ವಾರಾಂತ್ಯದಲ್ಲಿ ಪುಸ್ತಕ ಪ್ರವಾಹ!
- ದಟ್ಸ್ ಕನ್ನಡ ಡೆಸ್ಕ್
ಮೊದಲೇ ನಿಗದಿಯಾದಂತೆ ಶನಿವಾರ(ಆ.13) ದಟ್ಸ್ಕನ್ನಡ ಅಂಕಣಕಾರ ಶ್ರೀವತ್ಸ ಜೋಶಿ ಅವರ ಅಂಕಣ ಬರಹ ‘ವಿಚಿತ್ರಾನ್ನ’ ಪುಸ್ತಕ ರೂಪದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ಡ್ ಕಲ್ಜರ್ನಲ್ಲಿ ಅನಾವರಣಗೊಳ್ಳಲಿದೆ.
ಭಾನುವಾರ(ಆ.14)ವಂತೂ ಎರಡು ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿವೆ. ಅಂದು ಬೆಳಿಗ್ಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರ ಅಂಕಣ ಬರಹಗಳ ಪುಸ್ತಕ ಬಿಡುಗಡೆಯಾಗಲಿದೆ.
ಸಿನಿಮಾ ಮತ್ತು ರಂಗಭೂಮಿ ಕಲಾವಿದ ಸಿ.ಆರ್.ಸಿಂಹ ಅವರ ಹೊಸ ಪುಸ್ತಕ ಭಾನುವಾರ ಸಂಜೆ ಓದುಗರ ಕೈಸೇರಲಿದೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಶುಕ್ರವಾರ ಪ್ರಕಟಗೊಂಡ ಅವರ ಅಂಕಣ ‘ನಿಮ್ಮ ಸಿಮ್ಮ’ ಎಂಬ ಶೀರ್ಷಿಕೆಯಲ್ಲಿ ಪುಸ್ತಕದ ರೂಪ ಪಡೆದಿದೆ. ಭಾನುವಾರ ಸಂಜೆ 6ಗಂಟೆಗೆ ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಈ ಸಂಬಂಧಿ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಚಂದ್ರಶೇಖರ್ ಕಂಬಾರ ಪುಸ್ತಕ ಬಿಡುಗಡೆ ಮಾಡುವರು. ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಇನ್ನು ಎಂದಿನಂತೆಯೇ ಈ ವರ್ಷದ ಸ್ವಾತಂತ್ರ್ಯದಿನಾಚರಣೆಯ ಸಂದರ್ಭದಲ್ಲಿ ಕಥೆಗಾರ ಮತ್ತು ಚಿತ್ರ ನಿರ್ದೇಶಕ ನಾಗತೀಹಳ್ಳಿಚಂದ್ರಶೇಖರ್ ಅವರ ‘ಅಭಿವ್ಯಕ್ತಿ’ ವಿಶೇಷ ಪುಸ್ತಕಗಳನ್ನು ಓದುಗರ ಕೈಗಿಡಲು ತಯಾರಿ ನಡೆಸಿದೆ. ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಅಭಿವ್ಯಕ್ತಿ ಮತ್ತು ಭಾವನಾ ಪ್ರಕಾಶನ ಜಂಟಿಯಾಗಿ ವೈವಿಧ್ಯಮಯ ಸಮಾರಂಭವನ್ನು ಸಂಘಟಿಸಿವೆ.
ಸೂರಿ ಅವರ ಕಥಾ ಸಂಕಲನ -ನಾತಲೀಲೆ, ನಾಗತೀಹಳ್ಳಿಯ -ನನ್ನ ಪ್ರೀತಿಯ ಹುಡುಗಿ, ತೆಲುಗಿನ ಮಹೆಜಬೀನ್ ಅವರ ಕವಿತೆಗಳ ಅನುವಾದ -ಎಲೆಯುದುರೂ ಕಾಲ(ಚಿದಾನಂದ ಸಾಲಿ ಅನುವಾದ) ಹಾಗೂ ರವಿ ಬೆಳಗೆರೆಯ ಹೊಸ ಪುಸ್ತಕಗಳೂ ಈ ಸಂದರ್ಭದಲ್ಲಿ ಹೊರಹೊಮ್ಮಲಿವೆ. ಬೆಂ.ವಿವಿ ಕುಲಪತಿ ತಿಮ್ಮಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದಹಾಗೆ ಅಂದಿನ ಆಕರ್ಷಣೆಯ ಕೇಂದ್ರ ಬಿಂದು ನಟ ಪ್ರಕಾಶ್ ರೈ. ಸೋಮವಾರ(ಆ.15)ದ ಈ ಕಾರ್ಯಕ್ರಮಕ್ಕೆ ತೆರಳಲು ಸಾಹಿತ್ಯಾಸಕ್ತರು ಉತ್ಸುಕತೆ ತೋರಿಸುತ್ತಿದ್ದಾರೆ.
ಪುಡಿಪುಡಿಯಾಗಿ ಅಂಕಣಗಳನ್ನು ವಿವಿಧ ಪತ್ರಿಕೆಗಳಲ್ಲಿ ಸವಿದಿದ್ದ ಓದುಗರು, ಹಿಡಿಹಿಡಿಯಾಗಿ ಆಸ್ವಾದಿಸುವ ಸಮಯ ಸಮೀಪಿಸಿದೆ. ಈ ಎಲ್ಲದರ ನಡುವೆ ದಟ್ಸ್ ಕನ್ನಡದ ಕಣ್ಣಿಗೆ ಬೀಳದಂತೆ ಎಷ್ಟೋ ಪುಸ್ತಕ ಪ್ರಸವಗಳು ನಡೆಯುವ ಸಾಧ್ಯತೆಗಳಿವೆ. ದೀರ್ಘ ವಾರಾಂತ್ಯದಲ್ಲೊಂದು ಪುಸ್ತಕ ಸುಗ್ಗಿ ಓದುಗರ ಮುಂದಿದೆ. ಮಜಾ ಮಾಡಿ...! ಚಿಂದಿ ಉಡಾಯ್ಸಿ...!!
ಕನ್ನಡ ಸರಸ್ವತಿಯನ್ನು ನಿಮ್ಮ ಮನೆಗೂ ಆಹ್ವಾನಿಸಿ.