ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನನ್ನಿ’ ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ

By ತೇಜಸ್ವಿನಿ ಹೆಗಡೆ
|
Google Oneindia Kannada News

ಎರಿಕ್ ಕೃತಿಯ ಕಟು ಸತ್ಯಗಳ ಬಗ್ಗೆ ಮುಂದೆ ಓದಿ...

ಎರಿಕ್ ಬರೆದಿದ್ದು ಎನ್ನಲ್ಲಾಗುವ "ಸತ್ಯ ದಯೆ ಮತ್ತು ಸೇವೆ" ಹಾಗೂ "ಮಾನವ ಜಗತ್ತಿನ ಅಪಮೌಲ್ಯಗಳು" ಎಂಬೆರೆಡು ಪುಸ್ತಕಗಳೊಳಗಿನ ವಾಸ್ತವಿಕ ಅಂಶಗಳ ಮಂಥನದಿಂದ ಹೊರ ಬರುವ ಕಟು ಸತ್ಯಗಳು ಓದುಗರಿಗೆ ಜೀರ್ಣಿಸಿಕೊಳ್ಳಲು ತುಸು ತ್ರಾಸದಾಯಕವೂ ಆಗುವುದು. ಆ ನಿಟ್ಟಿನಲ್ಲಿ ಆಮೂಲಾಗ್ರವಾಗಿ ಇಂತಹ ಒಂದು ಸತ್ಯ ಶೋಧನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟ ಕರಣಂ ಪವನ್ ಪ್ರಸಾದ್ ಅವರ ಈ ಅಪೂರ್ವ ಪುಸ್ತಕ 'ನನ್ನಿ' ಎಂದರೆ ಖಂಡಿತ ಉತ್ಪ್ರೇಕ್ಷೆಯೆನಿಸದು.

ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲೊಂದಾದ ಎರಿಕ್ ಬರ್ಗ್ ಎಂಬ ಯುರೋಪಿಯನ್ ಸತ್ಯಶೋಧಕನಷ್ಟೇ ನನ್ನ ಕಾಡಿದ ಪಾತ್ರವೆಂದರೆ, ತೇಗೂರಿನ ರಾಯಪ್ಪ. ಕ್ರಿಶ್ಚನ್ ವಳಿಗನಾಗಿ ಬಾಳಿದ, ಬದುಕಲು ಹೆಣಗಾಡಿದ, ತಾ ಸಾಯುತ್ತಲೇ ತನ್ನ ಪೋಲಿಯೋ ಪೀಡಿತ ಮಗಳಿಗಾಗಿ ದುಡಿದು ದಣಿದ, ಆತನ ಆ ಬೆಚ್ಚಿ ಬೀಳಿಸುವ ಕೊನೆಯ ಎಣಿಸುವಾಗೆಲ್ಲಾ ಎದೆ ಝಿಲ್ಲೆನಿಸುತ್ತದೆ.

ಚಿಂತನೆಗೆ ಒರೆ ಹಚ್ಚುವ ಪಾತ್ರಗಳು: ಈ ಪಾತ್ರದ ಕುರಿತು ನಾನು ಏನೇ ಹೇಳಿದರೂ ಅದು ಓದುಗರ ಓದುವ ಸುಖವನ್ನು ಕಸಿದುಕೊಂಡಂತಾಗುವುದು. ಈ ಪಾತ್ರ ಚಿತ್ರಣವನ್ನಷ್ಟೇ ಅಲ್ಲಾ, ಈ ಕಾದಂಬರಿಯ ಬೇರಾವ ಪಾತ್ರವನ್ನೂ ಹೆಚ್ಚು ವಿಶ್ಲೇಷಿಸಹೋಗುವುದು ಈ ನಿಟ್ಟಿನಲ್ಲಿ ಸಮಂಜಸವೆನಿಸದು.

ಹಾಗಾಗಿ ನಾನು ಓದಿದಾಗಿನಿಂದ ನನ್ನ ಬಿಟ್ಟೂ ಬಿಟ್ಟೂ ಕಾಡುತಿಹ ನನ್ನಿಷ್ಟದ ಪಾತ್ರ, ಕಥೆಯ ಜೀವಾಳನಾಗಿರುವ (ನನ್ನ ವೈಯಕ್ತಿಕ ಅನಿಸಿಕೆಯಂತೇ) ಎಡಿನ್ ಬರ್ಗ್‌ನ ಕೆಲವು ಸಾರ್ವಕಾಲಕ ಸತ್ಯ ದರ್ಶನವನ್ನು, ರೋಣಾಳ ಮಂಥನವನ್ನು ಕಾದಂಬರಿಯಲ್ಲಿದ್ದ ಹಾಗೇ ಇಲ್ಲಿ ಹಂಚಿಕೊಳ್ಳಬಯಸುತ್ತಿದ್ದೇನೆ. ಈ ಕೆಳಗಿನ ಪ್ರತಿ ಸಾಲೂ ಹೊಸ ಚಿಂತನೆಗಳಿಗೆ, ಹೊಳಹುಗಳಿಗೆ, ಮಂಥನಕ್ಕೆ ನಮ್ಮನ್ನೆಳೆಸುವಂತಿದ್ದು, ಓದುಗರನ್ನೂ ಸತ್ಯಾನ್ವೇಷಣೆಗೆ, ಸ್ವ ವಿಮರ್ಶೆಗೆ ಖಚಿತವಾಗಿಯೂ ಎಳೆಸುತ್ತವೆ ಎಂಬುದು ನನ್ನ ವಿಶ್ವಾಸ.

1) ಪ್ರಚಾರ ಹೇಗೆ ಪಡೀಬೇಕು ಅನ್ನೋದು ಮುಖ್ಯವೇ ಹೊರತು, ಪ್ರಚಾರಕ್ಕಾಗಿ ಏನು ಮಾಡಿದೆವು ಅನ್ನೋದಲ್ಲ. ನಾನು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಪ್ರಚಾರಕ್ಕೆ ಇಳಿದವನಿಗೂ ಗೊತ್ತಾಗಬಾರದು. ಹಾಗೆ ನೋಡಿಕೊಳ್ಳೋದು ಜಾಣತನ. (ಫಾಬ್ರಿಗಸ್ ಹೇಳುವ ಈ ಮೇಲಿನ ಮಾತೊಳಗಿನ ಮೊನಚು, ವ್ಯಂಗ್ಯ.. ಅದರೊಳಗಿನ ವರ್ತಮಾನದ (ಪ್ರಸ್ತುತ) ಕಟು ವಾಸ್ತವ ಎಷ್ಟು ದಿಟ ಎಂದೆನಿಸಿತು.)

2) "ಹೇಳಿಕೊಳ್ಳದ ತ್ಯಾಗಗಳಿಗೆ ಬೆಲೆ ಇರೋಲ್ಲ. ಹೇಳಿಕೊಂಡ ತ್ಯಾಗಗಳನ್ನು ನಂಬೋಕೆ ಆಗಲ್ಲ."

3) ಯಾವುದು ತಪ್ಪು ಎನ್ನಿಸುತ್ತದೋ ಆಗ ಅದನ್ನು ಸರಿಯೊಂದಿಗಿನ ಯಾವುದೋ ಒಂದು ಅಂಶದೊಂದಿಗೆ ಕೂಡಿಸಿ ತಪ್ಪನ್ನು ಸರಿ ಎನ್ನಿಸುವ ಕುಚೋದ್ಯ ಪ್ರಯತ್ನ ಇಲ್ಲಿ ಪುನರಾವರ್ತನೆ ಆಗುತ್ತಿಲ್ಲವೇ? (ರೋಣಾಳ ಜಿಜ್ಞಾಸೆ)

Nunni Kannada novel review

4) ಕಾರಣ ಅಶುದ್ಧವಾದ ಮೇಲೆ ಕ್ರಿಯೆಯೂ ಅಶುದ್ಧವೇ, ಕ್ರಿಯೆಗಳಿಂದ ಕಾರಣ ಹುಟ್ಟುವುದಿಲ್ಲ. ಕಾರಣಗಳಿಂದಲೇ ಕ್ರಿಯೆ ಹುಟ್ಟುತ್ತದೆ. ಅದರಲ್ಲೂ ಕಾರಣವಿರುವ ಸೇವೆ!? ಇದರ ಆಳಕ್ಕೆ ಹೋಗಲು ಆಗುತ್ತಿಲ್ಲ. ಹೌದು ಜಗತ್ತಿನಲ್ಲಿ ಯಾವುದೂ ಸೇವೆಯಲ್ಲ. ಸಹಕಾರವಷ್ಟೇ ನಿಜ.

5) ಮಾನವನು ಪ್ರಾರಂಭಿಸುವ ಪ್ರತಿಯೊಂದು ಸತ್ಕಾರ್ಯಗಳು ಮೂಲದಲ್ಲಿ ನಿಸ್ವಾರ್ಥ ಸೇವೆಯೇ ಆಗಿದ್ದು, ಅನಂತರ ಇಷ್ಟಾರ್ಥಕಾಮವಾಗೇ ಕೊನೆಗೊಳ್ಳುತ್ತದೆ.

6) ಪ್ರಕೃತಿ ಯಾವುದನ್ನು ಹಿಡಿತದಲ್ಲಿಟ್ಟು, ಯಾವುದನ್ನು ಬೆಳೆಸಬೇಕು ಎಂದು ಆಲೋಚಿಸಿಯೇ ಪ್ರತಿ ಜೀವಿಗೂ ಗುಣಗಳನ್ನು ನೀಡಿದೆ. ಆದರೆ ಮಾನವನು ತನ್ನ ಪಾಕೃತಿಕ ಗುಣಗಳಿಂದ ದೂರವಾಗಿ, ವಿವೇಚನೆಯ ಹೆಸರಿನಲ್ಲಿ ಸಹಜೀವಿ, ಜಗತ್ತನ್ನೇ, ಹತೋಟಿಗೆ ತೆಗೆದುಕೊಂಡು ಹಾಳುಮಾಡುತ್ತಿದ್ದಾನೆ. ಮಾನವನ ಮೂಲ ಗುಣವೇ ಸ್ವಾರ್ಥ. ತನ್ನೆಲ್ಲಾ ಅಪಾಕೃತಿಕ ಗುಣಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಮಾನವ ಜನಾಂಗ ಮರೆಯಾಗುತ್ತಿದೆ. ಈಗಿರುವುದು ಮಿತಿಯನ್ನು ಮೀರಿದ ಕ್ರೂರ ಜೀವ ಸಂತತಿ....

7) ಮನುಷ್ಯ ಹುಲಿಯನ್ನು ಕೊಂದರೆ ಶೌರ್ಯ, ಆದರೆ ಹುಲಿ ಮನುಷ್ಯನನ್ನು ಕೊಂದರೆ ಕ್ರೌರ್ಯ! (ಜಾರ್ಜ್ ಬರ್ನಾಡ್ ಶಾ) ನನ್ನ ಪ್ರಕಾರ ಪ್ರಾಣ ರಕ್ಷಣೆಗೆ ಹೊರತಾದ ಎಲ್ಲಾ ತರಹದ ಪ್ರಾಣಿಹತ್ಯೆಯೂ ಕ್ರೌರ್ಯವೇ... ಆದರೆ ಮನುಷ್ಯ ಕಾಡನ್ನು ನೆಲಸಮ ಮಾಡಿ, ಪ್ರಾಣ ರಕ್ಷಣೆಯೆಂದು ಆಗಲೂ ಪ್ರಾಣಿಹತ್ಯೆ ಮಾಡುತ್ತಾನೆ. ಮನುಷ್ಯನಿಗೆ ವಿಕೃತಿ ತೋರಲು ಕಾರಣ ಬೇಕು, ಅಷ್ಟೇ.
ನಾನಿಲ್ಲಿ ಕೊಟ್ಟಿರುವುದು 'ನನ್ನಿ'ಯಲ್ಲಿ ದಾಖಲಾಗಿರುವ ಕೆಲವೇ ಕೆಲವು ನನ್ನಿಗಳನ್ನು. ಅವುಗಳ ಪೂರ್ಣ ಪಾಠಕ್ಕೆ ಕಾದಂಬರಿಯ ಸಮಗ್ರ ಓದು, ಚಿಂತನೆ ಅತ್ಯಗತ್ಯ.

ಇಲ್ಲಿ ಕಾಣ ಸಿಗುವ, ಕುಕ್ಕುವ, ಕರಗಿಸುವ, ಬೆಚ್ಚಿಸುವ, ಕಣ್ಮುಚ್ಚಿ ದಿಟ್ಟಿ ಹೊರಳಿಸಲು, ನಿರ್ಲಕ್ಷಿಸಿ ತಾತ್ಕಾಲಿಕ ನೆಮ್ಮದಿ ಪಡೆಯಲು ಪ್ರೇರೇಪಿಸುವ 'ಸತ್ಯವು ನಿಜವಾಗಿಯೂ ಉರಿವ ಸೂರ್ಯನಂತೇ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವೇ'. ಕಾದಂಬರಿಯಲ್ಲೆಲ್ಲೋ ಬರುವಂತೇ.. 'ಇಲ್ಲಿ ನಾವು ವಿಮರ್ಶಿಸಬೇಕಾದದ್ದು ಸತ್ಯಕ್ಕೆ ಯಾರು ಹತ್ತಿರವಿದ್ದಾರೆ ಎಂದೇ ಹೊರತು ಸತ್ಯವನ್ನು ಮುಟ್ಟಿದವರು ಯಾರು ಎಂದಲ್ಲ.' ಅಂತಹ ಸತ್ಯವನ್ನು ಜಾಗೃತಿಯಲ್ಲೇ, ಜಾಗೃತೆಯಿಂದ ತಡವುವ, ಕೊಂಚ ವಿಶಾದದೊಂದಿಗೇ ಸ್ವೀಕರಿಸುವ ಸಣ್ಣ ಅವಕಾಶ ಓದುಗರಾದ ನಮಗೆ ಕಲ್ಪಿಸುತ್ತದೆ 'ನನ್ನಿ'.

English summary
Karanam Pavan Prasad Nunni Kannada novel review Tejaswini Hegde. Nunni reveals around a 'Nun' who is in search of Truth.Nunni speaks about the truth and duties in Christianity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X