Get Updates
Get notified of breaking news, exclusive insights, and must-see stories!

ಇಂಥವರ ಹೋರಾಟದಿಂದ ಯಾರಿಗೆ ಲಾಭ?

VM Srinivasa, Bengaluru
23 ವರ್ಷಕ್ಕೆ ವಿಧಿವಶರಾದ ಭಗತ್ ಸಿಂಗ್ ರಂತಹ ಹೋರಾಟಗಾರ ಇವತ್ತಿಗೂ ನಮಗೆ ಪ್ರಸ್ತುತವಾಗುತ್ತಾರೆ, ಯುವಕರಿಗೆ ಆದರ್ಶವಾಗುತ್ತಾರೆ. ಆದರೆ 80 ವರ್ಷಕ್ಕೂ ಮೇಲ್ಪಟ್ಟು 'ಗೌಡ'ಸ್ತಿಕೆ ಮಾಡುವವರು ಹೋರಾಟಗಾರರು ಎನಿಸುವುದೇ ಇಲ್ಲ. ಅವತ್ತಿನ ಹೋರಾಟಗಾರರ ಬಗ್ಗೆ ಗೌರವಗಳಿದ್ದರೆ, ಇವತ್ತಿನ ಹೋರಾಟಗಾರರ ಬಗ್ಗೆ ಅನುಮಾನಗಳಿವೆ.

ಅಸಲಿಗೆ ಈ ಹೋರಾಟ ಅಂದರೇನು? ಈ ಹೋರಾಟಗಾರರು ಯಾರು? ಇತ್ತೀಚೆಗೆ ನನ್ನನ್ನು ಬಹುವಾಗಿ ಕಾಡುತ್ತಿರುವ ಪ್ರಶ್ನೆ ಇದು. ಇದರ ಬಗ್ಗೆ ಚರ್ಚೆಮಾಡುವ ಮುನ್ನ ಡಾ.ವಿಷ್ಣುವರ್ಧನ್ ರವರು ಹೊಗೇನಕಲ್ ವಿವಾದದ ಸಂದರ್ಭದಲ್ಲಿ ಹೋರಾಟಗಳ ಬಗ್ಗೆ ಹೇಳಿರುವ ಒಂದು ಮಾತು ಹೀಗಿದೆ. "ಇತ್ತೀಚಿನ ಹೋರಾಟಗಳು ಅರಿವಿನಿಂದ ಹುಟ್ಟುತ್ತಿಲ್ಲ, ಪ್ರಚಾರಕ್ಕಾಗಿ, ಸ್ವಹಿತಾಸಕ್ತಿಗಾಗಿ ಹುಟ್ಟುತ್ತಿವೆ. ಯಾರೋ ಕರೆದರು, ಮತ್ತ್ಯಾರೋ ಹೋದರು, ಧಿಕ್ಕಾರ ಕೆಲವರಿಗೆ, ಜೈಕಾರ ಕೆಲವರಿಗೆ ಹಾಕಿ ಸಂಜೆ ಮನೆಗೆ ಬಂದರು ಅನ್ನುವಂತಾಗಿಬಿಟ್ಟಿದೆ. ಎಲ್ಲಿಯವರೆಗೂ ಈ ಹೋರಾಟಗಳು ಅರಿವಿನಿಂದ ಹುಟ್ಟುವುದಿಲ್ಲವೋ ಅಲ್ಲಿವರೆಗೆ ಜನಹಿತ ಗೆಲ್ಲದೇ ಪಟ್ಟಭದ್ರಹಿತಾಸಕ್ತಿಗಳು ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತವೆ ಅಷ್ಟೆ".

ದಿನಬೆಳಗಾದರೆ ಸಾಕು ದಿನಪತ್ರಿಕೆಗಳಲ್ಲಿ ಕಾವೇರಿದ ಕಾವೇರಿ ಹೋರಾಟ, ಹೊಗೇನಕಲ್ ಚಲೋ ಚಳುವಳಿ, ಎಂಇಎಸ್ ಮತ್ತು ಮಹಾರಾಷ್ಠ್ರದ ವಿರುದ್ಧ ತೀವ್ರಗೊಂಡ ಕರವೇ ರಾಜ್ಯವ್ಯಾಪಿ ಹೋರಾಟ, ರೈತರ ಪರವಾಗಿ, ನೈಸ್ ನ ವಿರುದ್ಧವಾಗಿ ದೇವೇಗೌಡರ ಧರಣಿ ಇಂದಿನಿಂದ, ಮಸಿಬಳಸಿಕೊಂಡ ಪ್ರಮಾ(ಮೋ)ದ ದಿಂದಾಗಿ ಕರ್ನಾಟಕ ಬಂದ್. ಊಫ್... ಒಂದೇ ಎರಡೇ ನೂರಾರು ಅಲ್ಲಲ್ಲ ಸಾವಿರಾರು ಹೋರಾಟಗಳು. ಆದರೆ....

ಈದಿನ ಪ್ರತಿಭಟನೆಗಳು ಮೂಲಸ್ವರೂಪದಲ್ಲೇ ಉಳಿದಿದ್ದಾವ?
ಪ್ರತಿಭಟನೆಯಿಂದ ಸಿಗುವ ಪ್ರಯೋಜನ ಜನರಿಗೆ ತಲುಪುತ್ತಿದೆಯಾ?
ಪ್ರಜೆಗಳು ಪ್ರತಿಭಟನೆಯನ್ನು ಮನಃಪೂರ್ವಕವಾಗಿ ಮಾಡುತ್ತಿದ್ದಾರ?
ಅಸಲಿಗೆ ಪ್ರತಿಭಟನೆಗಳು ಅರಿವಿನಿಂದ ಹುಟ್ಟುತ್ತಿವೆಯಾ?

ಖಂಡಿತ ಇಲ್ಲ. ಇವತ್ತು ಯಾರಿಗೂ ಪ್ರಸ್ತುತ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಆ ಸಮಸ್ಯೆಗಳ ಸಾಧಕ-ಬಾಧಕಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಇರುವುದಿಲ್ಲ. ಏನೂ ತಿಳಿಯದೇ ಹಲವಾರು ವಿಷಯಗಳ ಬಗ್ಗೆ ಮಾತಾಡ್ತೀವಿ. ವಿಸ್ಮಯನಗರಿಯ ಒಬ್ಬ ಜನಪ್ರಿಯ ಪಿಸುಮಾತುಗಾರರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾರು ಎಂಬುದು ಗೊತ್ತಿಲ್ಲ ಎಂಬುದು ನಿಮಗೆ ಗೊತ್ತಿರಲಿ. ಈಗ ಆ ವಿಷಯ ಬಿಟ್ಟು ಈ ಹೋರಾಟಗಳ ಬಗ್ಗೆ ನಮ್ಮನ್ನು ನಾವೇ ಪ್ರಾಮಾಣಿಕವಾಗಿ ಕೇಳಿಕೊಳ್ಳೋಣ.

ನಮ್ಮಲ್ಲಿ ಎಷ್ಟು ಜನಕ್ಕೆ ಬಿಟಿ ಬದನೆಕಾಯಿಯ ಅನುಕೂಲ-ಪ್ರತಿಕೂಲಗಳ ಬಗ್ಗೆ ಗೊತ್ತು?
ಎಷ್ಟು ಜನಕ್ಕೆ ಕಾವೇರಿ ನ್ಯಾಯಾಧೀಕರಣದ ಬಗ್ಗೆ ಗೊತ್ತು?
ಹೊಗೇನಕಲ್ ನಲ್ಲಿ ನಿಜವಾಗಿಯೂ ನಡೀತಿರೋದು ಏನು?
ನೈಸ್ ನ ಬಗ್ಗೆ ಸಂಪೂರ್ಣ ಮಾಹಿತಿ ಎಷ್ಟು ಜನಕ್ಕೆ ಇದೆ?

ಇವುಗಳ ಬಗ್ಗೆ ತಿಳಿದವರು ನಮ್ಮಲ್ಲಿ ಇರಬಹುದು, ಆದರೆ ಅವರ ಸಂಖ್ಯೆ ತುಂಬಾ ಕಡಿಮೆ. ಆದರೂ ನಾವು ಅವುಗಳ ಬಗ್ಗೆ ಮಾತಾಡ್ತೀವಿ, ಬರೀತೀವಿ, ಸಭೆಗಳಲ್ಲಿ ಗುಲ್ಲೆಬ್ಬಿಸುತ್ತೇವೆ. ಯಾಕೆ ಹೀಗೇ? ನಮ್ಮ ಇಂತಹ ಸಿನಿಕತನದ ಲಾಭ ಪಡಿತಿರೋದು ಯಾರು ಗೊತ್ತಾ? ನಮ್ಮನ್ನು ಆಳುವವರು. ಅಸಲಿಗೆ ಅವರಾದರು ಎಂತಹವರು ಅಂತ ನಾವು ಯೋಚಿಸುವುದೇ ಇಲ್ಲ!

ಕರ್ನಾಟಕ ರಕ್ಷಣಾವೇದಿಕೆ ಮಾಡಿದ್ದನ್ನು, ಜಯಕರ್ನಾಟಕ ಸಂಘಟನೆ ಖಂಡಿಸುತ್ತೆ. ಜಯಕರ್ನಾಟಕ ಮಾಡಿದ್ದನ್ನು ವಾಟಾಳ್ ಖಂಡಿಸುತ್ತಾರೆ. ಇವರೆಲ್ಲ ಮಾಡಿದ್ದಕ್ಕೆ ಭಿನ್ನವಾಗಿ ಕರುನಾಡು ಸೇನೆ ಮಾಡುತ್ತೆ. ಅಂದು ದೇವೇಗೌಡ ಮಾಡಿದ್ದನ್ನೇ ಇಂದು ಯಡಿಯೂರಪ್ಪ ಮಾಡಿದರೆ ಅದು ತಪ್ಪಾಗುತ್ತೆ. ಸಿದ್ಧರಾಮಯ್ಯ ವಲಸೆ ಮಾಡಿದರೆ ತಪ್ಪಿಲ್ಲ ಆದರೆ ಬೇರೆಯವರು ಮಾಡಿದರೆ ತಪ್ಪು. ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದರೆ ಸರಿ, ರಾಹುಲ್ ಗಾಂಧಿ ಮಾಡಿದರೆ ತಪ್ಪು. ಹೀಗೆ ಒಬ್ಬರು ಮಾಡಿದ್ದು ಇನ್ನೊಬ್ಬರಿಗೆ ರುಚಿಸಲ್ಲ. ಜನಕ್ಕೆ ಕಿವಡೆ ಕಾಸಿನ ಲಾಭವೂ ಇಲ್ಲದ ವಿಷಯಗಳನ್ನು ಇಟ್ಟುಕೊಂಡು ಇವರು ಹೋರಾಟಗಳನ್ನು ಹಮ್ಮಿಕೊಳ್ಳುತ್ತಾರೆ. ತಮ್ಮ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುತ್ತಾರೆ. ಯಾರಿಗೂ ಜನಹಿತ ಮುಖ್ಯವಲ್ಲ, ತಮ್ಮ ಸ್ವಹಿತಾಸಕ್ತಿವಷ್ಟೇ ಮುಖ್ಯ. ಯಾವು ಹೋರಾಟದಿಂದ ಎಷ್ಟು ಲಾಭ ಎನ್ನುವುದರ ಮೇಲೆ ಹೋರಾಟದ ಸ್ವರೂಪ ನಿರ್ಧರಿಸಲ್ಪಡುವುದು ದುರ್ದೈವವೇ ಸರಿ.

ಭಗತ್ ಸಿಂಗ್ ತಮ್ಮ ಲೇಖನವೊಂದರಲ್ಲಿ ಹೇಳುತ್ತಾರೆ. "ಹೋರಾಟಗಾರನಾದವನು ಒಂಟಿಕಾಲಿನಲ್ಲಿ ನಿಂತು ಬಿರುಗಾಳಿಯನ್ನು ಎದುರಿಸುವಂತಹ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು" ಆದರೆ ಇದು ಸುಲಭವಲ್ಲ. ಇದಕ್ಕೆ ತುಂಬಾ ಪ್ರೇರಣೆ ಬೇಕಾಗುತ್ತೆ. ನಮ್ಮ ಕಾಲಕೆಳಗಿನ ನೆಲ ಕುಸಿಯುವಂತಹ ಅನುಭವವಾದಾಗ, ನಮ್ಮ ಪ್ರಾಣವನ್ನೇ ಬೇಕಾದರೂ ಬಲಿ ಕೊಟ್ಟೇನು "ಅದಕ್ಕಾಗಿ" ಎನ್ನುವಂತಹ ಘಟನೆ ಸಂಭವಿಸಿದಾಗ ಹುಟ್ಟುವ ಹೋರಾಟವೇ ನಿಜವಾದುದು. ಬಹುಶಃ ನಿಮಗೆ ಅರಿವಾಗಿರಬೇಕು ಇಂತಹ ಹೋರಾಟ ಇಂದಿನ ದಿನಗಳಲ್ಲಿ ಹುಟ್ಟಲು ಸಾಧ್ಯವೇ ಇಲ್ಲ ಅಂತ.

ಯಾವೋನೋ ಮುಖಕ್ಕೆ ಮಸಿ ಬಳಿದರು ಅನ್ನುವ ಕಾರಣಕ್ಕೆ ಇಡೀ ಕರ್ನಾಟಕ ಬಂದ್ ಗೆ ಕರೆಗೊಡುವ, ಕೋಟ್ಯಾಂತರ ರುಪಾಯಿ ಸರ್ಕಾರಿ ಆಸ್ತಿ ನಷ್ಟ ಮಾಡುವ ಈ ಮತಿಹೀನರಿಗೆ ಏನೇಳುವುದು? ಹುಡುಕಿದರೆ ಇವರ ಸಂಘಟನೆಯಲ್ಲಿ ಸಾವಿರ ಜನ ಇಲ್ಲ. ಆರು ಕೋಟಿ ಕನ್ನಡಿಗರ ಕರ್ನಾಟಕವನ್ನು ಬಂದ್ ಮಾಡ್ತಾರಂತೆ. ಏನ್ ಇವರಪ್ಪನದಾ ಕರ್ನಾಟಕ? ಯಾವನೋ ನಾಯಕ, ಮತ್ತೊಬ್ಬ ನಾಯಕನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ಅಂದರೆ ಸಾಕು ಕಂಡಕಂಡಲೆಲ್ಲ ರಸ್ತೆ ತಡೆ, ಬಸ್ ಗಳ ಪುಡಿಪುಡಿ. ಅಸಲಿಗೆ ಈ ಎಲ್ಲಾ ಘಟನೆಗಳಲ್ಲಿ ಎಲ್ಲಾದರೂ ಪ್ರಜೆಗಳ ಹಿತ ಅಡಗಿದೆಯಾ? ಪ್ರಜೆಗಳ ತೆರಿಗೆ ಹಣವನ್ನು ಪೋಲು ಮಾಡುವುದು ಬಿಟ್ಟು.

ಇಂತಹ ಸಂದಿಗ್ದ ಸ್ಥಿತಿಯಲ್ಲಿ ಇಂದಿನ ಯುವಕರಲ್ಲಿ ಜಾಗೃತಿ ಮೂಡಬೇಕಿದೆ. ನಾಯಕನ ಅಂಧಾನುಕರಣೆಗಿಂತ ವಾಸ್ತವಗಳ ಬಗ್ಗೆ ಅರಿವು ಹೆಚ್ಚಬೇಕಿದೆ. ಕೊನೆಯಲ್ಲಿ ಒಂದು ಮಾತು ಭಗತ್ ಸಿಂಗ್ ಹೇಳಿದ್ದು "ನಿಜವಾದ ಹೋರಾಟಗಾರನಿಗಿರಬೇಕಾದ ಕನಿಷ್ಠ ಅರ್ಹತೆ ಎಂದರೆ ಎಲ್ಲವನ್ನು ಪ್ರಶ್ನಿಸುವುದು. ಪ್ರಶ್ನೆಗೆ ಸಿಕ್ಕ ಉತ್ತರವನ್ನು ಮತ್ತೆ ವಿಮರ್ಶೆಗೆ ಒಳಪಡಿಸಿ, ತಮ್ಮದೇ ಆದ ಸ್ವಂತಿಕೆಯನ್ನು ರೂಡಿಸಿಕೊಂಡು ಅದೇ ಹಾದಿಯಲ್ಲಿ ನಡೆಯುವುದು". ಸಾಧ್ಯಾನ..? ಸಾಧ್ಯ... ಅಸಾಧ್ಯತೆಗಳ ನಿರೀಕ್ಷೆಯಲ್ಲಿರುವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+