ಸ್ವಾತಿ ಮಳೆಯ ಅನುಭವ
ಬೆಂಗಳೂರು : ಮೈಸೂರಿನಲ್ಲಿ ಸಾಧಾರಣ ಮಳೆ, ಹಗಲು ಹಾಗೂ ರಾತ್ರಿಯ ಉಷ್ಣಾಂಶದಲ್ಲಿ ಏರಿಳಿತ, ನೈಋತ್ಯ ದಿಕ್ಕಿನಿಂದ ಬೀಸುವ ಮಾರುತ, ಉತ್ತರ ಒಳನಾಡಿನ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನ ನಾನಾಕಡೆ ಮಳೆ ಇದಿಷ್ಟು ಬುಧವಾರ ದೊರೆತ ಹವಾಮಾನದ ವಿದ್ಯಮಾನ.
ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಆಗಿದೆ. ಉತ್ತರ ಒಳನಾಡಿನಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಮಳೆ ಸುರಿದಿದೆ. ಬುಧವಾರವೂ ಮೋಡ ಮುಸುಕಿದ ವಾತಾವರಣ ಸಣ್ಣನೆಯ ಸೋನೆ ಮಳೆ. ಸ್ವಾತಿ ಮಳೆಯ ಅನುಭವ ರಾಜ್ಯದ ಜನತೆಗೆ ಆಗಿದೆ.
ಕರಾವಳಿಯಲ್ಲೂ ಮಳೆ ಆಗಿದೆ, ಆಗುತ್ತಿದೆ. ದಕ್ಷಿಣ ಒಳನಾಡಿನಲ್ಲೂ ಹಗುರದಿಂದ - ಭಾರಿ ಮಳೆ ಬಿದ್ದಿದೆ. ಧರ್ಮಸ್ಥಳದಲ್ಲಿ 7 ಸೆಂಟಿ ಮೀಟರ್, ಹೊನ್ನಾವರ, ಬೆಳ್ತಂಗಡಿ, ಬಾಗೇವಾಡಿಗಳಲ್ಲಿ 6, ಉಡುಪಿ, ಬಿಜಾಪುರ, ಕೊಪ್ಪಳದಲ್ಲಿ 5 ಸೆಂಟಿ ಮೀಟರ್, ಗೌರಿಬಿದನೂರಿನಲ್ಲಿ 4, ಕೋಟ , ಅಂಕೋಲ, ಕಾರವಾರ, ಮೂಡಿಗೆರೆ, ಮಂಗಳೂರು, ಹಾಗೂ ಕೊಪ್ಪದಲ್ಲಿ 3, ಮಂಗಳೂರು ವಿಮಾನ ನಿಲ್ದಾಣ, ಯಲಬುರ್ಗ, ಕಮ್ಮರಡಿಗಳಲ್ಲಿ ತಲಾ 2 ಹೀಗೆ ಮಳೆಯ ಪಟ್ಟಿ ದೊಡ್ಡದಾಗುತ್ತಾ ಸಾಗುತ್ತಿದೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ಕೂಡ ರಾಜ್ಯದ ಅನೇಕ ಕಡೆಗಳಲ್ಲಿ ಮಳೆ ಬೀಳುತ್ತದೆ ಎನ್ನುತ್ತದೆ ಹವಾಮಾನ ಇಲಾಖೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ಇದ್ದು, ಬೆಳಗ್ಗಿನಿಂದಲೇ ತುಂತುರು ಮಳೆ ಆಗುವ ನಿರೀಕ್ಷೆ ಇದೆಯಂತೆ. ರೈನ್ ಕೋಟ್, ಕೊಡೆ ಎಲ್ಲ ರೆಡಿ ಮಾಡಿಕೊಳ್ಳಿ