ವಿಶಿಷ್ಟ ಅನುಭವಗಳ ಮೂಟೆ ಹುಣ್ಸ್ ಮಕ್ಕಿ ಹುಳ ಪುಸ್ತಕ ಲೋಕಾರ್ಪಣೆ
ಬೆಂಗಳೂರು, ಮಾರ್ಚ್ 30: ನಗರದ ಬ್ರಿಗೇಡ್ ಸಾಫ್ಟ್ ವೇರ್ ಪಾರ್ಕ್ನ ಫಿಡಿಲಿಟಿಸ್ ಆರ್ಟ್ ಗ್ಯಾಲರಿಯಲ್ಲಿ ಹೂವಿನ ಹೊಳೆ ಪ್ರತಿಷ್ಠಾನದಿಂದ ಮೂಡಿಬಂದ ಯುವ ಲೇಖಕಿ ವಿನುತಾ ವಿಶ್ವನಾಥ್ ಅವರ ಹುಣ್ಸ್ ಮಕ್ಕಿ ಹುಳ ನೂತನ ಕೃತಿಯನ್ನು ವಿವಿಧ ರಂಗದ ಸಾಧಕರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಲೇಖಕ ಜೋಗಿ ಅವರು,"ಬದುಕನ್ನು ಅದು ಬಂದಂತೆ ಜೀವಿಸಬೇಕು. ಅಂದಾಗ ಮಾತ್ರ ಸವಾಲುಗಳನ್ನು ಎದುರಿಸುವ ಸ್ಥೈರ್ಯ ಬರುತ್ತದೆ. ಈ ಪುಸ್ತಕ ಆ ನಿಟ್ಟಿನಲ್ಲಿ ಅತ್ಯುತ್ತಮ ಪ್ರೇರಕ ಶಕ್ತಿ ನೀಡುತ್ತದೆ. ಪುಸ್ತಕಗಳು ನಾನಾ ಅನುಭವಗಳನ್ನು ಎರುವಲು ಪಡೆಯಲು ನೆರವಾಗುತ್ತವೆ. ಅಂಥ ಹತ್ತು ಹಲವು ಅನುಭವಗಳನ್ನ ಈ ಪುಸ್ತಕದಲ್ಲಿ ಕಟ್ಟಿ ಕೊಡಲಾಗಿದೆ. ಅನ್ಯಾಯದ ವಿರುದ್ಧ ಹೋರಾಡುವ ಮುಖ್ಯ ಸಂದೇಶವನ್ನ ವಿನುತಾ ಈ ಕೃತಿಯಲ್ಲಿ ದಾಖಲಿಸಿರುವುದು ಗಮನಾರ್ಹ ಅಂಶವಾಗಿದೆ," ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ರಂಗಕರ್ಮಿ, ನಿರ್ದೇಶಕ ಸುಚೇಂದ್ರ ಪ್ರಸಾದ ಮಾತನಾಡಿ,"ಎಲ್ಲರ ಬದುಕಿನ ಹಲವು ತಹತಹಗಳಿವೆ, ತಾಕಲಾಟಗಳಿವೆ, ತುಮಲಗಳಿವೆ. ಆ ಎಲ್ಲಾ ಭಾವನೆಗಳನ್ನು ವಿನುತಾ ಅಕ್ಷರ ರೂಪಕ್ಕೆ ಇಳಿಸುವ ವಿಶಿಷ್ಟ ಪ್ರಯತ್ನವಾಗಿದೆ. ಅವರ ಅಕ್ಷರ ಪಸೆ ನಿರಂತರವಾಗಿ ಆರದಿರಲಿ" ಎಂದು ಆಶಿಸಿದರು.
ಗಾಯಕಿ ಅರ್ಚನಾ ಉಡುಪ ಮಾತನಾಡಿ,"ಪ್ರತಿಯೊಬ್ಬರ ಜೀವನದಲ್ಲೂ ಕಾಲೆಳೆಯುವ, ಕಲ್ಲಿನಿಂದ ಹೊಡೆಯುವ ನಾನಾ ರೀತಿಯಲ್ಲಿ ನಮ್ಮ ಸ್ಥೈರ್ಯವನ್ನು ಅಡಗಿಸುವ ಕೆಲಸವನ್ನ ಜನ ಮಾಡುತ್ತಿರುತ್ತಾರೆ. ಆ ಪೆಟ್ಟುಗಳನ್ನೇ ಸಾಧನೆಗೆ ಸಾಧನಗಳನ್ನಾಗಿ ಮಾಡಿಕೊಂಡಿದ್ದಾರೆ ವಿನುತಾ," ಎಂದರು.
ಮೀಡಿಯಾ ಕನೆಕ್ಟ್ ಸಿಇಒ ದಿವ್ಯಾ ರಂಗೇನಹಳ್ಳಿ,"ದೈಹಿಕವಾಗಿ ಅಥವಾ ಮಾನಸಿಕವಾಗಿ ಪೆಟ್ಟು ತಿನ್ನದೇ ಮನುಷ್ಯನಿಂದ ದೊಡ್ಡ ಸಾಧನೆ ಮೂಡಿಬರಲಾರದು. ಅದು ವಿನುತಾ ಅವರ ವಿಷಯದಲ್ಲಿಯೂ ರುಜುವಾತಾಗಿದೆ. ಇವರ ಸ್ಥೈರ್ಯ ಮತ್ತು ಛಲ ಎಲ್ಲರಿಗೂ ಮಾದರಿ. ಈ ಕಾರಣಕ್ಕೆ ವಿನುತಾ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ", ಎಂದು ಹೇಳಿದರು.
ಕೃತಿಯ ಲೇಖಕಿ ವಿನುತಾ ವಿಶ್ವನಾಥ ಮಾತನಾಡಿ,"ಇದು ಕೇವಲ ನೋವಿನ ಹಾಗೂ ಗೋಳಿನ ಕಥೆಯಷ್ಟೇ ಅಲ್ಲ. ಬದುಕಿನ ಹಲವು ಅನುಭವಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ನಾವು ಹೇಗೆ ಇದ್ದೇವೋ ಅದನ್ನ ಹಾಗೇ ಸ್ವೀಕರಿಸಬೇಕು ಎಂಬುದನ್ನ ನನ್ನ ಜೀವನ ಕಲಿಸಿಕೊಟ್ಟ ಪಾಠ. ಅದನ್ನ ಇಲ್ಲಿ ಯಥಾವತ್ತಾಗಿ ದಾಖಲಿಸುವ ಯತ್ನ ಮಾಡಿದ್ದೇನೆ," ಎಂದರು.
ಕಾರ್ಯಕ್ರಮದಲ್ಲಿ ಲೇಖಕಿ ಗೀತಾ ಬಿ ಯು, ನಟಿ ಸುಮನ್ ನಗರ್ ಕರ್, ನಟ ಹಾಗೂ ನಿರೂಪಕ ಶೈನ್ ಶೆಟ್ಟಿ, ರೇಡಿಯೋ ಜಾಕಿ ಸೌಜನ್ಯ, ಫಿಡಿಲಿಟಸ್ ಕಾರ್ಪ್ ನ ಅಚ್ಯುತ್ ಗೌಡ ಉಪಸ್ಥಿತಿರಿದ್ದರು.
Recommended Video
ಈ ಕಾರ್ಯಕ್ರಮಕ್ಕೆ ಹೂವಿನ ಹೊಳೆ ಪ್ರತಿಷ್ಠಾನದ ಜೊತೆಗೆ ಫಿಡಿಲಿಟಸ್ ಗ್ಯಾಲರಿ, ಶಿಲ್ಪ ಫೌಂಡೇಷನ್, ಸುದಯ ಟ್ರಸ್ಟ್ ಬೆಂಗಳೂರು ಸಹಕಾರ ನೀಡಿದ್ದವು.