ಹಿಂದಿ ಪಾಕ್ಷಿಕ ವಿರುದ್ಧ ಆನ್ ಲೈನ್ ಚಳವಳಿ

ಕರ್ನಾಟಕದ ಬಹುಸಂಖ್ಯಾತ ಕನ್ನಡಿಗರಲ್ಲವೇ? ಹಾಗಿದ್ದಾಗ ಈ ಎಲ್ಲ ಕಚೇರಿಗಳ ಆಡಳಿತ ಯಾವ ನುಡಿಯಲ್ಲಿರಬೇಕಿತ್ತು? ಕನ್ನಡದಲ್ಲಲ್ಲವೇ? ಹಾಗಿದ್ರೆ ನಿಜವಾಗಿ ಆಗಬೇಕಿದ್ದದ್ದು ಕನ್ನಡದಲ್ಲಿ ಆಡಳಿತ ನಡೆಸುವಂತೆ ಈ ಎಲ್ಲ ಇಲಾಖೆಗಳ ಉದ್ಯೋಗಿಗಳಿಗೆ ಕನ್ನಡ ತರಬೇತಿ ನೀಡುವ "ಕನ್ನಡ ಪಾಕ್ಷಿಕ"ವೋ, "ಕನ್ನಡ ಮಾಸಿಕ"ವೋ ಅಲ್ಲವೇ? ಹಾಗಿದ್ರೆ ಅದನ್ನು ಮಾಡದೇ ಇಲ್ಲಿನ ಜನರ ನುಡಿಯೇ ಅಲ್ಲದ ಹಿಂದಿಯನ್ನು ಎಲ್ಲ ಉದ್ಯೋಗಿಗಳಿಗೂ ಕಲಿಸಿ, ಕಲಿತವರಿಗೆ, ಬಳಸಿದವರಿಗೆ ಬಹುಮಾನ, ಬೆಂಡು ಬತ್ತಾಸು ಅಂತ ಕೊಡುವುದು ಯಾವ ಮನಸ್ಥಿತಿಯನ್ನು ತೋರಿಸುತ್ತೆ?
ಅಂತಹ ನೀತಿಗಳಿಂದಲೇ ಅಲ್ಲವೇ ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ "ಹಿಂದಿ ಬಾರದ" ಕನ್ನಡಿಗರು ಉದ್ಯೋಗ ವಂಚಿರಾಗುತ್ತಿರುವುದು? ರಾಜಭಾಷಾ ಆಯೋಗ ಅನ್ನುವ ಸಂಸ್ಥೆ ರೂಪಿಸಿಕೊಂಡು ದೇಶವನ್ನೇ ಮೂರು ವಲಯದಲ್ಲಿ ಹಂಚಿ, ಪ್ರತಿ ವಲಯಕ್ಕೂ ವರ್ಷಕ್ಕಿಷ್ಟು ಹಿಂದಿ ಬಳಸಲೇಬೇಕು ಅನ್ನುವ ಗುರಿ ಕೊಟ್ಟು, ವರ್ಷಕ್ಕೊಮ್ಮೆ ಹಿಂದಿ ಪಾಕ್ಷಿಕ ಅನ್ನುವ ಹೆಸರಲ್ಲಿ ಅದನ್ನು ಸಂಭ್ರಮಿಸುವ ಮನಸ್ಥಿತಿಯನ್ನು ಭಾಷಾ ಸಮಾನತೆ ಬಯಸುವ ಯಾರಾದರೂ ಒಪ್ಪಲಾದಿತೇ? ಈಗ ಹೇಳಿ, ಹಿಂದಿ ಪಾಕ್ಷಿಕವನ್ನು ವಿರೋಧಿಸುವುದು ಸರಿಯೋ ತಪ್ಪೋ?
ಬದಲಾವಣೆಯ ದಾರಿ ಯಾವುದು?: ಈ ಬದಲಾವಣೆ ಹೇಗೆ ಮಾಡುವುದು ಅನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೆ ನನ್ನ ಉತ್ತರ" ಯಾವುದೇ ಸಾಮಾಜಿಕ ಬದಲಾವಣೆ ನಿರಂತರ ಪ್ರಯತ್ನ, ಜಾಗೃತಿಯ ಫಲದಿಂದಲೇ ಆಗುವುದು." ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಪರದೆ ಆಗಲೇ ಸರಿದಾಗಿದೆ. ಹಲವು ಭಾಷಿಕರಲ್ಲಿ ಈ ಬಗ್ಗೆ ಜಾಗೃತಿಯಾಗಿದೆ. ಇದೇ ರೀತಿ ಮುಂದುವರೆದು ಬೇರೆ ಬೇರೆ ಜನರ ಕೂಗು ಅವರನ್ನು ಆಳುವ ರಾಜಕೀಯ ಪಕ್ಷಗಳ ಮುಖಂಡರ ಕಿವಿಗೆ ದೊಡ್ಡ ಮಟ್ಟದಲ್ಲಿ ಬೀಳುವ ದಿನ ಬಂದಾಗ ಭಾರತದ ಸಂಸತ್ತಿನಲ್ಲಿ ಭಾರತದ ಭಾಷಾ ನೀತಿ ಬದಲಾಯಿಸಿ, ಸಂವಿಧಾನದ 8ನೇ ಪರಿಚೇದದಲ್ಲಿರುವ ಎಲ್ಲ 22 ಭಾಷೆಗಳನ್ನು ಭಾರತದ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆ ಎಂದು ಘೋಷಿಸುವ ಕಾನೂನು ಬರುವ ದಿನ ಬಂದೇ ಬರುತ್ತೆ.
ಅಲ್ಲಿಯವರೆಗೂ ನಾವು ನಮಗೆ ಲಭ್ಯವಿರುವ ಎಲ್ಲ ಅವಕಾಶಗಳನ್ನು, ಮಾಧ್ಯಮಗಳನ್ನು ಬಳಸಿಕೊಂಡು ಸರಿಯಾದ ಭಾಷಾ ನೀತಿಗಾಗಿ ಧ್ವನಿ ಎತ್ತುತ್ತಲೇ ಇರಬೇಕು. ಅದರಂತೆ ಈ ಬಾರಿಯ "ಹಿಂದಿ ಪಾಕ್ಷಿಕ" ಆಚರಣೆಯ ಸಮಯದಲ್ಲಿ ಭಾರತದ ಭಾಷಾ ನೀತಿ ಬದಲಾಗಬೇಕು ಎಂದು ಭಾರತ ಸರ್ಕಾರಕ್ಕೆ ಕರ್ನಾಟಕದಲ್ಲಿ ಅದರ ಪ್ರತಿನಿಧಿಯಾಗಿರುವ ರಾಜ್ಯಪಾಲರ ಮೂಲಕ ಹಿಂದಿಯೇತರ ನುಡಿಯಾಡುವ ಜನರ ಪರವಾಗಿ ಆನ್ ಲೈನ್ ಪಿಟಿಶನ್ ಒಂದನ್ನು ಶುರು ಮಾಡಿರುವೆ. ಈಗಾಗಲೇ ದೇಶ ವಿದೇಶದ ಹಲವು ನುಡಿಯಾಡುವ 870ಕ್ಕೂ ಹೆಚ್ಚು ಜನರು (ಈ ಬ್ಲಾಗ್ ಬರೆಯುವ ಹೊತ್ತಿಗೆ) ಈ ಪಿಟಿಶನ್ನಿಗೆ ಸಹಿ ಹಾಕುವ ಮೂಲಕ ಭಾಷಾ ನೀತಿ ಬದಲಾಗಲಿ ಅನ್ನುವ ಕೂಗಿಗೆ ಧ್ವನಿಯಾಗಿದ್ದಾರೆ.
ಒಂದು ಆನ್ ಲೈನ್ ಪಿಟಿಶನ್ ಮಾಡಿದ ಕೂಡಲೇ ಮಿರಾಕಲ್ ಆಗಿ ಬಿಡುತ್ತಾ? ಖಂಡಿತ ಇಲ್ಲ. ಆದರೆ ಇಂತಹ ಪ್ರತಿಭಟನೆಯ ಇಂತಹ ಚಿಕ್ಕ ಚಿಕ್ಕ ಹೆಜ್ಜೆಗಳೇ ನಾಳಿನ ಬದಲಾವಣೆಗೆ ಮುನ್ನುಡಿ ಬರೆಯುವಂತಹವು. ಇದೇ ಸೆಪ್ಟೆಂಬರ್ 14 ಪಾಕ್ಷಿಕದ ಕೊನೆ ದಿನ ಹಿಂದಿ ದಿವಸ್ ಆಚರಿಸುವ ಹೊತ್ತಿನಲ್ಲಿ ಈ ಪಿಟಿಶನ್ ಅನ್ನು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಪ್ರಜಾಸತ್ತಾತ್ಮಕ ಹಾದಿಯಲ್ಲೇ ಜನರ ಕೂಗನ್ನು ಆಳುವವರಿಗೆ ತಲುಪಿಸಬೇಕು.
ಆ ಕೆಲಸಕ್ಕೆ ನಾವೆಲ್ಲರೂ ಮುಂದಾಗೋಣ. ಪಿಟಿಶನ್ನಿಗೆ ನೀವು ಸಹಿ ಹಾಕಿ, ನಿಮ್ಮ ಕಮ್ಮಿ ಅಂದ್ರೂ ಹತ್ತು ಗೆಳೆಯರಿಗೆ ಮನವರಿಕೆ ಮಾಡಿ ಅವರ ಕೈಯಲ್ಲೂ ಸಹಿ ಹಾಕಿಸಿ. ಒಟ್ಟಾಗಿ ಸೇರಿ ಅತ್ಯಂತ ಪ್ರಜಾಸತ್ತಾತ್ಮಕ ಹಾದಿಯಲ್ಲಿ ನಮ್ಮ ಮನದಾಳದ ಮಾತನ್ನು ಕೇಂದ್ರಕ್ಕೆ ತಲುಪಿಸೋಣ ಮತ್ತು ನಮಗೆ ಬೇಕಿರುವ ಬದಲಾವಣೆ ತಂದುಕೊಳ್ಳುವತ್ತ ಮುಂದಾಗೋಣ.ಮತ್ಯಾಕೆ ತಡ, ಬನ್ನಿ ಕೈ ಜೋಡಿಸಿ. ಪಿಟಿಶನ್ ಕೊಂಡಿ:












Click it and Unblock the Notifications