ಸೆ.14 : ಹಿಂದಿ ದಿವಸದಂದು ಕನ್ನಡಿಗರೇನು ಮಾಡಬೇಕು?

ಅವರಿಬ್ಬರು ಯಾರೆಂದು ನಿಮಗೆಲ್ಲ ಗೊತ್ತೇ ಇದೆ. ಅವರ ಹೆಸರನ್ನು ಮತ್ತೆ ಇಲ್ಲಿ ಹೇಳುವ ಅಗತ್ಯವಿಲ್ಲ. ರಾಜಕಾರಣಿಯ ಮಾತು ಒತ್ತಟ್ಟಿಗಿರಲಿ, ಹಿಂದಿ ಭಾಷೆ ಮಾತನಾಡಲು ಬಾರದಿರುವ ವ್ಯಕ್ತಿಯನ್ನು ಉತ್ತರ ಭಾರತದಲ್ಲಿ ಯಾವ ರೀತಿ ಕಾಣಿಸುತ್ತಾರೆ, ಹಿಂದಿಯಲ್ಲಿಯೇ ಮಾತನಾಡುವ ವ್ಯಕ್ತಿಯನ್ನು ದಕ್ಷಿಣ ಭಾರತದ ತುದಿಯಲ್ಲಿ ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದು ಕೂಡ ಎಲ್ಲರಿಗೂ ತಿಳಿದ ವಿಚಾರ.
ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯೆಂದು ಒಪ್ಪುವುದು ಬಿಡುವುದು ಒತ್ತಟ್ಟಿನ ವಿಚಾರ. ಆದರೆ, ಹಿಂದಿ ಭಾಷೆಯನ್ನು ನಾವೆಲ್ಲರೂ (ಬೇಕಾದವರು) ಕಲಿಯಲೇಬೇಕಾ ಎಂಬುದು ಸದ್ಯಕ್ಕೆ ಚರ್ಚೆಯಲ್ಲಿರುವ ವಿಚಾರ. ಅವರಿವರ್ಯಾಕೆ ಸಚಿನ್ ತೆಂಡೂಲ್ಕರ್ ಕೂಡ ತಾವು ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾಗ ತಂಡದ ಪ್ರತಿಯೊಬ್ಬರೂ ಹಿಂದಿ ಕಲಿಯಲೇಬೇಕು, ಹಿಂದಿಯಲ್ಲಿಯೇ ಮಾತನಾಡಬೇಕು ಎಂದು ಫರ್ಮಾನು ಹೊರಡಿಸಿದ್ದರು.
ಒಂದು ಭಾಷೆಯ ಕಲಿಯಬೇಕು ಅಥವಾ ಕಲಿಯಬಾರದು ಎಂದು ಯಾರ ಮೇಲೂ ಒತ್ತಡ ಹೇರಲು ಸಾಧ್ಯವಿಲ್ಲ. ಆದರೆ, ಒಂದು ಪ್ರಾದೇಶಿಕ ಭಾಷೆಯ ಪ್ರಾಬಲ್ಯವಿರುವ ರಾಜ್ಯಕ್ಕೆ ಹೋದ ಮೇಲೆ ಆಯಾ ರಾಜ್ಯದ ಭಾಷೆಯನ್ನು ಕಲಿಯದಿದ್ದರೆ ಹೇಗೆ? ರೋಮ್ನಲ್ಲಿದ್ದಾಗ ರೋಮ್ ಕಲಿಯಲೇಬೇಕು, ದೆಹಲಿಯಲ್ಲಿ ವಾಸವಿರುವುದಾಗರೆ ಹಿಂದಿ ಕಲಿಯಬೇಕು. ಹಾಗೆಯೆ ಕರ್ನಾಟಕದಲ್ಲಿದ್ದಾಗ ಕನ್ನಡ ಕೂಡ ಕಲಿಯಲೇಬೇಕು.
ಆದರೆ, ಕರ್ನಾಟಕಕ್ಕೆ ವಲಸೆ ಬಂದಿರುವ ಹಿಂದಿ ಭಾಷಿಕರಲ್ಲಿ ಎಷ್ಟು ಜನ ಕನ್ನಡ ಕಲಿತಿದ್ದಾರೆ? ಎಷ್ಟು ಜನರಿಗೆ ಕನ್ನಡ ಕಲಿಸಲಾಗುತ್ತಿದೆ? ಆಗಸ್ಟ್ ತಿಂಗಳು ಅಸ್ಸಾಂಗೆ ತೆರಳುತ್ತಿದ್ದ ಅಸ್ಸಾಮೀಯರಲ್ಲಿ ಎಷ್ಟು ಜನರಿಗೆ ಕನ್ನಡ ಗೊತ್ತಿತ್ತು? ಇಲ್ಲಿ ಬಂದು ನಾಲ್ಕಾರು ವರ್ಷ ಕಳೆದಿದ್ದರೂ ಶೇ.90ರಷ್ಟು ಜನರಿಗೆ ಕನ್ನಡ ಬರುವುದಿಲ್ಲ. ಉತ್ತರ ಭಾರತದಿಂದ ಸಾವಿರಾರು ಜನರು ಬೆಂಗಳೂರಿಗೆ ವಲಸೆ ಬರುತ್ತಲೇ ಇದ್ದಾರೆ. ಇವರಲ್ಲಿ ಎಷ್ಟು ಜನರು ಕನ್ನಡ ಕಲಿತಿದ್ದಾರೆ? ನಮ್ಮ ನಿಮ್ಮ ಕಚೇರಿಯಲ್ಲಿಯೇ ಇಂಥವರ ಸಂಖ್ಯೆ ಸಾಕಷ್ಟಿರುತ್ತದೆ.
ಇವರೆಲ್ಲರ ಕಥೆ ಒಂದು ರೀತಿಯದಾದರೆ, ಇಪ್ಪತ್ತು ಮೂವತ್ತು ವರ್ಷಗಳಿಂದ ಕನ್ನಡ ನಾಡಿನಲ್ಲಿಯೇ ಠಿಕಾಣಿ ಹೂಡಿರುವ ಎಷ್ಟು ನಾರ್ತಿಗಳಿಗೆ ಕನ್ನಡ ಬರುತ್ತದೆ? ಅವರ್ಯಾಕೆ ಮಾತಾಡ್ತಾರೆ? ಅವರ್ಯಾಕೆ ಕನ್ನಡ ಕಲೀತಾರೆ? ನಮ್ಮವರಿಗೇ ಹಿಂದಿ ಚೆನ್ನಾಗಿ ಗೊತ್ತಿದೆಯಲ್ಲ? ಹಿಂದಿಯವರ ಜೊತೆ ಹಿಂದಿ ಮಾತನಾಡುವುದು ಇದು ಷ್ಯಾಷನ್ ಆಗಿಹೋಗಿದೆ. ಕಾಲೇಜು ಕ್ಯಾಂಪಸ್ಸಿನಲ್ಲಿ ಹೋಗಿ ನೋಡಿ. ಹಿಂದಿಯಲ್ಲಿಯೇ ಹುಡುಗ ಹುಡುಗಿಯರಲ್ಲಿ ಸಂಭಾಷಣೆ ನಡೆದಿರುತ್ತದೆ. ಆ ಗುಂಪಿನಲ್ಲಿ ಇರುವ ಹೆಚ್ಚಿನವರು ಕನ್ನಡಿಗರು ಎಂಬುದು ನಿಮಗೂ ಗೊತ್ತಿರಲಿ. ಹೋಗ್ಲಿ ಪ್ರತಿಯಾಗಿ ಅವರಿಗೆ ಕನ್ನಡವಾದರೂ ಕಲಿಸ್ತಾರಾ? ಕನ್ನಡ ಕಲಿಸುವುದಿರಲಿ ಕನ್ನಡದಲ್ಲಿ ಮಾತನಾಡುವುದೂ ಹಲವರಿಗೆ ಅವಮಾನದ ವಿಷಯವಾಗಿದೆ.
ಹಿಂದಿ ಭಾಷಿಕರಿಗೆ ಕನ್ನಡ ಕಲಿಸುವುದು ಸದ್ಯಕ್ಕೆ ದೂರದ ಮಾತು. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕನ್ನಡದ ಹುಡುಗರಿಗೇ ಕನ್ನಡ ಕಲಿಸುವ ಅನಿವಾರ್ಯತೆ ಎದುರಾಗಿದೆ. ದಿನಕರ ದೇಸಾಯಿ ಅವರು ಬರೆದಿರುವ ಒಂದಾದರೂ ಪುಟಾಣಿ ಕವಿತೆಯನ್ನು ಇಂದಿನ ಮಕ್ಕಳು ಹೇಳಲಿ ನೋಡೋಣ! ಹಿಂದಿ ಭಾಷೆಯ ಕಲಿಯುವ ಬಗ್ಗೆ, ಕಲಿಸುವ ಬಗ್ಗೆ ಇಂದೇಕೆ ಇಷ್ಟೊಂದು ಮಾತನಾಡಬೇಕಾಗಿ ಬಂತೆಂದರೆ, ಇಂದು ಸೆಪ್ಟೆಂಬರ್ 14 ಹಿಂದಿ ದಿವಸ ಆಚರಿಸಲಾಗುತ್ತಿದೆ. ಹಿಂದಿ ರಾಷ್ಟ್ರಭಾಷೆ, ಹಿಂದಿಯನ್ನು ಭಾರತೀಯರಾದ ಎಲ್ಲರೂ ಕಲಿಯಲೇಬೇಕು ಎಂದು ಭಾಷಣ ಬಿಗಿಯಲಾಗುತ್ತಿದೆ. ಅಂದ ಹಾಗೆ, ಕನ್ನಡ ರಾಜ್ಯೋತ್ಸವ ಕೂಡ ಹತ್ತತ್ತಿರ ಬರುತ್ತಿದೆ. ಕನ್ನಡಿಗರಾದ ನಾವು ಏನು ಮಾಡಬೇಕು?












Click it and Unblock the Notifications