನ ಪ್ರತಿಮೆಗಳು ಮಾರುಕಟ್ಟೆಯ ಎಲ್ಲ ಅಂಗಡಿಗಳ ಮಂದೆಯೂ ಜೋಡಿಸಿಡಲಾಗಿದೆ. ನಾಲ್ಕಿಂಚಿನ ಗಣೇಶನಿಂದ ಹಿಡಿದು 14 ಅಡಿವರೆಗಿನ ಗಣೇಶ ಮಾರಾಟಕ್ಕೆ ನಿಂತಿದ್ದಾನೆ. ಕೆಲೆವೆಡೆ ಮಳೆಯಿಂದ ತಮ್ಮ ಗಣೇಶನಿಗೆ ತೊಂದರೆ ಆಗಬಾರದೆಂದು, ಪ್ಲಾಸ್ಟಿಕ್ ಹೊದೆಸಲಾಗಿದೆ.
ಗಣೇಶನ ಜತೆಗೆ ಪುಟ್ಟ - ಪುಟ್ಟ ಗೌರಿಯ ಪ್ರತಿಮೆಗಳೂ ಇವೆ. ಸಾಮಾನ್ಯವಾಗಿ ಎಲ್ಲರೂ ಮಣ್ಣಿನ ಗಣೇಶನನ್ನೇ ಆರಾಧಿಸುತ್ತರಾದರೂ, ಶಕ್ತಿ ಯುಳ್ಳವರು, ಬೆಳ್ಳಿಯ ಅಥವಾ ಚಿನ್ನದ ಇಲ್ಲವೇ ಪಂಚಲೋಹದ ಗಣೇಶನ ವಿಗ್ರಹಗಳನ್ನು ಪೂಜಿಸಿ, ಅದನ್ನು ಬ್ರಾಹ್ಮಣೋತ್ತಮರಿಗೆ ದಾನವಾಗಿ ನೀಡುತ್ತಾರೆ. ಇದಕ್ಕಾಗಿಯೇ 40 ರುಪಾಯಿಯಿಂದ ಹಿಡಿದು 4000 ರುಪಾಯಿವರೆಗಿನ ಗಣೇಶನ ವಿಗ್ರಹಗಳೂ ಚಿನಿವಾರರ ಅಂಗಡಿಗಳಿಗೆ ಬಂದಿವೆ. ಹೂವು, ಬಾಳೆ ಕಂದು ಹಾಗೂ ಮಾವಿನ ಸೊಪ್ಪು ಮಾತ್ರ ಮಾರುಕಟ್ಟೆಗೆ ಬರಬೇಕಷ್ಟೇ.
ರಾಜ್ಯದಲ್ಲಿ, ತುಮಕೂರು ಜಿಲ್ಲೆಯ ಗೂಳೂರು ಗಣೇಶ ಬಹು ಪ್ರಸಿದ್ಧಿ. ತಿಂಗಳು ಮುಂಚೆಯೇ ಕೆರೆಯಿಂದ ಮಣ್ಣು ತಂದು ಅಲ್ಲಿ ಗಣೇಶನ ವಿಗ್ರಹ ಮಾಡುತ್ತಾರೆ. ರಾಜ್ಯದ ಬಹುತೇಕ ಎಲ್ಲ ಊರುಗಳಲ್ಲೂ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಸಾಮೂಹಿಕ ಗಣೇಶನ ಪೂಜೆ ನಡೆಯುತ್ತದೆ. ಮುಂಬಯಿ ಹಾಗೂ ಹೈದರಾಬಾದ್ನಲ್ಲಂತೂ ಗಣೇಶೋತ್ಸವ ಬಲು ಜೋರು. ವಿಶ್ವಾದ್ಯಂತ ಗಣೇಶೋತ್ಸವಗಳು ನಡೆಯುತ್ತವೆ. ನಿಮ್ಮೂರಲ್ಲಿ ಹೇಗೆ? ವಿಶೇಷಗಳಿದ್ದರೆ ನಮಗೆ ಇ ಮೈಲ್ ಮಾಡಿ. ನಿಮ್ಮೂರಿನ ಗಣೇಶೋತ್ಸವದ ಸಂಭ್ರಮವನ್ನು ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿ.