ಬ್ಯಾಂಕ್ ಖಾತೆ ಮೂಲಕ ಹಣ ಪಡೆದಿದ್ದೇ ರಾಧಿಕಾ ಕುಮಾರಸ್ವಾಮಿಗೆ ಶ್ರೀ ರಕ್ಷೆ?
ಬೆಂಗಳೂರು, ಜನವರಿ 08: ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಸುದೀರ್ಘ ವಿಚಾರಣೆ ನಡೆಸಿದರು. ರಾಧಿಕಾ ಕುಮಾರಸ್ವಾಮಿ ನೀಡಿರುವ ಹೇಳಿಕೆ ಆಧರಿಸಿ ಸ್ವಾಮಿ ವಂಚನೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ರಾಧಿಕಾ ಕುಮಾರಸ್ವಾಮಿ ಬ್ಯಾಂಕ್ ಖಾತೆಗೆ ಯುವರಾಜ್ ಬ್ಯಾಂಕ್ ಖಾತೆಯಿಂದ ಹಣ ಹೋಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಎಸಿಪಿ ನಾಗರಾಜ್ ಅವರು ಶುಕ್ರವಾರ ಹನ್ನೊಂದು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗದಿದ್ದಲ್ಲಿ ಸಂಕಷ್ಟ ಎದುರಾಗಬಹುದು ಎಂದು ಅರಿತಿದ್ದ ರಾಧಿಕಾ ಕುಮಾರಸ್ವಾಮಿ ಸಮಯಕ್ಕೆ ಸರಿಯಾಗಿಯೇ ವಿಚಾರಣೆಗೆ ಹಾಜರಾದರು. ಸತತ ನಾಲ್ಕು ತಾಸು ರಾಧಿಕಾ ಅವರನ್ನು ಸಿಸಿಬಿ ಎಸಿಪಿ ನಾಗರಾಜ್ , ಇನ್ಸ್ಪೆಕ್ಟರ್ ಅಂಜುಮಾಲಾ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಕೊನೆ ಹಂತದಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆಗಮಿಸಿ ಯುವರಾಜ್ ಪ್ರಕರಣದ ಮಾಹಿತಿ ಪಡೆದುಕೊಂಡರು.
ಹಣದ ಬಗ್ಗೆ ಪ್ರಶ್ನೆ
ಸಿಸಿಬಿ ಪೊಲೀಸರು ರಾಧಿಕಾ ಅವರನ್ನು ಕೇವಲ ಯುವರಾಜ್ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿರುವ ಸಂಗತಿಗೆ ಸೀಮಿತವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ರಾಧಿಕಾ ಸಮರ್ಥ ಉತ್ತರ ನೀಡಿದ್ದು, ಯುವರಾಜ್ ಅವರ ಖಾತೆಯಿಂದ ಹಣ ಬಂದಿರುವುದು ನಿಜ ಎಂಬುದನ್ನು ರಾಧಿಕಾ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಸಿನಿಮಾ ನಿರ್ಮಾಣಕ್ಕಾಗಿ ಹಣ ಕೇಳಿದ್ದು ವಾಸ್ತವ. ನಾನು ಹಣ ಪಡೆಯುವ ಮೊದಲೇ ನಮ್ಮ ಬ್ಯಾನರ್ ನೋಂದಣಿಗೆ ನಾವೇ ಮೊದಲು ಹದಿನೈದು ಲಕ್ಷ ಕೊಟ್ಟಿದ್ದೆವು. ಹೀಗೆ ಮೊದಲಿನಿಂದಲೂ ಕೊಟ್ಟು ತೆಗೆದುಕೊಳ್ಳುವ ವಹಿವಾಟು ನಡೆಯುತ್ತಿತ್ತು. ಸಿನಿಮಾ ನಿರ್ದೇಶನಕ್ಕಾಗಿ ನಾನು ಹಣ ಪಡೆದಿದ್ದು, ಅದನ್ನು ಬ್ಯಾಂಕ್ ಮೂಲಕವೇ ಪಡೆದುಕೊಂಡಿದ್ದಾನೆ. ಅವರ ವಂಚನೆ ಬಗ್ಗೆಯಾಗಲೀ, ಅಕ್ರಮಗಳ ಬಗ್ಗೆಯಾಗಲೀ ನನಗೆ ಏನೂ ತಿಳಿದಿಲ್ಲ. ನಾನು ಬ್ಯಾಂಕ್ ಮೂಲಕ ಹಣವನ್ನು ಕಾನೂನು ಬದ್ಧ ಮಾರ್ಗದಲ್ಲಿ ಪಡೆದುಕೊಂಡಿದ್ದೇನೆ. ಕೇಳಿದರೆ ಪಾವತಿಸಲು ಸಿದ್ಧನಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ.
ಮೆಡಿಕಲ್ ಸೀಟು ದಂಧೆ ಪ್ರಕರಣ, ರಾಧಿಕಾ ಕುಮಾರಸ್ವಾಮಿ ವಿವಾದ
ಇನ್ನು ವಿಚಾರಣೆ ಮುಗಿಸಿ ಹೊರ ಬಂದ ರಾಧಿಕಾ ಕುಮಾರಸ್ವಾಮಿ, ನಾನು ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಬರುತ್ತೇನೆ. ನಾನು ಎಲ್ಲಿಯೂ ಓಡಿ ಹೋಗಲ್ಲ. ಹೋಗುವುದು ಇಲ್ಲ. ಮೊನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ ಸಂಗತಿಯಷ್ಟೇ ವಾಸ್ತವ ಎಂದು ಧೈರ್ಯದಿಂದಲೇ ಹೇಳಿ ಮೈಸೂರು ರಸ್ತೆಯ ಕಡೆ ಹೊರಟರು. ಇದಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ , ಪ್ರಕರಣದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅದರ ಭಾಗವಾಗಿಯೇ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿ ಹೊರ ನಡೆದರು.
ಸಾಕ್ಷಿ ಆಗ್ತಾರಾ ರಾಧಿಕಾ
ಇನ್ನು ಈ ಪ್ರಕರಣದ ಆಳ- ಅಂತರವನ್ನು ಕಾನೂನು ದೃಷ್ಟಿಯಲ್ಲಿ ನೋಡಿದರೆ, ರಾಧಿಕಾ ಸಿನಿಮಾ ವಿಚಾರವಾಗಿ ಬಾಯಿ ಮಾತಿನ ಮೂಲಕವೇ ಒಪ್ಪಂದ ಮಾಡಿಕೊಂಡು ಹಣ ಪಡೆದಿರಬಹುದು. ಆದರೆ ಆಕೆ ಬ್ಯಾಂಕ್ ಮೂಲಕವೇ ಹಣ ಪಡೆದಿದ್ದಾರೆ. ಹೀಗಾಗಿ ಒಂದು ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಮಹತ್ವ. ಸ್ವಾಮಿ ಜತೆಗೂಡಿ ಸಂಚು ರೂಪಿಸಿ ಹಣ ಪಡೆದು ಮೋಸ ಮಾಡಿದ ಪ್ರಕರಣದಲ್ಲಿ ಹಣದ ಪಾಲು ಪಡೆದಿದ್ದರೆ, ರಾಧಿಕಾ ಆರೋಪಿ ಸಾಧ್ಯತೆಯಿದೆ. ಆದರೆ ಸ್ವಾಮಿ ಹೇಳುವ ಹೇಳಿಕೆಯೊಂದನ್ನೇ ಆಧರಿಸಿ ರಾಧಿಕಾ ಅವರನ್ನು ಆರೋಪಿ ಎಂದು ಸಿಸಿಬಿ ಪೊಲೀಸರು ಪರಿಗಣಿಸಲು ಸಾಧ್ಯವಿಲ್ಲ. ಭಾರತೀಯ ಸಾಕ್ಷ ಅಧಿನಿಯಮದ ಪ್ರಕಾರ ಆರೋಪಿಯ ಹೇಳಿಕೆಗೆ ನ್ಯಾಯಾಲಯ ಮಾನ್ಯತೆ ನೀಡುವುದಿಲ್ಲ. ಆರೋಪಿ ಹೇಳುವ ಹೇಳಿಕೆಗೆ ಸಾಂದರ್ಭಿಕ ಸಾಕ್ಷಿಗಳು ಲಭ್ಯವಾಗಬೇಕು ಎಂದು ಹಿರಿಯ ವಕೀಲ ವಿ. ಶಂಕರಪ್ಪ ಒನ್ ಇಂಡಿಯಾ ಕನ್ನಡಕ್ಕೆ ಪ್ರಕರಣದ ಬಗ್ಗೆ ಸ್ಪಷ್ಟಪಡಿಸಿದರು.
ಕಾನೂನಿನಲ್ಲಿಮಾನ್ಯವಿಲ್ಲ
ಇದಕ್ಕಿಂತಲೂ ಮುಖ್ಯ ವಿಚಾರವೆಂದರೆ ಸ್ವಾಮಿ ಅವರಿಗೆ ರಾಧಿಕಾ ಹಣ ಕೇಳಿರಬಹುದು. ಸ್ವಾಮಿ ಸೂಚನೆಯಂತೆ ಬೇರೆ ಯಾರೋ ರಾಧಿಕಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರಬಹುದು. ಆದರೆ, ಹಾಗಂತ ರಾಧಿಕಾ ಇಲ್ಲಿ ಆರೋಪಿ ಎನ್ನಲು ಸಾಧ್ಯವಿಲ್ಲ. ಸ್ವಾಮಿ ರೂಪಿಸಿರುವ ಸಂಚಿನಲ್ಲಿ ಭಾಗಿಯಾಗಿದ್ದರೆ, ಆತ ವಂಚಿಸಿ ಪಡೆದ ಹಣ ಎಂದು ಗೊತ್ತಿದ್ದು, ಅದರಲ್ಲಿ ಪಾಲು ಪಡೆದರೆ ಮಾತ್ರ ರಾಧಿಕಾ ಅವರಿಗೆ ಕಂಟಕವಾಗಲಿದೆ. ಈ ಪ್ರಕರಣದಲ್ಲಿ ರಾಧಿಕಾ ಅವರನ್ನು ಹೇಳಿಕೆ ಪಡೆದು ಅವರು ನೀಡುವ ಆಧಾರದ ಮೇಲೆ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಬಹುದು. ರಾಧಿಕಾ ಅವರು ಬ್ಯಾಂಕ್ ಮೂಲಕ ಹಣ ಪಡೆದಿರುವುದರಿಂದ ಬಚಾವ್ ಆಗಿದ್ದಾರೆ. ಅದೇ ಬೇನಾಮಿಯಾಗಿ ಇನ್ಯಾವುದೋ ರೂಪದಲ್ಲಿ ಹಣ ಪಡೆದು, ಅದು ಬೇರೆ ಮಾರ್ಗಗಳ ಮೂಲಕ ತಲುಪಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗುತ್ತಿತ್ತು ಎಂದು ಹಿರಿಯ ವಕೀಲರು ತಿಳಿಸಿದರು.
ನಕಲಿರಾಜನ ಬ್ಯಾಂಕ್ ಖಾತೆಯಿಂದ ನಟಿ ರಾಧಿಕಾ ಖಾತೆಗೆ ಕೋಟಿ ರೂ. ವರ್ಗ
ಡೀಲ್ ಪತ್ತೆ ಆದ್ರೆ ಕಷ್ಟ
ಸ್ವಾಮಿಯ ವಿರುದ್ಧ ಈವರೆಗೂ ಎಂಟು ವಂಚನೆ ಪ್ರಕರಣ ದಾಖಲಾಗಿವೆ. ಅಷ್ಟೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎಲ್ಲಾ ಕರೆಗಳ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಕೆಲವು ನಟಿಮಣಿಯರ ಬ್ಯಾಂಕ್ ಖಾತೆಗೆ ಸ್ವಾಮಿ ಹಣ ಹಾಕಿದ್ದಾನೆ ಎಂಬ ಮಾತುಗಳು ಹರಿದಾಡುತ್ತಿವೆ. ಉತ್ತರ ಕರ್ನಾಟಕದ ರಾಜಕಾರಣಿಯನ್ನು ಭೇಟಿ ಮಾಡುವ ಸಂಬಂಧ ಟೋಪಿ ಸ್ವಾಮಿ ರಾಧಿಕಾ ಕುಮಾರಸ್ವಾಮಿ ಜತೆ ಮಾತನಾಡಿದ್ದಾರೆ. ಆ ಅಡಿಯೋ ಮಹತ್ವ ಪಡೆದುಕೊಂಡಿದೆ. ಉತ್ತರ ಕರ್ನಾಟಕದ ರಾಜಕಾರಣಿಯಾರು ಎಂಬ ಪ್ರಶ್ನೆಗಳೆಲ್ಲಾ ಹುಟ್ಟಿಕೊಂಡಿವೆ. ವಾಸ್ತವದಲ್ಲಿ ಈವರೆಗೂ ಸ್ವಾಮಿ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಯಾವುದೇ ರೂಪದಲ್ಲಿ ಸ್ವಾಮಿಯಿಂದ ಲಾಭ ಪಡೆದುಕೊಂಡಿದ್ದರಷ್ಟೆ ಸಂಕಷ್ಟ ಎದುರಾಗಲಿದೆ ಎನ್ನುತ್ತಾರೆ ಕಾನೂನು ತಜ್ಞರು.
ಕುಮಾರಸ್ವಾಮಿಗೆ ಹೊಡೆತ
ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆ ಯಿಂದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಪದೇ ಪದೇ ರಾಧಿಕಾ ಕುಮಾರಸ್ವಾಮಿ ಎಂಬ ಹೆಸರು ಬರುತ್ತಿರುವುದರಿಂದ ಪ್ರತಿ ನಿತ್ಯ ಕುಮಾರಸ್ವಾಮಿ ಅವರ ಹೆಸರು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ರಾಜಕೀಯ ಬೆಳವಣಿಗೆಯಿಂದ ಅಸಮಾಧಾನಗೊಂಡು ತನ್ನ ವರ್ಚಸ್ಸಿನ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ ಹೆಸರು ಇದೀಗ ಸಿಸಿಬಿ ತನಿಖಾ ಪುಟಗಳಲ್ಲಿ ರಾಧಿಕಾ ಹೆಸರಿನ ಮುಂದೆ ಸೇರ್ಪಡೆಯಾಗುತ್ತಿದೆ. ಕುಮಾರಸ್ವಾಮಿ ರಾಜಕೀಯ ವಿರೋಧಿಗಳಿಗೆ ಇಷ್ಟೇ ಸಾಕು ಎಂಬ ಮಾತುಗಳು ಹರಿದಾಡುತ್ತಿವೆ.