ಮಳೆಯೋ ಮಳೆ, ಹಲವೆಡೆ ಮಳೆ
ಬೆಂಗಳೂರು : ಮತ್ತೆ ರಾಜ್ಯದಲ್ಲಿ ವರುಣನ ಕಾರುಭಾರು ಜೋರಾಗಿದೆ. ಕೆಲವು ದಿನದಿಂದ ಸೂರ್ಯನೆದುರು ಮಂಕಾಗಿದ್ದ ಮಳೆರಾಯ ಮತ್ತೆ ತನ್ನ ಪ್ರತಾಪ ಪ್ರದರ್ಶನಕ್ಕೆ ಮುಂದಾಗಿದ್ದಾನೆ. ಹೀಗಾಗಿ ಮುಂಗಾರು ಚುರುಕುಗೊಂಡಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮುಂಗಾರು ಬಲಗೊಂಡಿದ್ದರೆ, ಕರಾವಳಿ ಕರ್ನಾಟಕದಲ್ಲಿ ದುರ್ಬಲವಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 14 ಸೆಂಟಿ ಮೀಟರ್ ಮಳೆ ಬಂಡಿಪುರದಲ್ಲಿ ಬಿದ್ದಿದೆ. ಚೆನ್ನರಾಯಪಟ್ಟಣದಲ್ಲಿ 8, ತರಿಕೆರೆಯಲ್ಲಿ 7, ಶಿರಾ, ಮೊಳಕಾಲ್ಮುರುಗಳಲ್ಲಿ ತಲಾ 6, ಶ್ರವಣಬೆಳಗೊಳ, ಮೈಸೂರಿನಲ್ಲಿ ತಲಾ 5 ಸೆಂಟಿ ಮೀಟರ್ ಮಳೆ ಆಗಿದೆ. ಕುಣಿಗಲ್ನಲ್ಲಿ 4, ರಾಮನಗರ, ಕೊಳ್ಳೆಗಾಲದಲ್ಲಿ 3 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಮುನ್ಸೂಚನೆಯಂತೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಗುಡುಗು ಸಹಿತ ಸುರಿಮಳೆ ಬೀಳುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಆಗುವ ಸಂಭವ ಇದ್ದು, ತಗ್ಗು ಪ್ರದೇಶದ ಜನರಿಗೆ ಮುನ್ನೆಚ್ಚರಿಕೆಯನ್ನು ಸಹ ನೀಡಲಾಗಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿಯ ವೇಳೆ ಒಂದೆರಡು ಬಾರಿ ಮಳೆ ಬೀಳುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.