ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 7)
(ಕಥೆಯ ಮುಂದಿನ ಭಾಗ) ಮೈಸೂರಿನ ಓಪನ್ ಏರ್ ಥಿಯೇಟರ್ ಮುಂದಿನ ರಸ್ತೆ ಮುಚ್ಚಲಾಗಿತ್ತು. ಈ ರಾತ್ರಿ ಸುಮಾರು ಇಪ್ಪತ್ತು ಸಾವಿರ ಮಂದಿ ಅಲ್ಲಿ ಸೇರಿದ್ದರು. ಕೆಲವರಿಗೆ ಮಾತ್ರ ಸೀಟ್ ಸಿಕ್ಕಿತ್ತು. ಬಾಕಿಯವರೆಲ್ಲಾ ನಿಂತಲ್ಲೇ ಗಲಾಟೆಯೋ ಗಲಾಟೆ! ಸಾಮಾನ್ಯವಾಗಿ ಶಾಂತವಾದ ಮಾನಸಗಂಗೋತ್ರಿಯಲ್ಲಿ ಈ ರಾತ್ರಿ ಹಳ್ಳಿ ಜಾತ್ರೆಯ ಸಂಭ್ರಮ. ಕಾರ್ಯಕ್ರಮ ಆರಂಭವಾಗಲು ಸ್ವಲ್ಪ ತಡವಾಗಿತ್ತು. ಮುಖ್ಯ ಅತಿಥಿಗಳೆಲ್ಲಾ ವೇದಿಕೆಯ ಮೇಲೆ ಬಂದು ಆಸೀನರಾದ ತಕ್ಷಣ, ನಿರೂಪಕಿ, ತನ್ನ ಆಕರ್ಷಣೀಯ ಧ್ವನಿಯಲ್ಲಿ, ಕಾರ್ಯಕ್ರಮವನ್ನು ಪ್ರಾರಂಭಿಸಿದಳು - "ಈ ಸಂಜೆ ನಾವೆಲ್ಲಾ ಸೇರಿರುವುದು ಒಬ್ಬ ಸಾಮಾನ್ಯ ವ್ಯಕ್ತಿಯ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಅಲ್ಲ. ಕನ್ನಡ ಚಲನಚಿತ್ರ ರಂಗದ ತಾರಾ ಲೋಕದಲ್ಲಿ ಜಗಮಗಿಸುವ ಹೆಸರುಗಳು ಹಲವು. ಆದರೆ ಹದಿನೈದು ವರ್ಷಗಳ ಹಿಂದೆ, ಕನ್ನಡಿಗರ ಮನದಲ್ಲಿ ಹುಟ್ಟಿದ ಹೊಸ ಹೆಸರು: ಕರ್ಣ".
ಇದನ್ನು ಕೇಳುತ್ತಿದ್ದಂತೆಯೇ ಜನರೆಲ್ಲಾ ಹುಚ್ಚೆದ್ದರು. ನಿರೂಪಕಿಯ ಧ್ವನಿ ಸೀಟಿ ಕೂಗುಗಳ ಮಧ್ಯದಲ್ಲಿ ಮುಳುಗಿ ಹೋಯಿತು. ಹಾಗೆಯೇ ಮುಂದುವರೆದಳು, "ರಂಗಶಂಕರದ ಪ್ರತಿಭೆಯಾದ ಕರ್ಣ, ಮೊದಲು ಬೀದಿನಾಟಕಗಳಲ್ಲಿ ಭಾಗವಹಿಸಿದರು. ನಂತರ "ನಟನ ವ್ಯಾಘ್ರ" ಕುಡಿಗಾಲು ಸಿದ್ಧಯ್ಯನವರು ಕರ್ಣನ ಪ್ರತಿಭೆಯನ್ನು ಗುರುತಿಸಿ, ಹದಿನೈದು ರಂಗನಾಟಕಗಳಲ್ಲಿ, ವಿಭಿನ್ನ ಪಾತ್ರಗಳಲ್ಲಿ ಅವರನ್ನು ನಿರ್ದೇಶಿಸಿದರು. ಈ ರಂಗ ಪ್ರತಿಭೆಯನ್ನು ಕಂಡ ಖ್ಯಾತ ಸಿನಿಮ ನಿರ್ದೇಶಕ ಸಿವಿ ಕೇಸಂ ಕರ್ಣನಿಗೆ, "ಬೆಳ್ಳಂದೂರಿನ ನರಭಕ್ಷಕ" ಎಂಬ ಕಥೆ ಆಧಾರಿತ ಚಿತ್ರದಲ್ಲಿ ನಾಯಕ ಪಾತ್ರವನ್ನು ನೀಡಿ, ಅವರನ್ನು ಸಿನಿಮಾ ಲೋಕಕ್ಕೆ ಸ್ವಾಗತಿಸಿದರು. ಯಾವುದೇ ಪ್ರಚಾರವಿಲ್ಲದೆ ಬಿಡುಗಡೆಯಾದ ಈ ಚಿತ್ರ, ಹಲವು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ನೂರನೇ ದಿನದ ಸಂಭ್ರಮವನ್ನು ದೊರಕಿಸಿತು.

ಇದರಿಂದ ಆರಂಭವಾದ "ಕರ್ಣರಾಜ್ಯ" ಈವತ್ತಿನವರೆಗೂ ಭರ್ಜರಿಯಾಗಿ ಸಾಗುತ್ತಿದೆ - ಕಾಮಿಡಿ ಚಿತ್ರಗಳಾದ "ಪಲ್ಲೇಶಿ ಪ್ರಸಂಗ", "ಡಿಸ್ಕೋ ಶೇಕರ್", ಥ್ರಿಲ್ಲರ್ ಗಳಾದ "ಭಾಸ್ಕರದ್ಯುತಿಹಿ", "ಜರ್ಮೇನಿಯಮ್", ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಂತಹ "ಪನ್ನೀರು", "ಕಾಮತ್ತಿನ ಮೋಟರ್ಸೈಕಲ್"ಗಳಲ್ಲಿ ಭವ್ಯ ಅಭಿನಯ ನೀಡಿ, ಕರ್ಣ ಕನ್ನಡಿಗರನ್ನು ಮನರಂಜಿಸಿದ್ದಾರೆ. ಅವರ ಐತಿಹಾಸಿಕ-ಪ್ರೇಮ ಚಿತ್ರ "ಬಾಜಿರಾವ್" ಒಂದು ವರ್ಷ ಚಿತ್ರಮಂದಿರಗಳಲ್ಲಿ ಸತತವಾಗಿ ಪ್ರದರ್ಶನಗೊಂಡು ಅಭೂತಪೂರ್ವ ಯಶಸ್ಸು ಕಂಡಿತು. ಕರ್ಣ ಕನ್ನಡ ಚಲನಚಿತ್ರ ರಂಗದ ಚಿತ್ರಕಥೆ-ಅಭಿನಯಕ್ಕೆ ಒಂದು ಹೊಸ ಸುವರ್ಣಮಾನವನ್ನು ಒದಗಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿಯಾದ ಸೂಪರ್ ಸ್ಟಾರ್ ಕರ್ಣ ಅವರನ್ನು ಚಪ್ಪಾಳೆಯೊಂದಿಗೆ.... ".
ನಿರೂಪಕಿಯ ಮಾತನ್ನು ಯಾರೂ ಕೇಳುತ್ತಿರಲಿಲ್ಲ. ಪ್ರೇಕ್ಷಕರಲ್ಲಿ ಒಬ್ಬರಿಂದ ಒಬ್ಬರಿಗೆ ರೋಮಾಂಚನ ಹರಡಿತು. ಎಲ್ಲರೂ ಒಂದೇ ಧ್ವನಿಯಲ್ಲಿ ಮೈಮರೆತು ಕೂಗುತ್ತಿದ್ದರು, "ಕರ್ಣಾ... ಕರ್ಣಾ... ". ಸಾಧಾರಣ ಎತ್ತರ, ಕಟ್ಟುಮಸ್ತು ದೇಹದ ಒಬ್ಬ ವ್ಯಕ್ತಿ ಕೈ ಬೀಸಿಕೊಂಡು ವೇದಿಕೆಯನ್ನು ಪ್ರವೇಶಿಸಿದ. ಸರಳ ಬಿಳಿ ಶರ್ಟು ಮತ್ತು ಹಳೆಯ ಜೀನ್ಸ್ ಪ್ಯಾಂಟ್ ಧರಿಸಿದ್ದ. ಮುಂದೆ ಇದ್ದ ಪ್ರೆಸ್ ಕ್ಯಾಮೆರಾಗಳ ಬೆಳಕು ಅವನನ್ನು ಆವರಿಸಿತು. ಮುಖ್ಯ ಅತಿಥಿಗಳೆಲ್ಲಾ ಬೆಳಕನ್ನು ತಡೆಯಲಾಗದೆ ಕಣ್ಣು ಮುಚ್ಚಿದರು. ಹಲವು ಹುಡುಗಿಯರ ಕಾಲು ಸೋತವು. ಏವಿಯೇಟರ್ ಸನ್ಗ್ಲಾಸ್ ಧರಿಸಿ, ಸ್ಪೈಕ್ ಕೇಶವಿನ್ಯಾಸ ಮಾಡಿಸಿಕೊಂಡಿದ್ದ ಕರ್ಣ, ಆರಾಮಾಗಿ ಕೈಬೀಸುವುದನ್ನು ಮುಂದುವರಿಸಿದ.
ಕಾರ್ಯಕ್ರಮ ಮುಗಿದ ನಂತರ, ಕರ್ಣ ಮತ್ತು ಅವನ ಸೇವಾ ಸಿಬ್ಬಂದಿಗೆ ವೇದಿಕೆಯಿಂದ ಹೊರಬರಲು ಅಭಿಮಾನಿಗಳು ಬಿಡಲೇ ಇಲ್ಲ. ಕರ್ಣ ತಾಳ್ಮೆಯಿಂದ ಆಟೋಗ್ರಾಫ್ ಗಳನ್ನು ಕೊಟ್ಟು, ಫೋಟೋಗಳಿಗೆ ಪೋಸ್ ಮಾಡಿದರೂ ಜನ ಬಿಡಲೇವಲ್ಲರು. ಕಡೆಗೆ ಅವನ ಬಾಡಿಗಾರ್ಡ್ ಗಳು ಜನ ಸಾಗರದ ಮಧ್ಯೆಯೇ ಕಷ್ಟ ಪಟ್ಟಿಕೊಂಡು ಕರ್ಣ ಮತ್ತು ಅವನ ತಂಡವನ್ನು ವೇದಿಕೆಯ ಹಿಂಭಾಗಕ್ಕೆ ಮುಟ್ಟಿಸಿದರು. ಅಲ್ಲಿಂದ ಅವರು, ಕಾರುಗಳು ನಿಂತಿದ್ದ ನಿರ್ಜನ ಪಾರ್ಕಿಂಗ್ ಲಾಟ್ ಗೆ ನಡೆದುಕೊಂಡು ಹೋದರು. ಅಷ್ಟರಲ್ಲೇ ಎಲ್ಲಿಂದಲೋ ಪ್ರತ್ಯಕ್ಷರಾದ ಕೆಲವು ಕಾಲೇಜು ಹುಡುಗಿಯರು, "ಓ ಕರ್ಣಾ! ಯು ಆರ್ ಸೋ ಕ್ಯೂಟ್!" ಎಂದು ಚೀರುತ್ತಾ ಬಾಡಿಗಾರ್ಡ್ ಗಳಿಂದ ತಪ್ಪಿಸಿಕೊಂಡು ಕರ್ಣನನ್ನು ಅಪ್ಪಿಕೊಂಡೇ ಬಿಟ್ಟರು. ಸ್ವಲ್ಪ ಅಚ್ಚರಿಗೊಂಡ ಕರ್ಣ ಶಾಂತವಾಗಿ ನಕ್ಕು, ಅವರಿಗೆ ಆಟೋಗ್ರಾಫ್ ನೀಡಿದನು.
ಆ ಗೆಳೆತಿಯರ ಗುಂಪು ಹೇಗೆ ಹುಚ್ಚರಂತೆ ಕರ್ಣನನ್ನೇ ಪ್ರೀತಿಸುತ್ತಾರೆ ಎಂಬುದನ್ನು ತಾಳ್ಮೆಯಿಂದ ಕೇಳಿಸಿಕೊಂಡು ಮೆದುವಾಗಿ ನಕ್ಕನು. ಒಂದು ಹುಡುಗಿಯಂತೂ ಭಾವೋತ್ಕರ್ಷತೆಯಿಂದ ಅಳುವುದಕ್ಕೇ ಆರಂಭಿಸಿ, ಇನ್ನೊಮ್ಮೆ ಕರ್ಣನನ್ನು ಅಪ್ಪಿಕೊಳ್ಳಲು ಮುಂದಾದಳು. ಆಗ, ಪಮ್ಮಿ ಅಡ್ಡ ಬಂದು, "Excuse me, mam! Please control yourself. We have to leave now", ಎಂದು ತಡೆದನು. ಕರ್ಣ ಹುಡುಗಿಯರಿಗೆಲ್ಲಾ ವಿದಾಯ ಹೇಳಿ, "My manager is very strict" ಎಂದು ಪಮ್ಮಿಯ ಕಡೆ ತುಂಟನ ಹಾಗೆ ನೋಡುತ್ತಾ ಹೇಳಿದ. ಹುಡುಗಿಯರೆಲ್ಲಾ ಸ್ವಲ್ಪ ನಿರಾಸೆಯಿಂದ ಹಿಂತಿರುಗಿದರು. ಪಾರ್ಕಿಂಗ್ ಲಾಟ್ ನಲ್ಲಿ ಮೌನ ಆವರಿಸಿತು. ಕರ್ಣನ ತಂಡ ಮತ್ತೆ ಕಾರಿನ ಕಡೆ ನಡೆಯಲು ಶುರು ಮಾಡಿದರು.
ಹುಣ್ಣಿಮೆ ರಾತ್ರಿಯಾದರೂ ಸುತ್ತಮುತ್ತಲೂ ಕತ್ತಲಿನ ವಾತಾವರಣ. ಕರ್ಣ ಸ್ವಲ್ಪ ದೂರ ನಡೆದು, ಏನೂ ಕಾರಣವಿಲ್ಲದೆ ಎಡಗಡೆಗೆ ನೋಡಿದ. ಕೆಲವು ಅಡಿ ದೂರದಲ್ಲಿ ಒಂದು ಒಂಟಿ ಸೋಡಿಯಂ ಬೀದಿದೀಪವಿತ್ತು. ಅದರ ಕೆಳಗೆ ಒಂದು ಹೆಣ್ಣಿನ ಆಕಾರ ಕಾಣಿಸಿತು. ಇದ್ದಕ್ಕಿದ್ದಂತೆ ಕರ್ಣ ಆ ಹೆಣ್ಣಿನ ಕಡೆ ನಡೆದ. ಅವನ ತಂಡ ಸ್ವಲ್ಪ ಗೊಂದಲದಿಂದ ನೋಡುತ್ತಾ ಅಲ್ಲೇ ನಿಂತಿತು. ಕರ್ಣ ಅವಳ ಹತ್ತಿರ ಬಂದ. ಹದಿನೈದು ವರ್ಷ ಚಲಿಸಿದ ಕಾಲಚಕ್ರದ ಸಾಕ್ಷಿ ಅವನ ಮುಂದೆ ನಿಂತಿತ್ತು. ಅವಳ ಕಣ್ಣಿನಲ್ಲಿ ಹೊಳಪು ಇದ್ದರೂ, ಸ್ವಲ್ಪ ಆಯಾಸವಾದಂತೆ ಕಾಣುತ್ತಿತ್ತು. ನೆತ್ತಿಯಲ್ಲಿ ಒಂದೆರಡು ಬಿಳಿ ಕೂದಲು. ಸ್ವಲ್ಪ ಸುಕ್ಕಾದ ಕತ್ತಿನಲ್ಲಿ ಕರಿಮಣಿ. ಸರಳ ಸೀರೆ ಮತ್ತು ಸಣ್ಣ ಜಡೆ. ಏಳೆಂಟು ವರ್ಷದ ಬಾಲಕ ಅವಳ ಕೈಯನ್ನು ಹಿಡಿದುಕೊಂಡು ಪಕ್ಕದಲ್ಲಿ ನಿಂತಿದ್ದನು. ಕರ್ಣ ಹತ್ತಿರ ಬರುತ್ತಿದ್ದಂತೆಯೇ ಅವಳ ಕಣ್ಣು ಅವನ ಬದಲಾದ ಮೈಕಟ್ಟು, ಉಡುಪು, ಮತ್ತು ಕೂದಲ ಶೈಲಿ, ಎಲ್ಲವನ್ನೂ ಕ್ಷಣಾರ್ಧದಲ್ಲೇ ಅನ್ವೇಷಿಸಿತು.
ಅವನಿಗೆ ಅವಳನ್ನು ನೇರವಾಗಿ ನೋಡಲು ಆಗಲಿಲ್ಲ. ಮಗುವಿನ ಕಡೆ ನೋಡಿದ. ಮಗು ನಗುತ್ತಾ ಟಾಟಾ ಮಾಡಿತು. ಕರ್ಣ ಮೆಲ್ಲನೆ ನಕ್ಕಿ ಪಮ್ಮಿಯ ಕಡೆ ನೋಡಿದ. ಪಮ್ಮಿ ಮುಂದೆ ಬಂದು ಕರ್ಣನ ಕೈಗೆ ಏನ್ನನ್ನೋ ಕೊಟ್ಟು ಹಿಂದೆ ನಡೆದ. ಕರ್ಣ ಮಂಡಿಯೂರಿ, ಆ ಸಾವಿರ ರೂಪಾಯಿಯ ನೋಟನ್ನು ಹುಡುಗನ ಕೈಯಲ್ಲಿಟ್ಟನು. ಅವಳು ಬೇಡ ಎನ್ನುವಂತೆ ತಡೆದಳು. ಕರ್ಣನ ಪ್ರಜ್ವಲಿಸುತ್ತಿದ್ದ ಕಣ್ಣು ಅವಳ ಕಡೆ ನೋಡಿತು. ಅವಳು ಕೆಳಗೆ ನೋಡಿ ಸುಮ್ಮನಾದಳು. ಮಗುವಿಗೆ ಮುತ್ತು ಕೊಟ್ಟು, ಕರ್ಣ ಎದ್ದು ನಿಂತು ಎರಡು ಹೆಜ್ಜೆ ಹಿಂದೆ ಸರಿದ. ಹುಡುಗ ಹುಡುಗಿಯ ಕಣ್ಣುಗಳು ಭೇಟಿಯಾದವು. ಅವಳ ಮೂಗು ಕೆಂಪಾಗಿ, ಕೆನ್ನೆಯ ಮೇಲೆ ಕಣ್ಣೀರು ಹರಿಯುತ್ತಿತ್ತು. ಕರ್ಣ ಹಿಂದೆ ತಿರುಗಿ, ಏವಿಯೇಟರ್ ಸನ್ಗ್ಲಾಸ್ ಧರಿಸಿ, ಕಾರಿನ ಕಡೆ ನಡೆದ. ಸನ್ಗ್ಲಾಸ್ ಕೆಳಗಿಂದ ಕಣ್ಣೀರು ತುಟುಕಿತು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications