ಯಾರಾದ್ರೂ ಹಳ್ಳಿಗಳನ್ನು ಹುಡುಕಿ ಕೊಡುತ್ತೀರಾ?
* ವಿನಾಯಕ ಪಟಗಾರ, ಬೆಟ್ಕುಳಿ, ಕುಮಟಾ
ಇವತ್ತು ಹಳ್ಳಿಗಳು ಮೊದಲಿನಂತೆ ಹಳ್ಳಿಗಳಾಗಿ ಉಳಿದಿಲ್ಲ. ಹಳ್ಳಿಯಿಂದ ದಿಲ್ಲಿಗೆ ಎನ್ನುವ ಮಾತು ಇವತ್ತು ಹಳಸಲಾಗಿದೆ. ಅಮೇರಿಕಕ್ಕೆ ಹೋಗಿ ಬಂದೆ ಎಂದು ಹಳ್ಳಿ ಜನರ ಮುಂದೆ ಹೇಳಿದರೆ ಪಕ್ಕದ ಪೇಟೆಗೆ ಹೋಗಿ ಬಂದೆ ಎಂದರೆ ಹೇಗೆ ಪ್ರತಿಕ್ರಿಯಿಸುತ್ತಾರೋ ಅಷ್ಟೇ ಸಾಮನ್ಯವಾಗಿ ಪ್ರತಿಕ್ರಿಯಿಸುತ್ತಾರೆ. ಅಮೇರಿಕ, ದಿಲ್ಲಿ ಇಂದು ಹಳ್ಳಿಗರಿಗೆ ಅಚ್ಚರಿಗಳಾಗಿ ಉಳಿದಿಲ್ಲ. ಜಾಗತೀಕರಣ, ಟಿವಿ, ಮಾಹಿತಿ ತಂತ್ರಜ್ಞಾನ ಇವತ್ತು ಹಳ್ಳಿ ಜನತೆಗೆ ಇಡೀ ಜಗತ್ತಿನ ವಿದ್ಯಮಾನವನ್ನು ಅವರಿದ್ದಲ್ಲಿಗೆ ತಂದು ಹಾಕುತ್ತಿದೆ. ಇದು ಒಂದು ಉತ್ತಮ ಬೆಳವಣಿಗೆ.
ಕರಾವಳಿ ಮಲೆನಾಡು ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಇಂದು ಜನರೇ ಕಾಣುತ್ತಿಲ್ಲ. ಮುಖ್ಯವಾಗಿ ಯವಕರು ಕಾಣೆಯಾಗುತ್ತಿದಾರೆ. ಉನ್ನತ ವ್ಯಾಸಂಗ ಮಾಡಿದವರೂ ವಿದೇಶ ಹಾರಿದರೆ, ಅರ್ಧಮರ್ಧ ಆದವರೂ ಇತ್ತ ಕೃಷಿಗೂ ಒಗ್ಗದೆ, ಅತ್ತ ಉತ್ತಮ ನೌಕರಿನು ಇಲ್ಲದೆ ಬೆಂಗಳೂರು ಅಲ್ಲಿ ಇಲ್ಲಿ ಅಂತ ಇದ್ದಾರೆ. ಇನ್ನು ಕೆಲವರದು ಹದಿನೈದು ದಿನಕ್ಕೋ, ತಿಂಗಳಿಗ್ಗೊಮ್ಮೆ ಹಳ್ಳಿ ದರ್ಶನ ಮಾಡುವ ಮಂದಿ.
ಹಳ್ಳಿಗಳು ಮೊದಲ್ಲೆಲ್ಲಾ ಜೀವನ್ಮುಖಿಗಳಾಗಿರುತ್ತಿದ್ದವು. ಬೇಸಿಗೆ ಬಂತೆಂದರೆ ವಾರಕ್ಕೊಮ್ಮೆಯಾದರೂ ನಡೆಯುತ್ತಿದ್ದ ಬಯಲಾಟ (ಯುಕ್ಷಗಾನ), ಬಯಲಾಟದಲ್ಲಿ ನಡೆಯುತ್ತಿದ್ದ ಹಾಸ್ಯ ಪ್ರಸಂಗಗಳು, ಜೂಜುಕೋರ ಹವ್ಯಾಸಿಗರಿಗಾಗಿ ಬರುತ್ತಿದ್ದ ಕುಟಿಕುಟಿ (ಗುಡಿಗುಡಿ)ಆಟ, ಸಂಜೆ ನಡೆಯುತ್ತಿದ್ದ ಮಧ್ಯವಯಸ್ಕರ ಕಟ್ಟೆ ಪಂಚಾಯ್ತಿಗಳು, ಚಿಕ್ಕ ಮಕ್ಕಳ ಚಿನ್ನಿದಾಂಡಿನ ಆಟ, ಯುವಕರ ನಾಟಕ, ಭಜನೆ ಕಾರ್ಯಕ್ರಮ, ಹಬ್ಬ ಹರಿದಿನಗಳಲ್ಲಿ ನಡೆಯತ್ತಿದ್ದ ಕೀರ್ತನೆ, ಬೈಟಕ್ , ವಾರಗಟ್ಟಲೆ ಮನೆಯಲ್ಲಿ ನಡೆಯುತ್ತದ್ದ ಮದುವೆ ಮುಂಜಿ ಕಾರ್ಯಕ್ರಮಗಳು, ಹಳ್ಳಿಗಳನ್ನು ನಿಜಕ್ಕೂ ಜೀವಂತಿಕೆಯ ನೆಲೆವೀಡಾಗಿಸಿದ್ದವು. ಒಂದು ರೀತಿಯಲ್ಲಿ ಸಾಹಿತ್ಯಕ ಸಾಂಸ್ಕ್ರತಿಕ ಕೇಂದ್ರಗಳೆನಿಸಿಕೊಂಡಿದ್ದವು.
ಟಿವಿ ಮಾಧ್ಯಮಗಳು ಯಾವಾಗ ಹಳ್ಳಿಗಳಲ್ಲಿ ದಾಗುಂಡಿ ಇಟ್ಟವೋ ಅಲ್ಲಿಯ ಜನರು ಬ್ಯೂಜಿಯಾಗಿಬಿಟ್ಟರು. ಹೆಣ್ಣುಮಕ್ಕಳ ಸಹಿತ ಎಲ್ಲರೂ ಧಾರಾವಾಹಿ ಓದುವ ಬದಲಾಗಿ ನೋಡತೊಡಗಿದ್ದರು. ಮೊದಲು ಹೊಲದ ಕೆಲಸ ಮುಗಿಸಿ ಬಂದು ಸಂಜೆ ವೇಳೆ ಅಲ್ಲಿ ಇಲ್ಲಿ ಗುಂಪಾಗಿ ಸೇರಿ ಮಾತನಾಡುತ್ತ ಪರಸ್ಪರ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಊರಲ್ಲಿ ಆಗುತ್ತಿದ್ದ ಆಗು ಹೋಗುಗಳ ಬಗ್ಗೆ ಚರ್ಚೆ ಆಗುತ್ತಿತ್ತು. ಎಲ್ಲರೂ ಪರಸ್ಪರ ಆತ್ಮೀಯರಾಗುತ್ತಿದ್ದರು. ಅಕ್ಕ-ಪಕ್ಕದ ಹೆಂಗಸರು ಮಾತುಕತೆಯಲ್ಲಿ ತೊಡಗುವದರ ಮೂಲಕ ಕಷ್ಟ-ಸುಖಗಳಲ್ಲಿ ಭಾಗಿಗಳಾಗುತ್ತಿದ್ದರು. ಆದರೆ ಈಗ ಮೊದಲಿನಂತೆ ಪರಸ್ಪರ ಮಾತಿನಲ್ಲಿ ತೊಡಗಿರುವ ಗುಂಪುಗಳು ಕಂಡುಬರುವದಿಲ್ಲ. ಟಿವಿ ಮಾಧ್ಯಮದಲ್ಲಿನ ದಾಯಾದಿಗಳ ಜಗಳದ, ಅನೈತಿಕ ಸಂಬಂಧಗಳ, ಹಸಿಬಿಸಿ ಪ್ರೇಮ, ಹಿಂಸೆ, ಕಾಮ ದೃಶ್ಯಗಳುಳ್ಳ ಸರಣಿ ದೃಶ್ಯಗಳನ್ನು ನೋಡುದರಲ್ಲಿ ಮಗ್ನರಾಗಿರುತ್ತಾರೆ. ಸದಾ ಲವಲವಿಕಯಿಂದ ಕೂಡಿರುತ್ತಿದ್ದ ಜನ ಯಾಂತ್ರಿಕರಂತೆ ಬದುಕುತ್ತಿದ್ದಾರೆ. ಅಕ್ಕ-ಪಕ್ಕದವರೂ ಪರಸ್ಪರ ಪರಿಚಯವಿಲ್ಲದವರಂತೆ ಇರುವುದು ರೂಢಿ ಮಾಡಿಕೊಂಡಿದ್ದಾರೆ. ಮೊದಲಿನ ಮುಗ್ದದತೆಯ, ಹೃದಯ ವೈಶಾಲ್ಯದ, ನೇರ ನುಡಿಯ ಹಳ್ಳಿಗರನ್ನು ಇಂದಿನ ಕಾಲದಲ್ಲಿ ಕಾಣುವುದು ಅಪರೂಪವಾಗಿದೆ. ಕೊಲೆ ದರೊಡೆಗಳಾದಾಗ ಊರಿಗೆ ಊರೇ ಒಂದಾಗಿ ಅದರ ವಿರುದ್ದ ಹೋರಾಡುತ್ತಿದ್ದ ಕಾಲ ಎಂದೋ ಹೊರಟು ಹೊಗಿದೆ.
ಕುಡಿಯಲು ನೀರಿಲ್ಲದ ಹಳ್ಳಿಗಳಲ್ಲಿಯೂ ಸಹ ಇಂದು ಕೋಲಾ, ಪೆಪ್ಸಿಗೇನು ಕೊರತೆ ಇಲ್ಲ. ಆದರೆ ನಮ್ಮ ಹಳ್ಳಿಗರು ಬೆಳೆದ ಬೆಳೆಗಳಿಗೆ ಮಾತ್ರ ಮಾರುಕಟ್ಟೆ ಇಲ್ಲ. ಇದು ಹಳ್ಳಿ ಮೇಲೆ ಬೀರಿದ ಜಾಗತೀಕರಣದ ಪ್ರಭಾವ. ಬೆಳಗ್ಗೆ ಹೊತ್ತು ಕೆಲವು ಜನ ಕರೆದ ಹಾಲನ್ನು ಪೇಟೆಗೆ ಮುಟ್ಟಿಸುವ ತವಕದಲ್ಲಿದ್ದರೆ, ಬಹತೇಕ ಜನ ಪೇಟೆಯಿಂದ ಬರುವ ಪ್ಯಾಕೆಟ್ ಹಾಲಿಗಾಗಿ ಕಾಯುತ್ತಿರುತ್ತಾರೆ. ಕೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆಲ್ಲಾ ಹುಡುಕಾಡಿದಂತೆ ಅನ್ನುವ ಪರಿಸ್ಥಿತಿ. ಹಳ್ಳಿಯ ಮಿಲ್ಲಿನಲ್ಲಿಯೇ ತಯಾರಾಗಿ ಬರುವ ಖಾರಾ ಪೌಡರ್, ಹಿಟ್ಟಿಗೆ, ಮನೆಯಲ್ಲಿ ತಯಾರಿ ಮಾಡುವ ವಿವಿಧ ಬಗೆಯ ಚಿಪ್ಸುಗಳಿಗೆ ಅಲ್ಲಿ ಗಿರಾಕಿಗಳಿಲ್ಲ. ಆದರೆ ಅದೇ ವಸ್ತುಗಳು ಬಣ್ಣ ಬಣ್ಣದ ಪ್ಯಾಕೆಟ್ನಲ್ಲಿ ಬಂದರೆ ಹಳ್ಳಿಗಳಲ್ಲಿ ಭರಪೂರ ವ್ಯಾಪಾರ. ಒಟ್ಟಿನಲ್ಲಿ ಹಿತ್ತಲಗಿಡ ಮದ್ದಲ್ಲ ಎನ್ನುವ ಮನೋಸ್ಥಿತಿಯಲ್ಲಿ ಇಂದು ಹಳ್ಳಿಗರು ಜೀವನ ತಳ್ಳುತ್ತಿದ್ದಾರೆ.
ಇನ್ನು ರೈತರದು ತ್ರಿಶಂಕು ಸ್ಥಿತಿ. ಮೊದಲೆಲ್ಲಾ ರೈತರು ತಮ್ಮ ಸರಳ ಜೀವನಕ್ಕೆ ಬೇಕಾದಷ್ಟು ಬೆಳೆಯುತ್ತಿದ್ದರು. ಮಿಕ್ಕಿದ ಅಲ್ಪ-ಸ್ವಲ್ಪವನ್ನು ಮಾರಿ ತಮ್ಮಲ್ಲಿ ಇಲ್ಲದ ಚಿಕ್ಕ-ಪುಟ್ಟ ವಸ್ತುಗಳ ಖರೀದಿಗೆ ಬಳಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ರೈತರು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದರು. ಆದರೆ ಜಾಗತೀಕರಣದ ಪ್ರಭಾವ, ಸರಕಾರದ ರೈತರ ಮೇಲಿನ ಕುರುಡು ಪ್ರೀತಿ ರೈತರನ್ನು ಇಂದು ಆತ್ಮಹತ್ಯೆಗೆ ದೂಡುತ್ತಿದೆ. ರಾಸಾಯನಿಕಗಳ ಬಳಕೆ, ಲಾಭದ ಅತೀ ಆಸೆಯಿಂದ ಒಂದೇ ಜಾತಿಯ ಬೆಳೆ ಬೆಳೆಯುವಿಕೆ, ಸಬ್ಸಿಡಿ, ಸಾಲ ಮನ್ನಾದ ಆಸೆಗೆ ಪದೇ ಪದೇ ಸಾಲಕ್ಕೆ ಮೊರೆ ಹೋಗುವಿಕೆ ಇವೆಲ್ಲವೂ ರೈತರನ್ನು ದುರ್ಬಲರನ್ನಾಗಿ ಮಾಡಿವೆ. ತನ್ನ ಸ್ವಂತ ಜಮೀನಿಗೆ ಬೇಕಾಗುವಷ್ಟು ಗೊಬ್ಬರವಿರಬಹುದು, ಬಿತ್ತನೆ ಬೀಜ ಇರಬಹುದು, ಇವೆಲ್ಲವನ್ನು ತಾನೇ ತಯಾರಿಸಿಕೊಳ್ಳುತ್ತಿದ್ದ. ಆದರೆ ಯಾವಾಗ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಸರಕಾರದ ಸಬ್ಸಿಡಿಯಿಂದ ಯಾವಾಗ ಸಿಗತೊಡಗಿತೋ ರೈತರು ಪರಾವಲಂಬಿಗಳಾಗತೊಡಗಿದರು. ಇಂದಿಗೂ ಯಾವ ಸರಕಾರವೂ ಸಹ ರೈತರನ್ನು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಬಿತ್ತನೆ ಬೀಜಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ರೈತರನ್ನು ಆಟ ಆಡಿಸುತ್ತಿವೆ.
ನಮ್ಮ ದೇಶದ ಜೀವಾಳ ಹಳ್ಳಿಗಳು. ನಿಜ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲವಿಲ್ಲ. ನಮ್ಮೆಲ್ಲರ ಉಳಿವೂ ಅಳಿವೂ ಹಳ್ಳಿಗಳಲ್ಲಿದೆ. ನಾವೂ ಹಳ್ಳಿಗಳನ್ನು ಉಳಿಸಿದರೆ ಹಳ್ಳಿಗಳು ನಮ್ಮನ್ನು ಉಳಿಸುತ್ತವೆ. ನಾವೆಲ್ಲ ಹಳ್ಳಿಗಳತ್ತ ಹಿಂತಿರುಗೋಣ. ಮೊದಲಿನ ಮಾನವೀಯ ಸಂಬಂಧಗಳ, ಸಾಂಸ್ಕ್ರತಿಕ ವೈವಿಧ್ಯಗಳನ್ನು ಪುನಃ ಸ್ಥಾಪಿಸೋಣ. ಮುಂದಿನ ಜನಾಂಗಕ್ಕೆ ಅದನ್ನು ತೋರಿಸೋಣ ಏನಂತೀರಾ?
ಇದನ್ನೂ ಓದಿರಿ
ಗೋಕರ್ಣದಲ್ಲಿ
ಮೀನುಗಸಿಗೂ
ಸಂಚಕಾರ"
/>ಮಣ್ಣನ್ನು
ಮರೆತವರು
ಮರಳಿ
ಮಣ್ಣಿಗೆ
ಗೋಕರ್ಣದಲ್ಲಿ
ಮೀನುಗಸಿಗೂ
ಸಂಚಕಾರ