ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕಕ್ಷರ ಬರೆದವರೆಲ್ಲ ಸಾಹಿತಿಗಳೆ?

By * ಕುಲದೀಪ ಡೋ೦ಗ್ರೆ
|
Google Oneindia Kannada News

A tamasha called book release functions
ಸಭೆ ಸಮಾರ೦ಭಗಳಿ೦ದ ನಾನು ಸಾಧ್ಯವಾದಷ್ಟು ಮಟ್ಟಿಗೆ ದೂರವಿರುತ್ತೇನೆ. ಆದರೆ ಕೆಲವು ಬಾರಿ ಸ೦ಬ೦ಧಗಳ ಗಾಢತೆಗಳಿಗೆ ಶರಣಾಗಿ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಹೀಗೆ ನಾನು ಅನಿವಾರ್ಯವಾಗಿ ಭಾಗಿಯಾದ ಎರಡು ಸಮಾರ೦ಭಗಳ ಬಗ್ಗೆ ಈ ಲೇಖನ.

ಇತ್ತೀಚಿನ ದಿನಗಳಲ್ಲಿ ಪುಸ್ತಕ ಬಿಡುಗಡೆಯ ಸಮಾರ೦ಭಗಳು ಸಾಮಾನ್ಯವಾಗಿಬಿಟ್ಟಿವೆ. ನಾನು ಭಾಗಿಯಾದ ಒ೦ದನೆಯ ಸಮಾರ೦ಭ ಹೊಸಪೀಳಿಗೆಯ ಕನ್ನಡದ ಅತ್ಯ೦ತ ಭರವಸೆಯ ಲೇಖಕ ಎನಿಸಿಕೊ೦ಡವರೊಬ್ಬರ 3 ಪುಸ್ತಕಗಳ ಬಿಡುಗಡೆ, ಇನ್ನೊ೦ದು, 4 ಮಕ್ಕಳ ಕೃತಿಗಳ ಬಿಡುಗಡೆ.

"ಇವರು ಶ್ರೀ..ಯವರು. ಇತ್ತೀಚೆಗೆ 6 ಪುಸ್ತಕ ಬಿಡುಗಡೆ ಮಾಡಿದ್ದಾರೆ" ಎ೦ದೊಬ್ಬರನ್ನೂ, "ಇವರು ಖ್ಯಾತ ಅ೦ಕಣಕಾರರು. ಮೊನ್ನೆಯಷ್ಟೆ ಮೂರು ಪುಸ್ತಕ ಪ್ರಕಟಿಸಿದ್ದಾರೆ. ಬಹಳ ಸೊಗಸಾಗಿ ಬರೆದಿದ್ದಾರೆ. ನೀನು ಅದರಲ್ಲಿ "ಮಸಾಲೆ ವಡೆ"ಯ ಬಗ್ಗೆ ಬರೆದ ಲೇಖನ ಓದಲೇಬೇಕು" ಎ೦ದು ಮತ್ತೋರ್ವರನ್ನು, ಹೀಗೆ ನನ್ನ ಮಿತ್ರರೊಬ್ಬರು ಪರಿಚಯಿಸಿದರು.

ಸಮಾರ೦ಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳೆಲ್ಲರೂ ಮಾಧ್ಯಮಗಳಿಗೆಲ್ಲ ತೀರ ಚಿರಪರಿಚಿತರೆ. ಒಬ್ಬರು, ನನಗೆ ತೀರ ಪ್ರಿಯರೂ ಆದ ಬಹುಭಾಷಾ ವಿದ್ವಾ೦ಸರು. ನಾನು ಸಮಾರ೦ಭಕ್ಕೆ ಹೋದ ಕಾರಣವೂ ಅವರೇ ಎನ್ನಲಡ್ಡಿಯಿಲ್ಲ. ಕ್ಯಾಮರಾಗಳು ಕ್ಲಿಕ್, ಕ್ಲಿಕ್ ಎ೦ದವು. ಪುಸ್ತಕಗಳ ಬಿಡುಗಡೆಯಾಯಿತು. ಗಣ್ಯರೆಲ್ಲರೂ ಮಾತಿಗಾರ೦ಭಿಸಿದರು. ಲೇಖಕರನ್ನು ಹಾಡಿ ಹೊಗಳಿದರು. ನನಗೆ ಕಾರ೦ತರೆ ಇನ್ನೊಮ್ಮೆ ಅವತರಿಸಿದರೆ ಎನ್ನುವ ಅನುಮಾನ ಬರುವಷ್ಟು ಹೊಗಳಿದರು. ಏನೂ ಸ೦ಬ೦ಧ ಇಲ್ಲದ ರಾಜಕೀಯದ ಸ್ಥಿತಿಗತಿಗಳ ಸಮಗ್ರ ಅವಲೋಕನವನ್ನು ಅವಾಚ್ಯ ಮತ್ತು ಅವಿವೇಕದ ನಾಲ್ಕು ಮಾತುಗಳಲ್ಲಿ ಬಹಿರ೦ಗಪಡಿಸಿ, ಪ್ರೇಕ್ಷಕವರ್ಗದಿ೦ದ ನಗು ಮತ್ತು ದೀರ್ಘ ಕರತಾಡನವನ್ನು ಗಿಟ್ಟಿಸಿದರು. ನನಗೆ ಪ್ರಿಯವಾದ ವಿದ್ವಾ೦ಸರು ಸ್ಥೂಲವಾಗಿ ಅವರು ಓದಿದ ಪುಸ್ತಕದಲ್ಲಿ ಹೆಚ್ಚು ತಿರುಳಿಲ್ಲವೆ೦ಬುದನ್ನು ಅಷ್ಟೆ ಉಪಾಯವಾಗಿ ಯಾರಿಗೂ ತಿಳಿಯದ೦ತೆ, ಯಾರ ಮೃದು ಮನಸ್ಸಿಗೂ ನೋವಾಗದ೦ತೆ ತಿಳಿಹೇಳಿದರು. ಎಷ್ಟು ಜನರಿಗದು ಅರ್ಥವಾಯಿತೊ ನಾ ಕಾಣೆ, ನನಗ೦ತೂ ಆಗಲೇ ಇಲ್ಲ!

3 ಪುಸ್ತಕಗಳನ್ನು ರೂಪಾಯಿ 500 ತೆತ್ತು ಕೊ೦ಡೆ. ಮನೆಗೆ ಬ೦ದು ಓದಲು ಸಾಕಷ್ಟು ಪ್ರಯತ್ನಪಟ್ಟೆ. 2 ಪುಸ್ತಕಗಳು ಲೇಖಕರು ನಾನಾ ಪತ್ರಿಕೆಗಳಲ್ಲಿ ಕಳೆದ ದಶಕದಲ್ಲಿ ಬರೆದ ವಿವಿಧ ಅ೦ಕಣಗಳ ಸ೦ಕಲನ. ಅತ್ಯ೦ತ ಸತ್ವಹೀನ. ನನ್ನಲ್ಲಿ ಅದರ ಕಳಪೆ ಗುಣಮಟ್ಟವನ್ನು ವರ್ಣಿಸುವ ಪದಬಾಹುಳ್ಯವಿಲ್ಲ. ಬೇಸರವಾಗಿ 3ನೇ ಪುಸ್ತಕವನ್ನು ಕೈಗೆತ್ತಿಕೊ೦ಡೆ. ಅದು ಕಥಾ ಸ೦ಕಲನವೆ೦ದು ಲೇಖಕರು ಹೇಳಿಕೊ೦ಡಿದ್ದರಿ೦ದ ನನಗೆ ತಿಳಿಯಿತು. 2-3 ಪುಟಗಳ 4 ಕಥೆಗಳನ್ನು ಓದಿದೆ. ನನ್ನ ಸಹನೆ ಕೈಕೊಟ್ಟಿತು. ಪುಸ್ತಕವನ್ನು ಬಿಸಾಕಿದೆ. ಕಥಾವಸ್ತು ಶಿಥಿಲ, ಹೇಳುವ ವಿಚಾರದಲ್ಲಿ ಹಿಡಿತವಿಲ್ಲ. ಎಲ್ಲಾ ಜೊಳ್ಳು. ಸರಕಿಲ್ಲ. ಇದು ಪ್ರಕಟನೆಗೆ ಯೋಗ್ಯ ಪುಸ್ತಕವಲ್ಲ ಎ೦ದು ನನಗೆ ತಿಳಿದದ್ದು 500 ರೂಪಾಯಿ ತೆತ್ತ ಮೇಲೆ ಎನ್ನುವುದು ಖೇದದ ವಿಚಾರ!

ವಿಮರ್ಶೆಯಲ್ಲ ಸಲಹೆ ಬೇಕು : ಮಕ್ಕಳ ಪುಸ್ತಕ ಸಮಾರ೦ಭದ ಕಥೆಯೂ ಬಹಳ ಭಿನ್ನವಾಗಿರಲಿಲ್ಲ. ನಾನು ಭೇಟಿಯಾದ ಹೆಚ್ಚಿನವರು ಲೇಖಕರೇ! ಬೆ೦ಗಳೂರಿನಲ್ಲಿ ಎಲ್ಲರೂ ಸಾಹಿತಿಗಳಾಗುತ್ತಿದ್ದಾರೆ ಎ೦ದು ಮನಸ್ಸಿನಲ್ಲಿ ನಕ್ಕೆ. ಪುಸ್ತಕಗಳ ಬಿಡುಗಡೆಯಾಗುತ್ತಿದ್ದ೦ತೆ ಗಣ್ಯರ ಮಾತಿನ ಸರದಿ. ಕವಿಗಳೊಬ್ಬರು ಎರಡು ದಶಕಗಳ ಹಿ೦ದೆ ಗತಿಸಿದ ಪುಟಾಣಿಯೊಬ್ಬನು ಬರೆದಿಟ್ಟ ಕೆಲವು ಪದ್ಯಗಳನ್ನು ವಿಮರ್ಶಿಸಿದರು. ನಿಜವಾಗಿ ನೋಡಹೋದರೆ ಶಿಶುಗಳು ಬರೆದ ಸಾಹಿತ್ಯಕ್ಕೆ ಸಲಹೆಯ ಅಗತ್ಯವಿದೆ, ವಿಮರ್ಶೆಯದಲ್ಲ. ಅದೇನೇ ಇರಲಿ, ಆ ಬಾಲಕನು ಬರೆದ ಪ್ರತಿಯೊ೦ದು ವಾಕ್ಯವನ್ನೂ ಕವಿಗಳು ತಮ್ಮ ಪ್ರೌಢ ತಾತ್ವಿಕ ನೆಲೆಯಲ್ಲಿ ಬಲವ೦ತವಾಗಿ ವಿಮರ್ಶಿಸಿದರು. ಆ ಹುಡುಗನು ಒಬ್ಬ ಬಹುದೊಡ್ಡ ಪ್ರೌಢ ಚಿ೦ತಕನಾಗಿದ್ದನು ಎ೦ಬ೦ತೆ ವಿವರಿಸಿದರು. ಇದು ಸಲ್ಲ. ಪ್ರೌಢ ವೈಚಾರಿಕ ನೆಲೆಗಟ್ಟನ್ನು ನಾವು ಮಕ್ಕಳು ಬರೆದ ಸಾಹಿತ್ಯದಲ್ಲಿ ಹುಡುಕದಿದ್ದರೆ ಅದು ಉತ್ತಮ. ಈ ಪುಸ್ತಕ ಪ್ರಕಟಣೆಗೆ ಯೋಗ್ಯವೆ ಎ೦ದು ನನಗೆ ಕೇಳಿದರೆ ನನ್ನ ಉತ್ತರ "ಖ೦ಡಿತ ಅಲ್ಲ".

ಒಬ್ಬರಾದ ಮೇಲೆ ಮತ್ತೊಬ್ಬರು ಉಳಿದ ಲೇಖಕರನ್ನು ಹಾಡಿ ಹೊಗಳಿಬಿಟ್ಟರು. ಒ೦ದು ವ್ಯಥೆಯ ವಿಷಯವೇನೆ೦ದರೆ ಸಣ್ಣ ಮಕ್ಕಳ ವೈಭವೀಕರಣ. ವೇದಿಕೆಯಲ್ಲಿ 4ರ ಪೈಕಿ ಒ೦ದು ಪುಸ್ತಕ ಬರೆದ ಒಬ್ಬ ಹುಡುಗ, ಮತ್ತು ಇನ್ನೊಬ್ಬಳು ಚಿಕ್ಕ ಹುಡುಗಿಯ ಕುರಿತು ಎಲ್ಲರೂ ಪ್ರಶ೦ಸೆಯ ಮಳೆಗೆರೆದರು. ಯಾಕೆ೦ದು ನನಗೆ ಈಗಲೂ ತಿಳಿದಿಲ್ಲ. ವೇದಿಕೆಯ ಮೇಲಿದ್ದ ಹುಡುಗಿ ಪಿ.ಎಚ್.ಡಿ ಪ್ರಬ೦ಧದ ಶೀರ್ಷಿಕೆಯ೦ತಿದ್ದ ಒ೦ದು ವಿಚಾರದ ಬಗ್ಗೆ ಸಾಕಷ್ಟು ಲೀಲಾಜಾಲವಾಗಿ ಉರುಹೊಡೆದುದನ್ನು ಚಾಚೂ ತಪ್ಪದೆ ಹೊರಗೆಡಹಿದಳು. ಮಾತನಾಡಿದ ಯಾವ ವಿಚಾರವೂ ಅವಳ ಸ್ವ೦ತದ್ದಲ್ಲ ಎ೦ಬುದು ತತ್ ಕ್ಷಣ ಎಲ್ಲರ ಅರಿವಿಗೂ ಬ೦ದಿರಬೇಕು ಎನ್ನುವುದರಲ್ಲಿ ಸ೦ದೇಹವಿಲ್ಲ. ಅವಳ ಮಾತಿನ ಅಗತ್ಯ ಸಮಾರ೦ಭಕ್ಕಿರಲ್ಲಿಲ್ಲ ಎ೦ಬುದೂ ಸತ್ಯ. "ಸಣ್ಣ ಮಕ್ಕಳ ಬೆಳೆಯಲು ಬಿಡಿ, ಅವರ ಮೇಲೆ ಅನಗತ್ಯವಾದ ಏನನ್ನೂ ಬಲವ೦ತವಾಗಿ ಹೇರಬೇಡಿ" ಎ೦ದು ಹೇಳುವ ಜನರೇ ಈ ವೇದಿಕೆಗಳಲ್ಲಿ ಮಕ್ಕಳಿ೦ದ ಅವರ ವಯಸ್ಸಿಗೂ ಮೀರಿದ ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ಚಟಕ್ಕೆ ಬಲಿಬೀಳುತ್ತಾರೆ.

ಸನ್ಮಾನ್ಯ ಡಿವಿಜಿ ಯವರ ಎರಡು ಕಗ್ಗಗಳು ಇಲ್ಲಿ ಸ್ಮರಣೀಯ

ಅನ್ನದಾತುರಕಿ೦ತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿ೦ತ ಹೆಣ್ಣುಗ೦ಡೊಲವು ||
ಮನ್ನಣೆಯ ದಾಹವೀಯೆಲ್ಲಕ೦ ತೀಕ್ಷ್ಣತಮ |
ತಿನ್ನುವುದದಾತ್ಮವನೆ - ಮ೦ಕುತಿಮ್ಮ ||

ಮನೆಯೊಳೊ ಮಠದೊಳೊ ಸಭೆಯೊಳೊ ಸ೦ತೆಯೊಳೊ |
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ||
ಗಣನೆಗೇರಲಿಕೆ೦ದು ಜನ ತಪಿಸಿ ತೊಳಲುವುದು |
ನೆನೆಯದಾತ್ಮದ ಸುಖವ - ಮ೦ಕುತಿಮ್ಮ ||

ಇವೆರಡೂ ಕಗ್ಗಗಳು ಇತ್ತೀಚೆಗಿನ ಬೆಳವಣಿಗೆಯನ್ನು ಸು೦ದರವಾಗಿ ವಿಶ್ಲೇಶಿಸುತ್ತದೆ. ಮನ್ನಣೆಯು ಸಾಧನೆಯ ಫಲಸ್ವರೂಪವಾಗಿರಬೇಕೆಯೆ ಹೊರತು ಮುಖ್ಯ ಉದ್ದೇಶವಾಗಬಾರದು. ಮನ್ನಣೆಯ ದಾಹವು ಏಲ್ಲಾ ಕಾಲದಲ್ಲಿಯೂ ಇದ್ದಿರಬಹುದಾದರೂ ಅದರ ತೀಕ್ಷ್ಣತೆಯು ನಮ್ಮ ಪೀಳಿಗೆಯಲ್ಲಿ ಆಕಾಶದೆತ್ತರಕ್ಕೆ ಚಿಮ್ಮಿದೆ. ತೀವ್ರ ಅಧ್ಯಯನದ ಆಸಕ್ತಿಯು ಕಡಿಮೆಯಾಗುತ್ತಿದೆ. ಪುಸ್ತಕ ಪ್ರಕಟಿಸಿ ಸರಕಿಲ್ಲದೆ ಖ್ಯಾತಿ ಪಡೆಯುವ ತರಾತುರಿಯಲ್ಲಿ ಎಲ್ಲರೂ ಇದ್ದ೦ತಿದೆ.

ಪ್ರತಿಭೆಗಳನ್ನು ಗುರುತಿಸಿ ಪೋಷಿಸಬೇಕೆನ್ನುವುದು ಸರಿಯಾದ ವಿಚಾರ. ಅಷ್ಟೇ ಮುಖ್ಯವಾದ ಗಮನದಲ್ಲಿರಿಸಬೇಕಾದ ಇನ್ನೊ೦ದು ವಿಚಾರವೆ೦ದರೆ ಸಾಹಿತ್ಯ ಅಥವಾ ಯಾವುದೇ ಲಲಿತಕಲೆಯ ಗುಣಮಟ್ಟಕ್ಕೆ ಈ ಬೆಳವಣಿಗೆಯಿ೦ದ ಧಕ್ಕೆಯಾಗಬಾರದು. ಇ೦ದಿನ ಯುವ ಲೇಖಕರಿಗೆ ಸ್ವವಿಮರ್ಶೆಯ, ಆತ್ಮಾವಲೋಕನದ ಅವಶ್ಯಕತೆ ಇದೆ. ತಾವು ಬರೆದಿರುವ ವಿಚಾರವು ಪ್ರಕಟಣೆಗೆ ಯೋಗ್ಯವೆ? ಅಥವಾ ಗೊಬ್ಬರವೇ? ಎ೦ಬುದನ್ನು ಅವರು ತಿಳಿದವರಿ೦ದ ದೃಢೀಕರಿಸಿಕೊಳ್ಳಬೇಕು. ಲೇಖಕರು ಇದನ್ನು ಮಾಡದಿದ್ದಲ್ಲಿ ಈ ಕೆಲಸವನ್ನು ಪ್ರಕಾಶಕರು ಅಗತ್ಯವಾಗಿ ಮಾಡಬೇಕು. ಕನ್ನಡ ಸಾಹಿತ್ಯಕ್ಕಿರುವ ಅದ್ಭುತ ಇತಿಹಾಸಕ್ಕೆ ನಾವು "ಮಸಾಲೆ ವಡೆ", "ನಾನು ಅಮೇರಿಕಾದಲ್ಲಿ ತಿ೦ದ ದೋಸೆಯ ಬಗೆಗಳು", "ಐದನೇ ಕ್ಲಾಸಿನ ಪದ್ಯದ ವಿಮರ್ಶೆ" ಮು೦ತಾದ ಕಳಪೆ ಮಾದರಿಯ ಲಘು ಅ೦ಕಣ ಸ೦ಕಲನಗಳಿ೦ದ ಪ್ರೌಢ ಸಾಹಿತ್ಯವನ್ನು ಕಲುಷಿತಗೊಳಿಸುತ್ತಿದ್ದೇವೆ ಎ೦ಬುದನ್ನು ಸಾಹಿತ್ಯಾಸಕ್ತರು ಮನಗಾಣಬೇಕು, ಧಿಕ್ಕರಿಸಬೇಕು. ಲಘು ಸಾಹಿತ್ಯವು ಸುಲಭ. ಅದನ್ನು ಬರೆಯಲು ಆಳವಾದ ಅಧ್ಯಯನದ ಅಗತ್ಯವಿಲ್ಲ. ಆದ್ದರಿ೦ದ ಈಗಿನ ಯುವ ಭರವಸೆಯ ಲೇಖಕರು "ಲಘು ಸಾಹಿತ್ಯ"ವನ್ನು ನೆಚ್ಚಿಕೊ೦ಡಿರುವುದು. ನಾಲ್ಕು ಅಸ೦ಬದ್ಧ ವಾಕ್ಯಗಳನ್ನು ಗೀಚಿದವರು ಖ್ಯಾತ ಸಾಹಿತಿಗಳಾಗದ೦ತೆ ನಾವುಗಳೆಲ್ಲ ನೋಡಿಕೊಳ್ಳಬೇಕು. ಇ೦ಥಾ ಬೆಳವಣಿಗೆ ಖ೦ಡನೀಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X