ಧಾರವಾಡ ಆಕಾಶವಾಣಿಯಲ್ಲೂ ಹುಸಿ ಬಾಂಬ್ ಬೆದರಿಕೆ
ಹುಬ್ಬಳ್ಳಿ : ಬೆಂಗಳೂರು, ವಾಡಿ ಹಾಗೂ ಹುಬ್ಬಳ್ಳಿಯಲ್ಲಿ ಬಾಂಬ್ ಎಂದರೇ ಜನ ಭಯಪಡುತ್ತಾರೆ. ಈ ಪ್ರದೇಶಗಳ ಚರ್ಚ್ಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಮೇಲಂತೂ ಎಲ್ಲರ ಮನದಲ್ಲೂ ಆತಂಕ ಮೂಡಿದೆ. ಮೊನ್ನೆಯಷ್ಟೇ ಬೆಂಗಳೂರಿನ ಕೆಲವು ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ದೂರವಾಣಿ ಕರೆಗಳು ಬೆಂಗಳೂರನ್ನು ತಲ್ಲಣಗೊಳಿಸಿ, ಶಾಲೆಗಳಿಗೆ ರಜೆ ಘೋಷಿಸುವಂತೆ ಮಾಡಿದವು.
ಈಗ ಧಾರವಾಡದ ಸರದಿ. ಗುರುವಾರ ಬೆಳಗ್ಗೆ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಬಾಂಬ್ ಕರೆ ಕೆಲ ಕಾಲ ಗಲಿಬಿಲಿ ಉಂಟು ಮಾಡಿತು. ಬೆಳಗ್ಗೆ 8 ಗಂಟೆಗೇ ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ಬಂದ ಬಾಂಬ್ ಕರೆಯಿಂದ ಗಾಬರಿಗೊಂಡ ಆಕಾಶವಾಣಿಯ ಸಿಬ್ಬಂದಿ ತತ್ಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದರು.
ಕಾರ್ಯ ಪ್ರವೃತ್ತರಾದ ಪೊಲೀಸರು ಬಾಂಬ್ ನಿಷ್ಕಿೃಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದರು. ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ತಪಾಸಣೆಯ ನಂತರ ತಿಳಿಯಿತು. ಕರೆ ಎಲ್ಲಿಂದ ಬಂತು ಎಂಬುದು ಮಾತ್ರ ಪತ್ತೆಯಾಗಲಿಲ್ಲ. ಆದರೆ, ಸಿಬ್ಬಂದಿ ಹಾಗೂ ಕಾರ್ಯಕ್ರಮ ನಿಮಿತ್ತ ಬಂದ ಕಲಾವಿದರು ಬಾಗಿಲಲ್ಲೇ ನಿಲ್ಲುವಂತಾಯಿತು.
ಮುಖಪುಟ / ಊರು ಕೇರಿ