ಬೇಂದ್ರೆ ಮಾಸ್ತರರ ಕುರುಡು ಕಾಂಚಾಣ

ರಚನೆ: ಅಂಬಿಕಾತನಯದತ್ತ(ದ.ರಾ.ಬೇಂದ್ರೆ)
ಕವನ ಸಂಕಲನ:ನಾದಲೀಲೆ
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||
ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;
ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;
ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;
ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.
ಸೂಚನೆ: ದರಾ ಬೇಂದ್ರೆ ಕಾವ್ಯಕೂಟ ಜ.31 ರಂದು ನ.ರಾ. ಕಾಲೋನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಸಂಜೆ 5:30ಕ್ಕೆ ಗೀತ ಗಾಯನ, ಕೃತಿ ಬಿಡುಗಡೆ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾರನಹಳ್ಳಿ ರಾಮಸ್ವಾಮಿ, ಮಲ್ಲೇಪುರಂ ಜಿ ವೆಂಕಟೇಶ್ ಹಾಜರಿರುತ್ತಾರೆ. ನಾದಲೀಲೆಯ ಭಾವಲೀಲೆ ಪುಸ್ತಕ ಬಿಡುಗಡೆ, ಸಾಹಿತಿ ಎಂ. ಪುಟ್ಟತಾಯಮ್ಮ ಅವರಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ.
ಬನಶಂಕರಿ 2 ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಇದೇ ದಿನ ಸಂಜೆ 5.30 ಕ್ಕೆ ಕಾವ್ಯವಾಚನ ಇರುತ್ತದೆ. ಹಿರಿಯ ಕವಿ ಎಚ್. ಎಸ್ .ವೆಂಕಟೇಶ್ ಮುರ್ತಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications