ಹರಿದು ಬರಬೇಡಮ್ಮ ಶರಾವತಿ ನಾವೇ ನಿನ್ನನ್ನು ಎಳೆದು ತರುತ್ತೇವೆ!
ಇತ್ತೀಚಿನ ದಿನಗಳಲ್ಲಿ ಮಳೆನಾಡಿಗರಿಗೆ ಗಾಬರಿ ಹುಟ್ಟಿಸಿರುವ ಸುದ್ದಿ. ಶರಾವತಿಯ ನೀರನ್ನು ಬೆಂಗಳೂರಿಗೆ ತರುವುದು, ಶರಾವತಿಯನ್ನೆ ನಂಬಿ ಕುಳಿತಿರುವ ರೈತ ಮಕ್ಕಳಿಗೆ ಇದು ಆಘಾತಕಾರಿ ಸುದ್ದಿಯೇ ಸರಿ.
ಎಲ್ಲಿಯ ಶರಾವತಿ ಎಲ್ಲಿಯ ಬೆಂಗಳೂರು? ಸಮುದ್ರ ಮಟ್ಟದಿಂದ ಹತ್ತಿರತ್ತರ ಮೂರು ಸಾವಿರ ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ಸುಮಾರು 400 ಕೀ.ಮಿ. ದೂರದ ಶರಾವತಿಯ ನೀರು ಬೇಕೆ? ಅಷ್ಟು ಅಗತ್ಯವೇ ಈ ಕೆಲಸ?
ಸಮುದ್ರ ಮಟ್ಟದಿಂದ ಸುಮಾರು ಸಾವಿರದ ಎಂಟು ನೂರು ಅಡಿ ಎತ್ತರದಲ್ಲಿರುವ ಲಿಂಗನಮಕ್ಕಿ, ಅಲ್ಲಿಂದ ಬೆಂಗಳೂರು ಸುಮಾರು ಎರಡು ಸಾವಿರದ ಎಂಟು ನೂರು ಅಡಿ ಎತ್ತರ, ಅಲ್ಲಿಂದ ಇಲ್ಲಿಗೆ ನೀರು ತರುವುದೇನು ಬಿಂದಿಗೆಯಲ್ಲಿ ನೀರು ತರುವಷ್ಟು ಸುಲಭವೆ? ಕೇಳಲು ಹಾಸ್ಯಾಸ್ಪದವೇ ಸರಿ, ಇದಕ್ಕೆ ಅದೆಷ್ಟು ಕಾಡು ನಾಶವಾಗಬೇಕೋ, ಅದೆಷ್ಟು ಪವರ್ ಬಳಸಬೇಕೋ, ಕೋಟಿಗಟ್ಟಲೆ ಖರ್ಚು ಮಾಡಿ ನೀರು ತೆಗೆದು ಒಯ್ದರೂ ಅದೆಷ್ಟು ಮಾರಕ ಮತ್ತು ಪೂರಕ?

ಈಗಾಗಲೇ ಮಲೆನಾಡ ಹೆಬ್ಬಾಗಿಲು ಎಂದೇ ಪ್ರಸಿದ್ಧಿ ಪಡೆದಿರುವ ಶಿವಮೊಗ್ಗ ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ ಕಂಡು ದಿಕ್ಕೆಟ್ಟು ಹೋಗಿದೆ. ಇನ್ನೂ ಈ ಕೆಲಸ ಒಂದಾದರೆ ಅದೆಷ್ಟು ಪರಿಸರ ನಾಶವಾಗುತ್ತದೊ, ಜೊತೆಯಲ್ಲಿ ವಿದ್ಯುತ್ ಉತ್ಪಾದನೆಗೂ ಕೂಡ ಪೆಟ್ಟು ಬೀಳುತ್ತದೆ. ಶರಾವತಿಯನ್ನೆ ನಂಬಿ ಕುಳಿತ ಮಣ್ಣಿನ ಮಕ್ಕಳು ರೈತರಿಗೆ ಅದೆಷ್ಟು ಪೆಟ್ಟು ಬೀಳುತ್ತದೋ, ಬಲ್ಲವರಾರು?
ಈಗಾಗಲೇ ಕಾಡಿನ ವಿನಾಶದಿಂದ ಮಲೆನಾಡಿನಲ್ಲಿ ಆಗುವ ಮಳೆಯ ಪ್ರಮಾಣ ಕೂಡ ಪೂರ್ತಿ ಕಡಿಮೆಯಾಗಿ, ರೈತ ಬಾಯಿ ಬಿಟ್ಟು ಆಕಾಶ ನೋಡುವ ಹಾಗೆ ಆಗಿದೆ. ಇರುವ ತೊಂದರೆಗಳ ಮಧ್ಯೆ ಈ ರೀತಿಯ ಕೆಲಸಗಳು ಸೇರಿಕೊಂಡರೆ.. ಅಷ್ಟೇ ಕಥೆ. ನಾವು ತಿನ್ನುವ ಅನ್ನದಲ್ಲೂ ಆ ಮಹಾತಾಯಿ ಶರಾವತಿಯ ಕೊಡುಗೆ ಬಹಳಷ್ಟು. ಬಳಸುತ್ತಿರುವ ವಿದ್ಯುತ್ ಕೂಡ ಆ ದೇವಿಯ ಭಿಕ್ಷೆ.
ಇರುವುದೆಲ್ಲವ ಬಿಟ್ಟು ಇಲ್ಲದಿರುವುದರ ಕಡೆ ನೋಡುವುದೇ ಜೀವನವಾ? ನೀರು ಕೊಡುವುದು ಬಿಡುವುದು ಇಲ್ಲಿ ಒಂದು ವಿಷಯವೇ ಅಲ್ಲ. ಆದರೆ ಅಷ್ಟು ದೂರದಿಂದ ನೀರು ತರುವಷ್ಟು ಪರಿಸ್ಥಿತಿ ಇದೆಯಾ ಬೆಂಗಳೂರಿಗೆ?
ನಾಡಪ್ರಭು ಕೆಂಪೇಗೌಡರು ಎಲ್ಲಾ ಯೋಚಿಸಿಯೇ ನೂರಾರು ಕೆರೆಗಳನ್ನು ನಿರ್ಮಿಸಿ, ಜೊತೆಯಲ್ಲಿ ರಾಜಕಾಲುವೆಯಂತಹ ಬೃಹತ್ ಚರಂಡಿಯನ್ನು ನಿರ್ಮಿಸಿ, ನಮ್ಮ ಪೀಳಿಗೆಗಾಗಿ ಶ್ರಮಿಸಿದ್ದರು. ಆದರೆ ನಾವುಗಳು ನಗರದ ಅಭಿವೃದ್ಧಿಗಾಗಿ ಎಲ್ಲಾ ಕಳೆದುಕೊಂಡಿರುವೆವು. ಇದ್ದ ಒಂಬೈನೂರಕ್ಕೂ ಹೆಚ್ಚು ಕೆರೆಗಳಲ್ಲಿ ಈಗ ಜೀವಂತವಿರುವ ಕೆರೆಗಳು ಬಹುಶಃ ಒಂದು ಇನ್ನೂರು ಮತ್ತು ಅದಕ್ಕಿನ್ನೂ ಕಡಿಮೆಯಿರಬಹುದು.
ಲಿಂಗನಮಕ್ಕಿಯ ನೀರನ್ನು ಕೋಟಿಗಟ್ಟಲೆ ಖರ್ಚು ಮಾಡಿ ಮಹಾನಗರಿಗೆ ತರುವ ಬದಲು, ಅದೇ ಹಣದಲ್ಲಿ ಇರುವ ನೀರಿನ ಮೂಲಗಳನ್ನೇ ಸರಿಯಾಗಿ ಬಳಸುವ ರೀತಿ ಮಾಡಿಕೊಳ್ಳಬಹುದು. ನೀರಿನ ಮರುಬಳಕೆಯಿಂದಲೂ ಇಂತಹ ಕಷ್ಟಗಳಿಂದ ಪಾರಾಗಬಹುದು. ಕೊಲ್ಲುವುದು, ಕಾಪಾಡುವುದು ಎಲ್ಲವು ಅಧಿಕಾರ ಉಳ್ಳವರ ಕೈಯಲ್ಲೇ ಇದೆ.
ಈಗ ಸರ್ಕಾರ ಮಾಡುತ್ತಿರುವುದು ದುಸ್ಸಾಹಸವೆ ಸರಿ ಎಂದು ಯಾರಾದರೂ ಹೇಳಿಯಾರು. ಪ್ರಕೃತಿ ಮಾತೆ ಯಾರಿಗೂ ಮೋಸ ಮಾಡಿಲ್ಲ ಎಲ್ಲರಿಗೂ ಸಮನಾಗಿಯೆ ಎಲ್ಲವನ್ನು ನೀಡಿದ್ದಾಳೆ. ಆದರೆ ನಾವುಗಳೆ ರಕ್ಕಸರಂತೆ ಆಕೆಯನ್ನು ಕತ್ತು ಹಿಸುಕುವ ದುಸ್ಸಾಹಸ ಮಾಡುತ್ತಿರುವಿದು. ಇದೆ ಮುಂದುವರೆದರೆ ಭವಿಷ್ಯದಲ್ಲಿ ಸರಿಯಾದ ಬೆಲೆ ನಾವುಗಳೆ ತೆರಬೇಕಾಗುತ್ತದೆ ಅಷ್ಟೇ. ನಗರಗಳ ಅಭಿವೃದ್ದಿಯ ಜೊತೆಗೆ ಹಳ್ಳಿಗಳ ಉದ್ದಾರ ಕಾರ್ಯ ಮಾಡುವುದು ಕೂಡ ಬಹಳ ಮುಖ್ಯ ಎಂದರಿತರೆ ನಮ್ಮ ದೇಶದ ಉನ್ನತಿಯ ಕನಸನ್ನು ನಾವು ಜೀವಂತವಾಗಿಡಬಹುದು.











Click it and Unblock the Notifications