ತಮ್ಮ ನೆಲದ ಋಣ ತೀರಿಸಲು ಹೊರಟ ಅರುಣಾಚಲದ ಯುವಕರು
ಇಟಾನಗರ, ಜುಲೈ 12: ಈಶಾನ್ಯ ರಾಜ್ಯಗಳು ಆಧುನಿಕ ಸೌಲಭ್ಯಗಳಿಂದ, ಅಬಿವೃದ್ಧಿಯಿಂದ ಎಷ್ಟೇ ವಂಚಿತರಾಗಿದ್ದರೂ ಅಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮಾತ್ರ ಮರುಳಾಗದವರಿಲ್ಲ.
ಅಷ್ಟೇ ಅಲ್ಲ, ಅಲ್ಲಿನ ಜನರಿಗೆ ತಮ್ಮ ನೆಲದ ಮೇಲಿರುವ ಪ್ರೀತಿಯಂತೂ ಅಪರಿಮಿತ. ಅಲ್ಲಿಗೆ ಪ್ರವಾಸಕ್ಕೆ ಹೋಗುವ ಜನರಿಗೆ ಅಲ್ಲಿನ ಜನ ತಮ್ಮ ನೆಲದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಕಂಡರೆ ಅದೆಷ್ಟು ಪುಣ್ಯ ಭೂಮಿ ಅನ್ನಿಸದಿರದು.
ಅಂಥ ಸುಂದರ ಅರುಣಾಚಲ ಪ್ರದೇಶದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಪರಿಚಯಿಸುವ, ಅವುಗಳ ಬಗ್ಗೆ ಅಭಿಮಾನ ಮೂಡಿಸುವ ಹಬ್ಬವೊಂದನ್ನು ಆಗಸ್ಟ್ 5 ರಂದು ಆಚರಿಸಲಾಗುತ್ತಿದೆ.

ಇದರ ವಿಶೇಷತೆ ಏನು ಎಂದರೆ, ಈ ಉತ್ಸವ ಪರಿಕಲ್ಪನೆ ಹುಟ್ಟಿದ್ದು, ಉತ್ತಮ ವೃತ್ತಿಯಲ್ಲಿರುವ 15 ಜನ ಯುವಕರಿಗೆ. ತಮ್ಮ ರಾಜ್ಯದ ಬಗ್ಗೆ ಅಪರಿಮಿತ ಗೌರವ, ಅಭಿಮಾನ ಹೊಂದಿರುವ ಇವರು ಈ ಉತ್ಸವವನ್ನು ಆಯೋಜಿಸಿದ್ದಾರೆ. ಈ ಉತ್ಸವದಲ್ಲಿ ಮುಖ್ಯವಾಗಿ ಅರುಣಾಚಲ ಪ್ರದೇಶದ ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಕಲೆ ಮುಂತಾದವುಗಳ ಪ್ರದರ್ಶನ ಇರಲಿದೆ. ಈ ಕಾರ್ಯಕ್ರಮ ಎರಡು ದಿನ ನಡೆಯಲಿದ್ದು ಅರುಣಾಚಲ ಪ್ರದೇಶದ ಕುರಿತು ಅಭಿಮಾನ ಮೂಡಿಸುವ ಕೆಲಸ ಮಾಡಲಿದೆ.
ತಮ್ಮ ವೃತ್ತಿ, ವೈಯಕ್ತಿಕ ಬದುಕು ಇವಿಷ್ಟಕ್ಕೇ ಮೀಸಲಾಗಿರದೆ, ತಮ್ಮ ರಾಜ್ಯದ ಕೀರ್ತಿಯನ್ನು ಎಲ್ಲೆಡೆ ಪಸರಿಸುವ, ಅದನ್ನು ಒಂದಷ್ಟು ಜನಕ್ಕೆ ಪರಿಚಯಿಸುವುದಕ್ಕೆ ಮುಂದಾಗಿರುವ ಈ ಯುವಕರು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯೇ ಅಲ್ಲವೇ?
ಈ ಮೂಲಕವಾದರೂ ಜನ್ಮ ನೀಡಿದ ನೆಲದ ಋಣವನ್ನು ತೀರಿಸುವ ಕಿರು ಪ್ರಯತ್ನ ಮಾಡುತ್ತಿರುವ ಅವರಿಗೆ ನಮ್ಮ ನಮನ.












Click it and Unblock the Notifications