ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮನೆ- ಮನೆಗೆ ಕೊರೊನಾ ಲಸಿಕೆ ಸಾಧ್ಯತೆ
ಬೆಂಗಳೂರು, ಆಗಸ್ಟ್ 30: ದೈನಂದಿನ ಕೊರೊನಾ ಲಸಿಕೆಯ ಗುರಿಯನ್ನು ಐದು ಲಕ್ಷ ಡೋಸ್ಗಳಿಗೆ ಏರಿಸುವ ರಾಜ್ಯ ಸರ್ಕಾರದ ನಿರ್ಧಾರ ಗ್ರಾಮೀಣ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಅಧಿಕಾರಿಗಳಿಗೆ ಒಂದಿಷ್ಟು ಸಮಾಧಾನ ತಂದಿದೆ.
ಕೊರೊನಾ ಲಸಿಕೆಯ ಪ್ರಯೋಜನಗಳ ಕುರಿತು ವ್ಯಾಪಕ ಪ್ರಚಾರಗಳ ಹೊರತಾಗಿಯೂ, ಲಸಿಕೆ ಕುರಿತ ಹಿಂಜರಿಕೆ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಡೋಸ್ಗಳ ಕೊರತೆ ಹಾಗೂ ಲಸಿಕೆ ನಿರ್ವಹಣೆ ಸಂಬಂಧ ಖಾಸಗಿ ಆಸ್ಪತ್ರೆಗಳು ಎದುರಿಸುತ್ತಿರುವ ಸವಾಲುಗಳು ಲಸಿಕಾ ಪ್ರಕ್ರಿಯೆಯನ್ನು ಕಷ್ಟಕರವಾಗಿಸಿವೆ.

ಮುಂಬರುವ ದಿನಗಳಲ್ಲಿ ಈ ಅಂಶಗಳು ಲಸಿಕಾ ಪ್ರಕ್ರಿಯೆಯನ್ನು ಹೆಚ್ಚು ಸವಾಲಾಗಿಸಬಹುದು ಹಾಗೂ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುವುದು ಅಗತ್ಯವಾಗಬಹುದು ಎಂದು ಸ್ಥಳೀಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿ ಏಳು ತಿಂಗಳು ಪೂರೈಸಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಇನ್ನೂ ಮೊದಲ ಡೋಸ್ ಲಸಿಕೆಯನ್ನೇ ಸಂಪೂರ್ಣವಾಗಿ ನೀಡಲು ಸಾಧ್ಯವಾಗಿಲ್ಲ.
ಲಸಿಕೆಗಳು ಸುರಕ್ಷಿತವಿಲ್ಲ, ಹಾಗಾಗಿ ನಾವು ಲಸಿಕೆ ಪಡೆದುಕೊಂಡಿಲ್ಲ ಎಂದು ಹೇಳುವ ಜನರು ಇಲ್ಲಿದ್ದಾರೆ. ಮತ್ತೂ ಕೆಲವರು, ಕೊರೊನಾ ಎಲ್ಲಿದೆ? ಎಲ್ಲದರಂತೆ ಇದು ಸಾಮಾನ್ಯ ಜ್ವರ ಎಂದು ಹೇಳುತ್ತಾರೆ. ಹೀಗಾಗಿ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿದೆ.
ಇದರೊಂದಿಗೆ, ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆಗಳು ವಾರದಲ್ಲಿ ಎರಡು ಬಾರಿ ಮಾತ್ರ ಲಭ್ಯವಾಗುತ್ತಿವೆ. ಕೆಲವೊಮ್ಮೆ ಲಸಿಕೆಗಳ ಸಂಗ್ರಹ ಖಾಲಿಯಾಗಿ, ಎಷ್ಟೋ ಮಂದಿ ಮನೆಗೆ ವಾಪಸ್ ಮರಳಿರುವ ಸಂಗತಿಗಳು ನಡೆದಿವೆ. ಹೀಗಾಗಿ ಗ್ರಾಮಗಳಲ್ಲಿ ಲಸಿಕೆ ಪೂರೈಕೆ ಸವಾಲು ಎನಿಸಿಕೊಂಡಿದೆ.
ತಾಲೂಕಿನ ಹಲವು ಖಾಸಗಿ ಆಸ್ಪತ್ರೆಗಳು ಯಾವುದೇ ದಿನ ಹತ್ತು ಜನರು ಲಸಿಕೆಗಾಗಿ ಹೆಸರು ನೋಂದಾಯಿಸಿಕೊಂಡರೆ ಮಾತ್ರ ಲಸಿಕೆ ನೀಡುತ್ತಿವೆ. ಲಸಿಕೆ ಪಡೆಯಲು ಹಲವು ಬಾರಿ ಆಸ್ಪತ್ರೆಗೆ ಹೋಗಿ ಬರುವ ಪ್ರಮೇಯ ಬರುತ್ತಿದೆ. ಹತ್ತು ಮಂದಿ ನೋಂದಣಿ ಮಾಡಿಸಿಕೊಂಡರೆ ಮಾತ್ರ ಆ ದಿನ ಲಸಿಕೆ ನೀಡಲಾಗುತ್ತದೆ. ಇಲ್ಲವೆಂದರೆ ವಯಲ್ನಲ್ಲಿನ ಲಸಿಕೆ ವ್ಯರ್ಥವಾಗುತ್ತದೆ. ಅದಕ್ಕೆ ಸಂಬಂಧಪಟ್ಟಂತೆ ಕೆಲವು ನಿರ್ದೇಶನಗಳಿವೆ ಎಂದು ಖಾಸಗಿ ಆಸ್ಪತ್ರೆಗಳು ಸ್ಪಷ್ಟನೆ ನೀಡುತ್ತವೆ.

ಲಸಿಕೆ ಕುರಿತು ಹುಟ್ಟಿಕೊಂಡಿರುವ ಸುಳ್ಳು ಸುದ್ದಿಗಳು ಸಮಸ್ಯೆ ತಂದೊಡ್ಡಿವೆ. ಜನರಿಗೆ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದರು. ಹೀಗಾಗಿ ಮನೆ ಮನೆಗೆ ಲಸಿಕೆ ನೀಡುವುದು ಅವಶ್ಯಕವಾಗಬಹುದು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯವಶ್ಯಕವಾಗಲಿದೆ.
'ಸದ್ಯಕ್ಕೆ ಇಲ್ಲಿ ಹಿರಿಯ ನಾಗರಿಕರಿಗೆ ಲಸಿಕೆ ಪಡೆದುಕೊಳ್ಳಲು ವಾಹನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮನೆ ಮನೆ ಅಭಿಯಾನ ಅವಶ್ಯಕವಾಗಲಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ24 ಗಂಟೆಯೂ ಲಸಿಕೆ ನೀಡುವ ಕೇಂದ್ರ ಆರಂಭ; ಹೆಚ್ಚಿನ ಕೊರೊನಾ ಲಸಿಕೆ ಡೋಸ್ಗಳು ರಾಜ್ಯಕ್ಕೆ ಲಭ್ಯವಾಗುತ್ತಿದ್ದು, ಲಸಿಕೆ ನೀಡುವ ಪ್ರಕ್ರಿಯೆ ಚುರುಕುಗೊಳಿಸಲು ಮುಂದಾಗಿರುವ ಬಿಬಿಎಂಪಿ, ಬೆಂಗಳೂರು ನಗರ ಪ್ರದೇಶದಲ್ಲಿ 24 ಗಂಟೆ ಲಸಿಕೆ ನೀಡುವ ಕೇಂದ್ರ ತೆರೆಯಲಿದೆ. ಪ್ರತಿ ವಲಯದಲ್ಲಿ ಕೇಂದ್ರ ತೆರೆಯಲು ಆಲೋಚಿಸುತ್ತಿದೆ. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿ, "ದಿನದ 24 ಗಂಟೆಯೂ ಲಸಿಕೆ ಸಿಗುವಂತೆ ಮಾಡಲು ನಿರ್ಧರಿಸಿದ್ದೇವೆ. ಅಲ್ಲದೇ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಸಮಯವನ್ನು ವಿಸ್ತರಣೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಸೋಂಕು: ಭಾನುವಾರದ ವರದಿಯಂತೆ ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಹೊಸ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.70ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.34ರಷ್ಟಿದೆ. ಭಾನುವಾರ 1262 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1384 ಸೋಂಕಿತರು ಗುಣಮುಖರಾಗಿದ್ದಾರೆ. 17 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೂ 37278 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2947255ಕ್ಕೆ ಏರಿಕೆಯಾಗಿದೆ. ಒಟ್ಟು 2891193 ಸೋಂಕಿತರು ಗುಣಮುಖರಾಗಿದ್ದು. 18758 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications