ಎದ್ದು ಬರುತಿರುವ ಗಣಪನಿಗೆ ಮುಗಿಬಿದ್ದು ಸ್ವಾಗತ
ಬೆಂಗಳೂರು : ಗಣೇಶ ಬಂದ ಕಾಯಿ ಕಡುಬು ತಿಂದ, ಚಿಕ್ಕ ಕೆರೇಲಿ ಬಿದ್ದ , ದೊಡ್ಡ ಕೆರೇಲಿ ಎದ್ದ... ಒಕ್ಕೊರಲಿನಿಂದ ಹಾಡಿ ನಲಿಯುವ ಸಮಯ ಸನ್ನಿಹಿತವಾಗುತ್ತಿದೆ.
ಸೆಪ್ಟೆಂಬರ್ 1ರ ಶುಕ್ರವಾರ ಗಣೇಶ ಚತುರ್ಥಿ. ತಾಯಿಯ ಗೌರಿಯ ಜತೆಗೆ ಗಣೇಶ ಅಂದು ಎಲ್ಲರ ಮನೆ - ಮನಗಳಲ್ಲಿ ನೆಲೆಸಲಿದ್ದಾನೆ. ಗಣೇಶ ದೊಡ್ಡ ಕೆರೇಲಿ ಎದ್ದ ಎಂಬುದಕ್ಕೆ ವಿಶೇಷವಾದ ಅರ್ಥವಿದೆ. ಸಾಮಾನ್ಯವಾಗಿ ಭಾದ್ರಪದ ಶುಕ್ಲ ಚೌತಿಯಂದು ಎಲ್ಲರೂ ಪೂಜಿಸುವುದು ಮಣ್ಣಿನ ಗಣಪನನ್ನೇ. ಊರಿನ ದೊಡ್ಡ ಕೆರೆಯಲ್ಲಿನ ಜೇಡಿ ಮಣ್ಣನ್ನು ತಂದು, ಗಣೇಶನ ಮಾಡುವ ಮಂದಿ ಗಣೇಶನ ಮಣ್ಣಿನ ಪ್ರತಿಮೆಗಳನ್ನು ಮಾಡಿ ಅದಕ್ಕೆ ಬಣ್ಣ ಹಾಕುತ್ತಾರೆ. ಅಂಗಡಿಗಳಲ್ಲಿ ಇಟ್ಟು ಮಾರುತ್ತಾರೆ.
ಇನ್ನು ಗಣೇಶನ ಹಬ್ಬಕ್ಕೆ ಉಳಿದಿರುವುದು ಕೇವಲ 12 ದಿನ ಮಾತ್ರ. ಈಗ ಎಲ್ಲ ಊರುಗಳ ಮಾರುಕಟ್ಟೆಗಳಿಗೂ ಗಣೇಶ ಬಂದಿದ್ದಾನೆ. ವಿವಿಧ ಆಕೃತಿಯ ವಿವಿಧ ನಮೂನೆಯ ಗಣಪ ಪ್ರತಿ ವರ್ಷವೂ ಜನರನ್ನು ಆಕರ್ಷಿಸುತ್ತಾನೆ. ಕಳೆದ ವರ್ಷ ಕಾರ್ಗಿಲ್ ಯುದ್ಧದ ಗುಂಗಿನಿಂದ ಜನ ಹೊರ ಬಂದಿರಲೇ ಇಲ್ಲ. ಆಗ ಗಣಪ ಸೇನಾಪಡೆಯ ಧಿರಿಸು ಧರಿಸಿ, ಕೈಯಲ್ಲಿ ಕೋವಿ ಹಿಡಿದು, ಕಾರ್ಗಿಲ್ ವೀರಯೋಧನಂತೆ ಅವತಾರ ಎತ್ತಿದ್ದ.
ಈ ಬಾರಿ ಕನ್ನಡದ ಮೇರು ನಟ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದಾನೆ. ಗಣೇಶನ ಮಾಡುವವರ ಕಲ್ಪನೆಗೆ ಈ ಬಾರಿ ವೀರಪ್ಪನ್ ಸಿಕ್ಕಿದ್ದಾನೆ. ವೀರಪ್ಪನ್ನನ್ನು ತುಳಿದು ತನ್ನ ತಂದೆಯ ಆಯುಧ ತ್ರಿಶೂಲದಿಂದ ತಿವಿಯುತ್ತಿರುವ ಭಂಗಿಯ ಗಣೇಶನಿಂದ ಹಿಡಿದು, ರಾಜಕಾರಣಿಯ ರೂಪದಲ್ಲಿ, ಪಂಚಮುಖಿ, ಅಷ್ಟಮುಖಿ, ಏಕಮುಖಿ, ಬಲಮುರಿ, ಎಡಮುರಿ ಹೀಗೆ ನಾನಾ ಆಕಾರಗಳ ಗಣೇಶನ ಪ್ರತಿಮೆಗಳು ಅಂಗಡಿಗಳನ್ನು ಅಲಂಕರಿಸಿವೆ.
ರಾಜ್ ಅಪಹರಣದಿಂದ ರಾಜ್ಯದಲ್ಲಿ ಲವಲವಿಕೆ ಇಲ್ಲದಿದ್ದರೂ, ಗಣೇಶನ ಉತ್ಸವಗಳನ್ನು ನಡೆಸುವ ಗಣೇಶೋತ್ಸವ ಸಮಿತಿಗಳು ಆಗಲೇ ಚಂದಾ ವಸೂಲಿಯಲ್ಲಿ ನಿರತವಾಗಿವೆ. ತಮ್ಮ ಗಣೇಶೋತ್ಸವ ಕಾರ್ಯಕ್ರಮಕ್ಕಾಗಿ ವಾದ್ಯ ತಂಡದವರನ್ನು ಸಂಪರ್ಕಿಸಿ, ಮುಂಗಡ ನೀಡಿ, ದಿನಾಂಕವನ್ನೂ ಗೊತ್ತು ಪಡಿಸಿವೆ. ತಮ್ಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬರುವಂತೆ ಹಲವು ಚಿತ್ರನಟರನ್ನು ಕೋರಿಕೊಂಡಿವೆ. ಪೆಂಡಾಲ್ಗಳಿಗೆ ಆರ್ಡರ್ ಕೊಟ್ಟಿದ್ದಾರೆ. ನಾಟಕದ ತಂಡಗಳನ್ನು ಸಂಪರ್ಕಿಸಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...