ಜಿನ್ನಾ ಕುರಿತ ಪ್ರತಾಪ್ ಸಿಂಹ, ಜಿಬಿ ಹರೀಶ್ ಪುಸ್ತಕ
2009ರಲ್ಲಿ, “ಜಿನ್ನಾ: ಇಂಡಿಯಾ ಪಾರ್ಟಿಶನ್, ಇಂಡಿಪೆಂಡೆನ್ಸ್" ಎಂಬ ಪುಸ್ತಕ ಬರೆದಿರುವ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು, ಜಿನ್ನಾರನ್ನು ಹೊಗಳಿ ಬಿಜೆಪಿಯಿಂದಲೇ ಉಚ್ಛಾಟಿತರಾಗಿದ್ದಾರೆ. ಇಷ್ಟು ವರ್ಷ ದೇಶ ವಿಭಜನೆ ಸಲುವಾಗಿ ಭಾರತೀಯರು ಯಾವ ವ್ಯಕ್ತಿಯನ್ನು ಖಳನೆಂಬಂತೆ ಕಾಣುತ್ತಾ ಬಂದಿದ್ದರೋ ಅಂತಹ ವ್ಯಕ್ತಿಯ ಬಗ್ಗೆ ಅಖಂಡ ಭಾರತದ ಕನಸ್ಸು ಕಾಣುತ್ತಿರುವ ಬಿಜೆಪಿ ನಾಯಕರೇ ಏಕೆ ಮುಗಿಬಿದ್ದು ಹೊಗಳುತ್ತಿದ್ದಾರೆ? ಹಾಗಾದರೆ ಜಿನ್ನಾ ಯಾರು? ವಾಸ್ತವದಲ್ಲಿ ಜಿನ್ನಾ ನಿಜಕ್ಕೂ ಒಬ್ಬ ರಾಷ್ಟ್ರವಾದಿ, ಸೆಕ್ಯುಲರ್ವಾದಿಯಾಗಿದ್ದರೆ?
ಜಿನ್ನಾ ಸಮಕಾಲೀನರು ಬರೆದಿರುವ 50ಕ್ಕೂ ಹೆಚ್ಚು ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಪತ್ರಕರ್ತ ಪ್ರತಾಪ್ ಸಿಂಹ ಮತ್ತು ಡಾ. ಜಿ.ಬಿ. ಹರೀಶ್ “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೆ?" ಎಂಬ ಪುಸ್ತಕ ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಆಯಾ ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳನ್ನು ದಾಖಲಿಸಿರುವ ಈ ಪುಸ್ತಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಜಿನ್ನಾ-ಗಾಂಧಿ-ನೆಹರು ಅವರ ನಿಜಸ್ವರೂಪದ ಮೇಲೆ ಹೊರಗೆಡವುವ ಪ್ರಯತ್ನ ಮಾಡಿದೆ.
ಸೆಪ್ಟೆಂಬರ್ 24ರಂದು ಅಪರಾಹ್ನ 12.30 ಗಂಟೆಗೆ ಬೆಂಗಳೂರಿನ 'ಭಾರತೀಯ ವಿದ್ಯಾಭವನ"ದಲ್ಲಿ ಖ್ಯಾತ ಗಾಂಧೀವಾದಿ ಮತ್ತೂರು ಕೃಷ್ಣಮೂರ್ತಿಯವರು ಮೊದಲ ಪ್ರತಿ ಸ್ವೀಕರಿಸಿ ಅನೌಪಚಾರಿಕವಾಗಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಹುಬ್ಬಳ್ಳಿಯ 'ಸಾಹಿತ್ಯ ಪ್ರಕಾಶ"ನ ಜಿನ್ನಾ ಕೃತಿಯನ್ನು ಹೊರತರುತ್ತಿದೆ.
(ದಟ್ಸ್ ಕನ್ನಡವಾರ್ತೆ)