ಉರಿಯುವ ಮನೆಯಲ್ಲಿ ಗಳ ಎಳೆದುಕೊಳ್ಳುವ ರಾಜಕಾರಣ !!
ಬೆಂಗಳೂರು :ರಾಜ್ ಅಪಹರಣದ ವಿಷಯವಾಗಿ ಬೀದಿಕಾಳಗ ನಡೆಸುತ್ತಿರುವ ನಕ್ಕೀರನ್-ನೇಟ್ರಿಕ್ಕನ್ ಪತ್ರಿಕೆಗಳ ಜೊತೆಗೆ ಈಗ ರಾಜಕಾರಣಿಗಳು ಸೇರಿದ್ದಾರೆ.
ಅಪಹರಣದ 13 ದಿನಗಳ ನಂತರ ಗುಡುಗಿರುವ ಅನಿವಾಸಿ ಕನ್ನಡತಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಅಖಿಲ ಭಾರತ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ. ಜಯಲಲಿತಾ ಅವರಿಗೆ ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ತಿರುಗೇಟು ನೀಡಿದೆ.
ವೀರಪ್ಪನ್ ಹಾವಳಿಯನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಹತ್ತಿಕ್ಕಲಾಗಿತ್ತು. ಈಗ ಮತ್ತೆ ಬಲ ಹೆಚ್ಚಿಸಿಕೊಂಡಿರುವ ಕಾಡುಗಳ್ಳನ ಬೇಟೆಗೆ ಸೇನೆ ಕರೆಸಬೇಕು. ಅವನನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು. ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಜಯಲಲಿತಾ ಅಬ್ಬರಿಸಿದ್ದರು.
ರಾಜ್ ಬಿಡುಗಡೆಗೆ ಎಚ್ಚರಿಕೆಯ ಮತ್ತು ಜಾಣತನದ ನಿರ್ಧಾರ ಬಹುಮುಖ್ಯ. ಒಂದು ಎರಡೂ ಸರಕಾರಗಳು ಅವಿವೇಕತನದಿಂದ ನಿರ್ಧಾರ ತೆಗೆದುಕೊಂಡರೆ ಎರಡೂ ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುತ್ತದೆ ಟಿಪಿಸಿಸಿ ಅಧ್ಯಕ್ಷ ಇಳಂಗೋವನ್ ಹೇಳಿದ್ದಾರೆ.
ಪರಿಸ್ಥಿತಿ ಇವತ್ತು ಬಿಕ್ಕಟ್ಟಿನ ಸ್ಪರೂಪ ತಳೆದಿರುವಾಗ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವುದು ಸರಿಯಲ್ಲ. ಕರ್ನಾಟಕದಲ್ಲಿ ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆ, ಬೇಡವೆ ಎಂಬುದನ್ನು ನಿರ್ಧರಿಸುವವರು ಸೋನಿಯಾಗಾಂಧಿ, ಜಯಲಲಿತ ಅಲ್ಲ ಎಂದು ಛೇಡಿಸಿದ್ದಾರೆ.
ಹಾಗೆ ನೋಡಿದರೆ ಕಾಂಗ್ರೆಸ್ ಹಾಗು ಅಣ್ಣಾ ಡಿಎಂಕೆ ಮಿತ್ರ ಪಕ್ಷಗಳು. ರಾಜ್ ಅಪಹರಣ ಬಗ್ಗೆ ಅವೆರಡು ಪಕ್ಷಗಳು ವಿರುದ್ಧ ದಿಕ್ಕಿನಲ್ಲಿ ಹೇಳಿಕೆ ಕೊಡುತ್ತಿರುವುದರಿಂದ ಜಟಿಲ ವಿಷಯವೊಂದನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಂಡಂತಾಗಿದೆ. ಇದು ಮುಂದಿನ ದಿನಗಳಲ್ಲಿ ಮೈತ್ರಿಕೂಟದ ಮೇಲೆ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳೂ ಕಾಣತೊಡಗಿವೆ ಎಂದು ತಮಿಳು ನಾಡಿನ ರಾಜಕೀಯ ವಲಯಗಳಲ್ಲಿ ಹೇಳಲಾಗುತ್ತಿದೆ.
ಮತ್ತೊಬ್ಬ ಸಂಧಾನಕಾರನನ್ನು ಕಳಿಸುವುದಿಲ್ಲ-ಖರ್ಗೆ : (ಗುಲ್ಬರ್ಗಾ ವರದಿ) ನಕ್ಕಿರನ್ ಸಂಪಾದಕ ಗೋಪಾಲ್ ಎರಡೂ ರಾಜ್ಯಗಳ ಅಧಿಕೃತ ಸಂಧಾನಕಾರರಾಗಿದ್ದು, ಇನ್ನೊಬ್ಬ ಸಂಧಾನಕಾರನನ್ನು ಕಳಿಸುವ ಪ್ರಶ್ನೇಯ ಇಲ್ಲ ಎಂದು ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸಾತಂತ್ರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಈ ವಿಷಯ ತಿಳಿಸಿದರು.