ನಮ್ಮ ನಡುವಿನ ನಿತ್ಯ ಸುಮಂಗಲಿಯರು!

ಪದ್ಯ 1 : ಅವರು
ಪ್ರಸಾದ ನಾಯಿಕ, ಬೆಂಗಳೂರು
[email protected]
ಗಿಡಮರಗಳ ಹಿಂದೆ ಅಲ್ಲೊಂದಿಬ್ಬರು
ಹುಡುಕುವ ಕಂಗಳಲ್ಲೆಂಥದೋ ನೋಟ
ಕಂಗಳಂಚಲ್ಲಿ ಎದ್ದು ಕಾಣುತಿದೆ ಕಪ್ಪು ಕಾಡಿಗೆ
ನೋಟದಲ್ಲೂ ತುಂಬಿ ತುಳುಕುತಿದೆ ದುಗುಡ
ಮುಂದೆ ಇಳಿಬಿದ್ದಿದೆ ಮುಂಗುರುಳು, ಹಿಂದೆ ಕಣ್ತುಂಬ ಇರುಳು
ಮುಂದಿರುವ ದೀಪಕಂಬಕ್ಕೆ ಬೆಳಕಿಲ್ಲ, ಕಾಲಲ್ಲಿ ನೆರಳಿಲ್ಲ
ದೇಹದಿಂದ ಸೂಸುತ್ತಿದೆ ವಿಚಿತ್ರ ಘಮಲು
ಪೌಡರೋ, ಸೆಂಟೋ ಉಸಿರಿಸಿದರೆ ಉಸಿರುಗಟ್ಟುತ್ತಿದೆ
ಹೆಗಲ ಮೇಲೊಂದು ವ್ಯಾನಿಟಿ ಬ್ಯಾಗು, ರಿಂಗಣಿಸುತ್ತಿರುವ ಮೊಬೈಲು
ರಪ್ಪಂತ ತುಂಬಿರುವ ತುಟಿಯಲ್ಲಿ ಕೃತಕ ನಗು
ಉಬ್ಬಿದೆದೆಯ ಮೇಲಿನ ಸೆರಗು ಆಡುತ್ತಿದೆ ಜಾರುಬಂಡಿ
ಆಕರ್ಷಿಸಿದ್ದು ಅದಲ್ಲ, ಹುಚ್ಚು ಉನ್ಮಾದ
ನಿರ್ಜನ ರಸ್ತೆಯಲ್ಲಿ ಅಲ್ಲೊಂದು ಆಟೋ, ಅಲ್ಲೆರಡು ಬೈಕು
ಹಾದಿಹೋಕರ ದೃಷ್ಟಿ ಅಲ್ಲೇ, ಹಿಂದೆ ಕೂತವಳ ತುಟಿಯಲ್ಲಿ ಕಿರುನಗೆ
ಅಲ್ಲ್ಯಾವನೋ ಬಂದು ಸೇರಿಕೊಂಡ
ಅಣ್ಣ, ತಮ್ಮ, ಸ್ನೇಹಿತ.. ಜೋರಾದ ಮಾತುಕತೆ;
ಮಾತುಕತೆ ನಿಂತಿತ್ತು, ಆತ ಒಬ್ಬನೇ ಬೈಕನ್ನೇರಿದ್ದ
ಪಕ್ಕದಲ್ಲೇ ಬಸ್ಗಾಗಿ ಕಾಯುತ್ತಿದ್ದಾಕೆ ಏಕಾಂಗಿ
ಅನತಿ ದೂರದಲ್ಲೇ ಅವರಿಬ್ಬರು, ಆದರೂ ಹೆದರಿಕೆ
ಅವರಿಬ್ಬರನ್ನು ನೋಡುತ್ತಿದ್ದವರು ಇವಳನ್ನೂ ನೋಡುತ್ತಿದ್ದಾರೆ
ಜೀರುಂಡೆ ಶಬ್ದ ಬಿಟ್ಟರೆ ಅಲ್ಲಿದ್ದಿದ್ದು ಬರೀ ಗೆಜ್ಜೆ ಶಬ್ದ
ಮಾರುಕಟ್ಟೆಯಂತೂ ಇಲ್ಲ ನಡೆಯುತ್ತಿದೆ ವ್ಯಾಪಾರ
ಬಚ್ಚಿಟ್ಟಿದ್ದೇನಿಲ್ಲ, ಏನಿದ್ದರೂ ಬಿಚ್ಚಿಟ್ಟಿದ್ದು
ಯಾರುಂಟು ಯಾರಿಲ್ಲ, ಯಾರಿಗೆ ಬೇಕಾಗಿದೆ ಬೆಳಕು
ಕತ್ತಲಿಗಾಗಲೇ ಹೊಂದಿಕೊಂಡಾಗಿದೆ ಬದುಕು












Click it and Unblock the Notifications