ದಿಟ್ಟ ಪ್ರತಿಭಾವಂತ ಪೊಲೀಸ್ ಅಧಿಕಾರಿ ರೂಪಾ ಮೌದ್ಗೀಲ್
ಡಿ.ರೂಪಾ ಮೌದ್ಗೀಲ್ ಎಲ್ಲರಂತೆ ಒಬ್ಬ ಸಾಮಾನ್ಯ ಮಹಿಳೆಯಾಗಿ ಮನೆಯಲ್ಲಿ ಇರಬಹುದಿತ್ತು. ಆದರೆ ಇವರ ಕಠಿಣ ಪರಿಶ್ರಮ, ಇಟ್ಟುಕೊಂಡ ಗುರಿ ಅವರನ್ನು ಒಬ್ಬ ಐಪಿಎಸ್ ಅಧಿಕಾರಿಯನ್ನಾಗಿ ಮಾಡಿತು. ಯಶಸ್ಸು ಅನ್ನುವುದು ಯಾರ ಸ್ವತ್ತು ಅಲ್ಲ. ರೂಪಾ ಅವರು ಯಶಸ್ಸನ್ನು ಬೆನ್ನತ್ತಿ ಹೋಗಲಿಲ್ಲ, ಯಶಸ್ಸೇ ಅವರ ಬೆನ್ನತ್ತಿ ಬಂದಿತೆಂದರೆ ಉತ್ಪ್ರೇಕ್ಷೆಯಾಗಲಾರದು.
ರೂಪಾ ಮೂಲತಃ ದಾವಣಗೆರೆ ಜಿಲ್ಲೆಯವರು. ಜೆ.ಎಚ್ ದಿವಾಕರ್ ಹಾಗೂ ಹೇಮಾವತಿ ದಂಪತಿಯ ಪುತ್ರಿಯಾದ ಡಿ.ರೂಪಾ ಮಧ್ಯಮ ಕುಟುಂಬದಿಂದ ಬಂದವರು. ತಂದೆ ಬಿಎಸ್ಎನ್ಎಲ್ ಇಂಜಿನಿಯರ್ ಆಗಿ, ತಾಯಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿದ ರೂಪಾ, ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ 20ನೇ ರ್ಯಾಂಕ್ ಪಡೆದರು. ಬಿಎಯಲ್ಲಿ ಗೋಲ್ಡ್ ಮೆಡಲ್ ಪಡೆದು ರಾಜ್ಯಕ್ಕೆ ಮೊದಲನೇ ರ್ಯಾಂಕ್ ಗಳಿಸಿದರು. ಬೆಂಗಳೂರು ಯುನಿವರ್ಸಿಟಿಯಲ್ಲಿ ಎಂಎ ಸೈಕಾಲಜಿಯಲ್ಲಿ 3ನೇ ರ್ಯಾಂಕ್ ಪಡೆದರು. ಇವರ ತಂಗಿ ರೋಹಿಣಿ ಕೂಡ ಬೆಂಗಳೂರಿನಲ್ಲಿ ಐಎಎಸ್ ಪಾಸ್ ಮಾಡಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಐಪಿಎಸ್ ಪಾಸ್ ಮಾಡಿದ ಮೇಲೆ ಮೊದಲ ಬಾರಿಗೆ ಉಡುಪಿಯಲ್ಲಿ 2002ರಲ್ಲಿ ಎಎಸ್ಪಿಯಾಗಿ ವೃತ್ತಿ ಆರಂಭಿಸಿದರು. ನಂತರ, ಧಾರವಾಡದಲ್ಲಿ ಎಸ್ಪಿ ಆಗಿ 2004-05ರವರೆಗೆ, ಬೀದರನಲ್ಲಿ 2006-07ರವರೆಗೆ, ಗದಗನಲ್ಲಿ 2007-08ರವರೆಗೆ ಕರ್ತವ್ಯ ಸಲ್ಲಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ 2010ನೇ ಸಾಲಿನ ಎಸ್ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2003ರಲ್ಲಿ ಬೀದರನಲ್ಲಿ ಎಸ್ಪಿ ಆಗಿದ್ದಾಗ ಅಲ್ಲಿನ ಜಿಲ್ಲಾಧಿಕಾರಿ ಮೌನೇಶ ಮೌದ್ಗೀಲ್ ಜೋತೆ ವಿವಾಹವಾಯಿತು. 8 ವರ್ಷಗಳ ದಾಂಪತ್ಯ ಸವೆಸಿರುವ ದಂಪತಿಗಳಿಗೆ ಅನಘಾ (6), ರೊಶಿಲ್ (3) ವರ್ಷದ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಬಿಡುವಿನ ಸಮಯದಲ್ಲಿ ಜಾಲಿಯಾಗಿ ಕಾರ್ಡ್ರೈವ್ ಮಾಡುವುದು ಮತ್ತು ಮನೆಯಲ್ಲಿದ್ದಾಗ ಸಂಗೀತ ಕೇಳುವುದು ನೆಚ್ಚಿನ ಹವ್ಯಾಸ. ಸಮಯ ಸಿಕ್ಕಾಗಲೆಲ್ಲ ಮಕ್ಕಳಿಗೂ ಪಾಠವನ್ನು ಹೇಳುತ್ತಾರೆ. ಕೆಲಸದ ಜಂಜಡದಲ್ಲಿ ಮನೆಯನ್ನು ಹಾಗೂ ಕಚೇರಿಯನ್ನು ಬ್ಯಾಲೆನ್ಸ್ ಮಾಡಲೇಬೇಕಾಗುತ್ತದೆ ಅಂತಾರೆ ಎಸ್ಪಿ ರೂಪಾ.
ದಿಟ್ಟ ಮಹಿಳೆ : ರೂಪಾ ಅವರು ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅವರನ್ನು ಬಂಧಿಸಿ ಈ ಹಿಂದೆ ಸುದ್ದಿ ಮಾಡಿದ್ದರು. ಧಾರವಾಡ ಜಿಲ್ಲಾ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಆಗಿನ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅವರನ್ನು ಹುಬ್ಬಳ್ಳಿಯ ಈದಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ದಿಟ್ಟತನ ಮೆರೆದಿದ್ದರು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮಹಿಳೆಯನ್ನು ಕೀಳು ದೃಷ್ಟಿಯಿಂದ ನೋಡಲಾಗುತ್ತಿದೆ. ಮಹಿಳೆ ಅಬಲೆಯಲ್ಲ ಸಬಲೆ. ಒಂದು ಹೆಣ್ಣು ಮಗು ಜನಿಸಿದರೆ ಅದು ಸಮಾಜಕ್ಕೆ ಮಾರಕವೆನ್ನಲಾಗುತ್ತದೆ. ಅದು ಮಾರಕವಲ್ಲ ಆ ಹೆಣ್ಣು ಮಗುವಿನಲ್ಲಿ ಅಡಗಿರುವ ಸೂಕ್ತ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಿದರೆ ಖಂಡಿತ ಸಮಾಜದಲ್ಲಿ ಉತ್ತಮ ಆದರ್ಶ ಮಹಿಳೆಯಾಗುತ್ತಾಳೆ ಎಂಬ ಸಂದೇಶ ರೂಪಾ ಅವರು ಮಹಿಳಾ ಜಗತ್ತಿಗೆ ಸಾರಿದ್ದಾರೆ.
ಕೆಲವು ಪ್ರತಿಭಾನ್ವಿತ ಹೆಣ್ಣುಮಕ್ಕಳು ಸಾಧನೆ ಮಾಡಿ ತೋರಿಸಿದ್ದಾರೆ. ಈಗಲೂ ತಮ್ಮ ಜಾಣ್ಮೆ ಹಾಗೂ ತಾಳ್ಮೆಯಿಂದ ಸಮಾಜದಲ್ಲಿ ಉತ್ತುಂಗದ ಶಿಖರವನ್ನು ಏರಿದ್ದಾರೆ. ಅಂತವರಿಗೆ ಇಂದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದ ಶುಭಾಶಯಗಳು.