ಪತ್ತೇದಾರಿ ಕಾದಂಬರಿ: ಆ ಕೊಲೆಗಾತಿ ಕದ್ದಿದ್ದು ಗಂಡಸರ ಮೊಬೈಲ್ ಗಳನ್ನೇ!
ಭೈರೇಗೌಡ ಕೊಟ್ಟು ಹೋಗಿದ್ದ ಎರಡೂ ಕೊಲೆ ಕೇಸುಗಳ ದಾಖಲೆಗಳನ್ನು ಒಂದು ಇಡೀ ದಿನ ವಿಸ್ತಾರವಾಗಿ ಓದಿದೆ. ತುಂಬಾ ಚೆನ್ನಾಗಿ ಎಲ್ಲ ವಿಷಯಗಳನ್ನು ಕೂಡಿಟ್ಟಿದ್ದ. ಅದೃಷ್ಟಕ್ಕೆ, ಮೊದಲನೇ ಕೊಲೆ ನಡೆದು ಆರು ತಿಂಗಳಾದರೂ ಅದರ ಎಲ್ಲ ವಿವರಗಳೂ ಒಂದೇ ಕಡೆ ಸಿ
ಭೈರೇಗೌಡ ಕೊಟ್ಟು ಹೋಗಿದ್ದ ಎರಡೂ ಕೊಲೆ ಕೇಸುಗಳ ದಾಖಲೆಗಳನ್ನು ಒಂದು ಇಡೀ ದಿನ ವಿಸ್ತಾರವಾಗಿ ಓದಿದೆ. ತುಂಬಾ ಚೆನ್ನಾಗಿ ಎಲ್ಲ ವಿಷಯಗಳನ್ನು ಕೂಡಿಟ್ಟಿದ್ದ. ಅದೃಷ್ಟಕ್ಕೆ, ಮೊದಲನೇ ಕೊಲೆ ನಡೆದು ಆರು ತಿಂಗಳಾದರೂ ಅದರ ಎಲ್ಲ ವಿವರಗಳೂ ಒಂದೇ ಕಡೆ ಸಿಕ್ಕಿದ್ದವು.
ಎರಡೂ ಕೊಲೆಗಳಲ್ಲಿದ್ದ ಸಾಮ್ಯತೆ ನೋಡಿದರೆ ಒಬ್ಬರೇ ಈ ಕೊಲೆಗಳನ್ನು ಮಾಡಿರುವುದರಲ್ಲಿ ಅನುಮಾನವೇ ಇರಲಿಲ್ಲ. ಕೊಲೆಗೆ ಬಳಸಿದ್ದ ಸಿಮ್ ಗಳು ಮಾರತ್ ಹಳ್ಳಿ ಮತ್ತು ರಿಚ್ಮಂಡ್ ಸರ್ಕಲ್ ನಡುವೆ ಬಿಬಿಎಂಪಿ ಬಸ್ ನಲ್ಲಿ ಕದ್ದವು. ಎಲ್ಲವೂ ಗಂಡಸರ ಮೊಬೈಲ್ ಗಳು. ದೇಹಕ್ಕೆ ಚಾಕು ಚುಚ್ಚಿದ ರೀತಿಯೂ ಒಂದೇ ತೆರನಾಗಿತ್ತು. ಮೊದಲನೇ ಕೊಲೆಯಲ್ಲಿಯೂ ಹುಡುಗಿಯನ್ನು ಯಾರೂ ನೋಡಿರಲಿಲ್ಲ. ಇಬ್ಬರು ಹುಡುಗರೂ ದುಡ್ಡಿರುವ ಮನೆಯ ರೋಮಿಯೋಗಳು. ಇದೆಲ್ಲ ನೋಡಿ, ಈ ಹುಡುಗಿಗೆ ಮಾನಸಿಕ ಕಾಯಿಲೆ ಇರುವುದು ಸ್ಪಷ್ಟವಾಯಿತು.
1. ಎರಡನೇ ಕೇಸಿನಲ್ಲಿ ಸಿಕ್ಕ ಫೌಂಡೇಷನ್ ಡಬ್ಬಿ ಮೊದಲನೇ ಕೇಸಿನಲ್ಲಿ ಇರಲಿಲ್ಲ. ಮೊದಲನೇ ಕೇಸಿನಲ್ಲಿ ಚಾಕುವೊಂದನ್ನು ಬಿಟ್ಟರೆ, ಕೋಣೆಯಲ್ಲಿ ಬೇರೇನೂ ಸಿಕ್ಕಿರಲಿಲ್ಲ.
2. ಎರಡನೇ ಕೇಸಿನಲ್ಲಿ ಒಂದು ಮೊಬೈಲ್ ಅಂಕಿಯನ್ನು ಎರಡು ಬಾರಿ ಉಪಯೋಗಿಸಲಾಗಿತ್ತು. ಕೊಲೆಯಾದ ದಿನ ಮತ್ತು ಕೊಲೆಯಾಗುವ ನಾಲ್ಕು ದಿನಗಳ ಮೊದಲು. ಭೈರೇಗೌಡ ತಿಳಿಸಿದ್ದ ಕಂಪ್ಲೇಂಟ್ ಕೊಟ್ಟಿರದ ಅಂಕಿ ಇದೇ ಆಗಿತ್ತು. ಇದರಿಂದ ಒಂದು ವಿಷಯ ನಿಚ್ಚಳವಾಯಿತು. ಈ ಮೊಬೈಲ್ ಕದ್ದರೂ ಅದರ ಬಗ್ಗೆ ಮೊಬೈಲ್ ಮಾಲೀಕರಿಗೆ ಗೊತ್ತಾಗುವುದಿಲ್ಲ ಎನ್ನುವುದು ಕೊಲೆಗಾತಿಗೆ ಗೊತ್ತಿತ್ತು. ಅದಕ್ಕೇ ಅವಳು ಅದನ್ನು ಎರಡೆರಡು ಬಾರಿ ಉಪಯೋಗಿಸಿರುವುದು. ಈ ಮೊಬೈಲ್ ಒಬ್ಬ ರಶ್ಮಿ ಎನ್ನುವ ಹುಡುಗಿಯ ಹೆಸರಲ್ಲಿತ್ತು. ಅವಳನ್ನು ಭೇಟಿಯಾಗಲೇ ಬೇಕು ಎಂದು ನಿಶ್ಚಯಿಸಿದೆ.
3. ಮೊದಲನೇ ಕೇಸಿನಲ್ಲಿ ಯಾವ ಟ್ಯಾಕ್ಸಿಯೂ ಬುಕ್ಕಾಗಿರಲಿಲ್ಲ.
4. ಎರಡೂ ಕೇಸುಗಳಲ್ಲಿ ಹುಡುಗರ ಮುಖದ ಮೇಲಿನ ಎಂಜಲು ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಆ ದಿನ ಸಂಜೆ ಭೈರೇಗೌಡ ನನ್ನ ಮನೆಗೆ ಬಂದ. ನನ್ನ ಮನಸ್ಸಿನಲ್ಲಿದ್ದ ಮುಂದಿನ ಹೆಜ್ಜೆಗಳ ಬಗ್ಗೆ ವಿವರಿಸಿದೆ.
"ಭೈರೇಗೌಡ್ರೇ, ನಿಮಗೆ ಮದುವೆಯಾಗಿದೆಯಾ?"
ನಾಚಿಕೊಂಡು, "ಇನ್ನೂ ಇಲ್ಲಾ ಸರ್... ಮನೇಲಿ ಹುಡುಕ್ತಾ ಇದಾರೆ" ಎಂದ. ನಾನು ಅವನನ್ನು ತೀಕ್ಷ್ಣವಾಗಿ ನೋಡಿದೆ. ದಪ್ಪ ಮೀಸೆಯ, ತುಸು ಗಡಸು ಚೌಕ ಮುಖ. ಒಳ್ಳೇ ಮೈಕಟ್ಟು. ಇನ್ನೂ ಮದೆಯಾಗಿಲ್ಲವೆಂದರೆ ನಂಬುವುದು ಸ್ವಲ್ಪ ಕಷ್ಟ ಎನಿಸಿತು.
ನಾನು ಕೇಳಿದೆ, "ನಿಮ್ಮ ಮನೆಯಲ್ಲಿ, ನೀನೇ ಹುಡುಗಿ ಹುಡ್ಕೋ, ಯಾವ್ ಜಾತಿ ಆದ್ರೂ ಪರವಾಗಿಲ್ಲ ಅಂತಾರೆ ಅಂದ್ಕೊಳ್ಳೋಣ. ನೀವು ನೋಡೋಕೆ ಚೆನ್ನಾಗೇ ಇದೀರ... ಹಾಗಾಗಿ ಯಾವ ಹುಡುಗಿಯೂ ನಿಮಗೆ ಇಲ್ಲ ಅನ್ನೊಲ್ಲ ಅಂತಾನೂ ಅಂದುಕೊಳ್ಳೋಣ. ಅವಾಗ ನೀವು ಹೇಗ್ ಹುಡುಗಿ ಹುಡುಕ್ತೀರಾ?"
ಅವನು ಸ್ವಲ್ಪ ಹೊತ್ತು ಯೋಚಿಸಿ ಮಾತಾಡಿದ, "ನಮ್ಮ ಸಂಬಂಧದಲ್ಲೇ ನನಗೆ ಗೊತ್ತಿರೋ ಹುಡುಗಿಗೆ ಕೇಳ್ತೀನಿ... ಇಲ್ಲಾ ಅಂದ್ರೆ ನನ್ ಜೊತೆ ಓದಿದವ್ಳು ಒಬ್ಳಿದಾಳೆ, ಅವಳನ್ನಾ ಕೇಳ್ತೀನಿ".
"ಸರಿಯಾಗಿ ಹೇಳಿದ್ರಿ... ಸೈಕಾಲಜಿ ಕಂಡುಕೊಂಡ ಹಳೇ ಸತ್ಯ ಇದು. ಏನಾದರೂ ಆರಿಸಬೇಕಾದಾಗ ನಾವೆಲ್ಲಾ ನಮಗೆ ಗೊತ್ತಿರೋದ್ರಲ್ಲೇ ಹುಡುಕ್ತೀವಿ." ಅವನು ಮಗ್ನನಾಗಿ ತಲೆದೂಗಿದ. ನಾನು ಮುಂದುವರೆಸಿದೆ,
"ಈಗ ಇದನ್ನ ಕೇಸಿಗೆ ಹೊಂದಿಸೋಣ" ಎಂದು ಹುಡುಗಿಯ ಮಾನಸಿಕ ಸ್ಥಿತಿ ಬಗ್ಗೆ ಮೊದಲು ವಿವರಿಸಿದೆ. "ಅವಳು ಕೊಲೆ ಮಾಡಬೇಕು ಎಂದು ತೀರ್ಮಾನಿಸಿದಾಗ, ತನ್ನ ಸುತ್ತಮುತ್ತಲಿನ ಹುಡುಗರಲ್ಲೇ ಹುಡುಕಿರುತ್ತಾಳೆ. ಹಾಗಾಗಿ ಮೊದಲನೇ ಹುಡುಗನಿಗೆ ಅವಳ ಪರಿಚಯ ಇದ್ದಿರಲೇಬೇಕು. ಎರಡನೆಯ ಹುಡುಗನಿಗೆ ಇದು ಅನ್ವಯಿಸದೇ ಇರಬಹುದು."
ಅವನ ಮುಖದಲ್ಲಿ ಗೊಂದಲವಿತ್ತು, "ನೀವ್ ಹೇಳೋದೆನೋ ನಿಜ. ಆದ್ರೆ ಇದರಿಂದ ಏನ್ ಉಪಯೋಗ?"
"ಅವನಿಗೆ ಹತ್ತಿರವಾಗಿದ್ದ ಒಂದಿಬ್ಬರು ಗೆಳೆಯರ ಬಗ್ಗೆ ನೀವು ಹುಡುಕಿ. ಅವರನ್ನಾ ಎನ್ಕ್ವೈರಿ ಮಾಡಿದ್ರೆ ಏನಾದ್ರೂ ಗೊತ್ತಾಗುತ್ತೆ."
ಮುಂದುವರಿಯುವುದು