ಫೆ. 12 - ವಿಶ್ವ ಅಪ್ಪುಗೆಯ ದಿನ: ಬಾಂಧವ್ಯ ಗಟ್ಟಿಗೊಳಿಸಲಿದು ಸುದಿನ
ಅಪ್ಪುಗೆಯು ಕೇವಲ ರೊಮ್ಯಾನ್ಸ್ ಅಲ್ಲ ಅಥವಾ ಪ್ರೇಮಿಗಳ ನಡುವೆ ಮಾತ್ರ ನಡೆಯುವಂಥ ಕ್ರಿಯೆಯೂ ಅಲ್ಲ. ಅದು ಸರ್ವ ಸಂಬಂಧಗಳಿಗೂ ದಿವ್ಯೌಷಧ.
ಅಪ್ಪುಗೆ ಎಂಬುದು ಬಾಂಧವ್ಯ ಬೆಸುಗೆಯಲ್ಲಿ ಮಹತ್ವದ ಹೆಜ್ಜೆ. ಅದು ಅಮ್ಮನ ಅಪ್ಪುಗೆಯಾಗಿರಬಹುದು, ತಂದೆಯ ಆಲಿಂಗನವಾಗಿರಬಹುದು, ಗೆಳೆಯ, ಗೆಳತಿ, ಸಂಗಾತಿಯ ಬೆಸುಗೆಯಾಗಿರಬಹುದು. ಅಪ್ಪುಗೆಯು ಆಯಾ ಸಂಬಂಧಗಳ ಗಾಢತೆಯ ಪ್ರತೀಕಗಳು.
ಆದರೆ, ಅಪ್ಪುಗೆಯ ಮಹಿಮೆ ಇದಿಷ್ಟೇ ಅಲ್ಲ. ಸಂಬಂಧವನ್ನು ಉದ್ದೀಪನಗೊಳಿಸುವುದು ಅಥವಾ ಬಾಂಧವ್ಯದ ಭಾವವನ್ನು ಮತ್ತಷ್ಟು ಬಿಗಿಗೊಳಿಸುವ ಶಕ್ತಿಯನ್ನೂ ಅಪ್ಪುಗೆ ಹೊಂದಿದೆ.
ಇಂದು, ಫೆಬ್ರವರಿ 12, ವಿಶ್ವ ಅಪ್ಪುಗೆಯ ದಿನ. ಸದ್ಯಕ್ಕೆ ವಿಶ್ವದ ಕೆಲವೇ ಕೆಲವು ಕಡೆ ಈ ದಿನ ಅಪ್ಪುಗೆಯ ಹಬ್ಬಗಳು ನಡೆಯುತ್ತವೆ. ಮುಂದೊಂದು ದಿನ ಇವು ಸರ್ವ ವ್ಯಾಪಿಯಾಗಬಹುದು.... ಪ್ರೇಮಿಗಳ ದಿನದ ಹಾಗೆ!
ಪ್ರೇಮಿಗಳ ದಿನವೆಂದ ಕೂಡಲೇ ನೆನಪಿಗೆ ಬಂತು. ಇನ್ನೆರಡು ದಿನಗಳ ಕಳೆದರೆ (ಫೆ. 14) ಪ್ರೇಮಿಗಳ ದಿನ. ಅದಕ್ಕೆರಡು ದಿನ ಮೊದಲ ಬಂದಿದೆ ಅಪ್ಪುಗೆಯ ದಿನ. ಅಂದರೆ, ಅಪ್ಪಿಕೊಂಡು ಬಾಂಧವ್ಯವನ್ನು ಬಿಗಿಗೊಳಿಸಿಕೊಂಡ ನಂತರವಷ್ಟೇ ಪ್ರೇಮ ಪರಿಣಯ ಆರಂಭಿಸಬಹುದಲ್ಲವೇ? ಹಾಗಾದರೆ, ತಡವೇಕೆ ಅಪ್ಪಿಕೋ ಚಳವಳಿಯನ್ನು ಇಂದು ಪ್ರಾರಂಭಿಸಿ. ಆದರೆ, ಎಚ್ಚರ ! ಅದರ ಜತೆಯಲ್ಲೇ ಎಚ್ಚರ ವಹಿಸಿ!!!!
ಈ ಅಪ್ಪುಗೆಯಿಂದ ಆಗುವ ಲಾಭಗಳೇನು, ಬಾಂಧವ್ಯಗಳ ಮೇಲೆ ಅದರ ಪರಿಣಾಮವೇನು? ತಪ್ಪು ಸಂದರ್ಭಗಳಲ್ಲಿ ಅಪ್ಪಲೆತ್ನಿಸಿದರೆ ಅಪಾಯ ಹೇಗೆ ಇವೆಲ್ಲವುಗಳನ್ನು ತಿಳಿಯಲು ಮುಂದೆ ಓದಿ...
ಅಪ್ಪುಗೆಗಿಂತ ಸಾಂತ್ವನ ಮತ್ತೊಂದಿಲ್ಲ
ಅಪ್ಪುಗೆಯಿಂದ ಸಂಬಂಧಗಳ, ಗೆಳೆತನಗಳ ಮೇಲೆ ತುಂಬಾ ಗಾಢವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ, ದುಃಖಿಗಳಿಗಾಗಿದ್ದಾಗ, ಆರ್ದ್ರ ಹೃದಯಿಗಳಾಗಿದ್ದಾಗ ಸಾಂತ್ವನ ಹೇಳಲು ಅಪ್ಪುಗೆಗಿಂತ ದೊಡ್ಡದಾದ ಭಾವ ಮತ್ತೊಂದಿಲ್ಲ.ಅದಲ್ಲದೆ, ಪ್ರೀತಿಯ ಅಪ್ಪುಗೆಯು ದೇಹದಲ್ಲಿನ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸಿ, ನವೋಲ್ಲಾಸ, ಸಮಾಧಾನ ಮೂಡಲು ನೆರವಾಗುತ್ತದೆ.
ಮನಸ್ಸಿಗೆ ಶಕ್ತಿ
ಸಾಮಾಜಿಕ ಖಿನ್ನತೆಗಳಿಂದ ಬಳಲುತ್ತಿರುವವರಿಗೆ ಅಪ್ಪುಗೆ ಪರಮೌಷಧಿ ಎನ್ನುತ್ತದೆ ವಿಜ್ಞಾನ. ಮನೆಯ ಆಪ್ತ ಸದಸ್ಯರಿಂದ, ಆಪ್ತ ಗೆಳೆಯ/ಗೆಳತಿಗಳಿಂದ ಸಿಗುವ ಈ ಅಪ್ಪುಗೆಯು ಮನಸ್ಸಿಗೆ ಶಕ್ತಿಯನ್ನು ತುಂಬಬಲ್ಲವು. ಇದರಿಂದ ಮನುಷ್ಯ ಸಂಬಂಧಗಳ ನಡುವಿನ ಸಂವಹನ ಮತ್ತಷ್ಟು ಗಾಢವಾಗುತ್ತದೆ.
ಶಾರೀರಿಕ ಬಾಧೆಗೂ ರಾಮಬಾಣ
ವಿಜ್ಞಾನದ ಪ್ರಕಾರ, ಚಿಕ್ಕ ವಯಸ್ಸಿನಿಂದಲೇ ಆಪ್ತರ ಅಪ್ಪುಗೆಯು ಸಿಗುತ್ತಿದ್ದರೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುತ್ತದೆ ವಿಜ್ಞಾನ. ಅಂಥ ಅಪ್ಪುಗೆಗಳು ಆತ್ಮವಿಶ್ವಾಸವನ್ನೂ ಅರಳಿಸಬಲ್ಲವು. ಅಪ್ಪುಗೆಯಿಂದ ಆಕ್ಸಿಟೋಸಿನ್ ಹಾರ್ಮೋನಿನ ಪ್ರಮಾಣ ಹೆಚ್ಚುವುದರಿಂದ ಶಾರೀರಿಕ ಬಾಧೆಗಳಿಂದ ಬೇಗನೇ ಮುಕ್ತವಾಗಲು ಸಹಾಯ ಮಾಡುತ್ತವೆ.
ರಕ್ತದೊತ್ತಡ ನಿಯಂತ್ರಣ
ಅಪ್ಪುಗೆಯಿಂದ ಥೈಮಸ್ ಗ್ರಂಥಿಯ ಉತ್ತಮವಾಗಿ ಕೆಲಸ ಮಾಡುವುದರಿಂದ ಬಿಳಿ ರಕ್ತಗಳ ಉತ್ಪತ್ತೆ ಹೆಚ್ಚಾಗುತ್ತದೆ. ಇದರಿಂದ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ಹೆಚ್ಚುವುದಲ್ಲದೆ, ರಕ್ತದೊತ್ತಡವೂ ಕಡಿಮೆಯಾಗುತ್ತದೆ.
ಆಕ್ರೋಶ ಇಳಿಮುಖ
ಅಪ್ಪುಗೆಯಿಂದ ಕೋಪ ಶಮನವಾಗುತ್ತದೆ. ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಮಾನಸಿಕ ಒತ್ತಡ, ಖಿನ್ನತೆ ದೂರವಾಗಿ ಆವೇಶ, ಆಕ್ರೋಶಗಳು ಇಳಿಮುಖವಾಗುತ್ತವೆ.