ಸಂಸ್ಕೃತದ ಜ್ಞಾನ ಎಲ್ಲ ವರ್ಗಗಳಿಗೂ ಲಭಿಸುವಂತಾಗಲಿ

ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಏನು ಮಾಡಬೇಕು ಎಂದು ಚಿಂತಿಸುವುದನ್ನು ಬಿಟ್ಟು ನಕಾರಾತ್ಮಕ ಧೋರಣೆಯಡಿ ಸಂಸ್ಕೃತ ವಿವಿ ಬೇಡ ಅಂತ ಹೇಳಲಿಕ್ಕೆಂದು ಕೆಲ ಸಾಹಿತಿಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಸಾಹಿತಿಗಳ ಬೌದ್ಧಿಕ ಡೋಂಗಿತನದ ಪರಮಾವಧಿಯಾಗಿದೆ.
ಕಿ.ರಂ.ನಾಗರಾಜ್ರವರು ತಮ್ಮನ್ನು ತಾವು ಏನೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದೇ ತಿಳಿಯಲಾಗಲಿಲ್ಲ. ಅವರೇ ಹೇಳಿದ ಹಾಗೆ ಭಾಷೆಯನ್ನು ತಿಳಿಯಲು ಪಂಡಿತರ ಅವಶ್ಯವಿರುವ, ಸೀಮಿತ ವಲಯ ಮಾತ್ರ ಓದುತ್ತಿರುವ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಬರೇ ಉಳಿಸುವುದಷ್ಟೇ ಅಲ್ಲದೇ ಸಮಾಜದ ಎಲ್ಲ ವಲಯ, ವರ್ಗಗಳಿಗೂ ತಲುಪುವಂತೆ ಬೆಳೆಸಲು ವಿಶ್ವವಿದ್ಯಾಲಯ ಅತ್ಯಂತ ಪೂರಕ ಎಂದು ಒಬ್ಬ ಸಾಹಿತಿಗೆ ಅನಿಸದಿರುವುದೇ ಆಶ್ಚರ್ಯ. ಅಂಥಾದ್ದರಲ್ಲಿ ತಮ್ಮ ಅಸಮ್ಮತಿಯನ್ನು ಒಂದು ವೇದಿಕೆಯ ಮೇಲೆ ಹರಿಯಬಿಟ್ಟಿರುವುದು ಅವರಿಗೇ ಶೋಭೆಯಲ್ಲ.
ನಮ್ಮ ದೇಶಕ್ಕೆ ಸಾಂಸ್ಕೃತಿಕ ಕ್ಷೇತ್ರದಲ್ಲಿ, ಭಾಷಾ ಕ್ಷೇತ್ರದಲ್ಲಿ ಜಗತ್ತಿನಲ್ಲೇ ವಿಶೇಷ ಸ್ಥಾನವಿರುವುದರ ಹಿಂದೆ ಸಂಸ್ಕೃತದ ಪಾತ್ರ ಅತ್ಯಂತ ಹಿರಿದು ಎಂಬುದನ್ನು ಅಲ್ಲಗೆಳೆಯಲು ಸಾಧ್ಯವೇ?
ನಾನು ಮತ್ತೂರಿನವ(ಸಂಸ್ಕೃತ ಗ್ರಾಮ ಎಂದೂ ಹೆಸರಿದೆ) ಎಂದರೆ ನಿಮಗೆ ಸಂಸ್ಕೃತ ಬರುತ್ತೆ ಅಲ್ವಾ? ಎಂದು ಕೇಳದವರೇ ಇಲ್ಲ. ಕೇಳಿ ಅವ್ಯಕ್ತ ಹೆಮ್ಮೆಯನ್ನನುಭವಿಸದವರೇ ಎಲ್ಲ. ಈ ಹೆಮ್ಮೆ ನನಗೆ ಸಂಸ್ಕೃತ ಬರುತ್ತೋ, ಬರಲ್ವೋ ಎಂಬುದಕ್ಕಲ್ಲ. ಸಂಸ್ಕೃತಕ್ಕೆ ವಿಶೇಷ ಸ್ಥಾನ ನೀಡಿ, ಶಾಲಾ ಪಠ್ಯವನ್ನಾಗಿ ಮಾಡಿ, ಹೆಚ್ಚಾಗಿ ಬಳಸುವ ಗ್ರಾಮ ಭಾರತದಲ್ಲಿದೆ ಎಂಬ ಕಾರಣಕ್ಕೆ.
ಸಂಸ್ಕೃತ ವಿವಿಯ ಕಾರಣದಿಂದ ಭಾಷೆಯಲ್ಲಿನ ಹೆಚ್ಚಿನ ಜ್ಞಾನ ನಾಗರಾಜ್ರ ಸಮೇತ ಸಮಾಜದ ಎಲ್ಲ ವರ್ಗ, ವಲಯಗಳಿಗೂ ಲಭಿಸುವಂತಾಗಲಿ.











Click it and Unblock the Notifications