ವಿಶಿಷ್ಟ ವಿಭಿನ್ನ ರಾಜಕಾರಣಿ ಎಂವೈ ಘೋರ್ಪಡೆ ವ್ಯಕ್ತಿಚಿತ್ರ
ಸ್ವಾತಂತ್ರ್ಯದ ನಂತರ ಸಂಡೂರಲ್ಲಿ ಮರಾಠಾ ಸಾಮಂತ ರಾಜರಾಗಿಯೇ ಉಳಿಯಲು ಬಯಸಿ ರಾಷ್ಟ್ರ ರಾಜಕಾರಣದ ಗಣ್ಯಾತಿ ಗಣ್ಯರನ್ನು ಸಂಪರ್ಕಿಸುವಲ್ಲಿ ಯಶಸ್ವಿ ಸಾಧಿಸಿ, ಅರಮನೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂ.ವೈ. ಘೋರ್ಪಡೆ. ಕೇಂಬ್ರಿಜ್ಡ್ ವಿಶ್ವವಿದ್ಯಾಲಯದಲ್ಲಿ ಎಂಎ ಎಕನಾಮಿಕ್ಸ್ ಪದವಿ ಪಡೆದಿದ್ದ ಘೋರ್ಪಡೆ, ವಿಶ್ವಮಟ್ಟದ ವನ್ಯಜೀವಿ ಛಾಯಾಗ್ರಾಹಕರು, ಲೇಖಕರು, ಸಾಹಿತ್ಯ ಪ್ರಿಯರು, ರಂಗಾಸಕ್ತರು, ಕಲೆ, ಪ್ರಾಚೀನತೆ ಮತ್ತು ಸಂಪ್ರದಾಯಗಳಲ್ಲಿ ಪ್ರೀತಿ ಉಳ್ಳವರು.
1933ರಲ್ಲಿ ಮಹಾತ್ಮಾಗಾಂಧಿ ಸಂಡೂರು ಪಟ್ಟಣಕ್ಕೆ ಬಂದಾಗ ಯುವಕರಾಗಿ ಅವರನ್ನು ಸ್ವಾಗತಿಸಿದ್ದ ಘೋರ್ಪಡೆ ಐತಿಹಾಸಿಕ - ಧಾರ್ಮಿಕ ಪ್ರಸಿದ್ಧ ರಾಜಾಶ್ರಯ ಪಡೆದ ಕುಮಾರಸ್ವಾಮಿ ಗುಡಿಯ ಪ್ರವೇಶಕ್ಕೆ ದಲಿತರಿಗೆ ಮುಕ್ತ ಅವಕಾಶ ಕಲ್ಪಿಸುವಲ್ಲಿ ಶ್ರಮಿಸಿದ್ದರು. ಅಲ್ಲಂ ಕರಿಬಸಪ್ಪ ಅವರು ಇವರನ್ನು 1957ರಲ್ಲಿ ಕಾಂಗ್ರೆಸ್ ಸದಸ್ಯರನ್ನಾಗಿಸಿದ್ದರು. ಅಂದಿನಿಂದ ಕಾಂಗ್ರೆಸ್ಸಿಗರಾಗಿಯೇ ಇದ್ದು, ಸಂಡೂರು ವಿಧಾನಸಭಾ ಕ್ಷೇತ್ರವನ್ನು ತಮ್ಮ ರಾಜಕೀಯ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಇವರು 1980ರಲ್ಲಿ ರಾಜಕೀಯ ಅನಿವಾರ್ಯ ಕಾರಣದಿಂದ ಕಾಂಗ್ರೆಸ್ 'ಯು" ಸೇರ್ಪಡೆಯಾಗಿ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಆರ್.ವೈ. ಘೋರ್ಪಡೆ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆರ್.ವೈ. ಘೋರ್ಪಡೆ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಈ ಸಂದರ್ಭವನ್ನು ಬಳ್ಳಾರಿ ಜಿಲ್ಲೆಯ ಹಾಗೂ ಕಾಂಗ್ರೆಸ್ಸಿಗರು 'ಭರತ - ಬಾಹುಬಲಿ" ಯುದ್ಧ ಎಂದೇ ಕರೆಯುತ್ತಿದ್ದರು.
1972ರಲ್ಲಿ ದೇವರಾಜ ಅರಸು ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಆರು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. 1975ರಲ್ಲಿ ಪೈ ಕಮೀಷನ್ ರಚಿಸಿ ಸರ್ಕಾರಿ ನೌಕರರಿಗೆ ಹೆಚ್ಚುವರಿ ಭತ್ಯೆ ಸಿಗುವಂತೆ ಮಾಡುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಹಲವಾರು ಸಂದರ್ಭಗಳಲ್ಲಿ ದೇವರಾಜ ಅರಸು ಅವರಿಗೆ ನೇರವಾಗಿ, ತೀಕ್ಷ್ಣವಾಗಿ, ನಿಷ್ಠುರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. 1978ರಲ್ಲಿ ದೇವರಾಜ ಅರಸು ಅವರು 2ನೇಬಾರಿ ಮುಖ್ಯಮಂತ್ರಿ ಆಗಿದ್ದಾಗ ಎಸ್.ಎಂ. ಯಾಹ್ಯಾ ಅವರು ಹಣಕಾಸು ಸಚಿವರಾಗಿದ್ದಾಗ ಬಜೆಟ್ ಸಿದ್ಧಪಡಿಸಲು ಗಣನೀಯ ಸೇವೆ ಸಲ್ಲಿಸಿದರು. 1978ರಲ್ಲಿ ಇವರು ಸ್ಪರ್ಧಿಸಲಿಲ್ಲ. 1985ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ, ಸಂಸತ್ತು ಪ್ರವೇಶಿಸಿದರು. [ಸ್ನೇಹಿನನ್ನು ಕಳೆದುಕೊಂಡ ಕ್ಯಾಮೆರಾ]