ಮೈಸೂರಿನ ಕಲಾಸುರುಚಿಯಲ್ಲಿ ಕಥೆ ಕೇಳೋಣ ಬನ್ನಿ

Sridhar Murthy CV
ಡಾ|| ಸಿಂದುವಳ್ಳಿ ಅನಂತಮೂರ್ತಿಯವರ ಕನಸಿನ ಕೂಸಾದ "ಕಲಾಸುರುಚಿ" ಹಾಗೂ ಅದರ ಪ್ರಯೋಗ ಕೇಂದ್ರ ಸುರುಚಿರಂಗಮನೆ' (ಕುವೆಂಪುನಗರ, ಮೈಸೂರು) ತನ್ನ ಪ್ರಯೋಗಶೀಲತೆಯಿಂದ ಎಲ್ಲರ ಮೆಚ್ಚುಗೆಗಳಿಸಿದೆ. ನಾಟಕಗಳೊಂದಿಗೆ ಉಳಿದ ಎಲ್ಲ ಕಲಾಪ್ರಕಾರಗಳಿಗೂ ಸಮಾನ ಪ್ರಾಶಸ್ತ್ಯ ನೀಡುತ್ತಾ ಬಂದಿರುವುದು ಇಲ್ಲಿನ ವಿಶೇಷ. ಇದು ದಿವಂಗತ ಸಿಂದುವಳ್ಳಿಯವರ ಆಸೆಯೂ ಆಗಿತ್ತು. ಆತ್ಮೀಯಗೃಹರಂಗ'ದ ಕಲ್ಪನೆಯೊಂದಿಗೆ ಆರಂಭವಾದ ಇದರಲ್ಲಿ ಈವರೆಗೆ 150ಕ್ಕೂ ಹೆಚ್ಚಿನ ಕಾರ್ಯಕ್ರಮಗಳು ಜರುಗಿವೆ.

ಕಥೆ ಕೇಳೋಣ ಬನ್ನಿ

ರಂಗಮನೆಯ ಇತ್ತೀಚಿನ ವಿಶಿಷ್ಟ ಕಾರ್ಯಕ್ರಮ "ಕಥೆ ಕೇಳೋಣ ಬನ್ನಿ" ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆದು ಬರುತ್ತಿದೆ. ಪ್ರತಿ ಶನಿವಾರ ಸಂಜೆ 4.30ರಿಂದ 5.30ರವರೆಗೆ ಇದು ನಡೆಯುತ್ತದೆ. ಸಂಜೆ ಆಯಿತೆಂದರೆ ಸಾಕು, ನೂರಾರು ಮಕ್ಕಳು ತಪ್ಪದೇ ಹಾಜರಾಗುತ್ತಾರೆ ಮತ್ತೆ ಬರುವಾಗ ತಮ್ಮ ಗೆಳೆಯರನ್ನೂ ಕರೆತರುತ್ತಾರೆ. ಇವರೊಂದಿಗೆ ಆಸಕ್ತ, ಕಥಾ ಪ್ರಿಯರಾದ ಹಿರಿಯರೂ, ಪೋಷಕರು ಸಹಾ ಆಗಮಿಸುತ್ತಾರೆ. ಪ್ರತಿ ಶನಿವಾರ ಸಾಯಂಕಾಲ ಎಳೆಗಿಳಿಗಳ ಬಳಗದ ಚಿಲಿಪಿಲಿ ಸದ್ದು ರಂಗಮನೆ ತುಂಬಾ ತುಂಬಿಕೊಳ್ಳುತ್ತದೆ. ಕಾರ್ಯಕ್ರಮ ಶುರುವಾಯಿತೆಂದೊಡನೆ ಗಪ್ಪ್‌ಚಿಪ್ಪ್. ಈ ಕಾರ್ಯಕ್ರಮ ಈವರೆಗೆ ಒಂದು ವಾರವೂ ತಪ್ಪಿಲ್ಲ, ನಿಂತಿಲ್ಲ. ಹಬ್ಬ ಹರಿದಿನಗಳು ಬಂದರೂ ಎಂದಿನಂತೆಯೇ ಜರುಗಿದೆ.

ಹಲವರ ಶ್ರಮ : ಮೂಲರೂವಾರಿಗಳೆಂದರೆ ಶಶಿಧರ ಡೋಂಗ್ರೆ, ಸುಮನಾ ಡೋಂಗ್ರೆ, ವಿದ್ಯಾಶಂಕರ್ ಹಾಗೂ ಡಾ|| ಎಚ್.ಕೆ. ರಾಮನಾಥ್. ಇದಕ್ಕೆ ರಂಗಮನೆಯ ಸ್ಫೂರ್ತಿ ಶಕ್ತಿ ಹಾಗೂ ಸೂತ್ರಧಾರಿಣಿಯಾಗಿರುವ ಹಿರಿಯ ಸೋದರಿಯಂತಿರುವ ವಿಜಯಾ ಸಿಂಧುವಳ್ಳಿ ಅವರ ಬೆಂಬಲ, ಮಾರ್ಗದರ್ಶನ ಸದಾ ಇದೆ. ರಂಗಮನೆ ಆಪ್ತಬಳಗದವರಾದ ಪ್ರೊ|| ಸಿ.ವಿ. ಶ್ರೀಧರಮೂರ್ತಿ, ಯು.ಎಸ್. ರಾಮಣ್ಣ, ಭದ್ರಪ್ಪ-ಶಿ-ಹೆನ್ಲಿ, ಶಶಿಧರ ಸಿಂಹ, ರಂಗಮಿತ್ರ, ನಾಗರಾಜ್, ಹರಿಪ್ರಸಾದ್- ಇವರೆಲ್ಲರ ಸಹಕಾರ ಇದ್ದೇ ಇದೆ. ಜೊತೆಗೆ ನೂರಾರು ಕೈಗಳ ದುಡಿಮೆ, ಮನಸ್ಸುಗಳ ಹಾರೈಕೆಗಳ ಶ್ರೀರಕ್ಷೆಯಿದೆ.

ಕೇವಲ ಕಥೆ ಹೇಳುವುದು ಇಲ್ಲಿನ ಉದ್ದೇಶವಲ್ಲ ಆ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಾಸ ಪ್ರಮುಖ ಧ್ಯೇಯ. ಮನರಂಜನೆಯೊಂದಿಗೆ ಮನೋವಿಕಾಸದ ಗುರಿ ಇಲ್ಲಿದೆ. ಕಥಾ ಮಾಧ್ಯಮದ ಮೂಲಕ ಮಕ್ಕಳಲ್ಲಿ ಕಲ್ಪನಾಶಕ್ತಿ, ವಾಕ್‌ಶಕ್ತಿ, ಆಲಿಕೆಯ ಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯಗಳನ್ನು ಬೆಳೆಸುವುದು ಪ್ರಧಾನ ಆಶಯವಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದನ್ನು ನೆನಪಿನಲ್ಲಿರಿಸಿಕೊಂಡು ಅವರನ್ನು ಸತ್ಪ್ರಜೆಗಳನ್ನಾಗಿ, ಯೋಗ್ಯ ನಾಗರಿಕರನ್ನಾಗಿ ರೂಪಿಸುವುದೇ ಈ ಕಥಾ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ. ಹೀಗಾಗಿಯೇ ಯಾವುದೇ ಭೇದ-ಭಾವಗಳಿಲ್ಲದೇ ಸಾಮಾಜಿಕ, ವೈಜ್ಞಾನಿಕ, ಜನಪದ, ಐತಿಹಾಸಿಕ, ಪೌರಾಣಿಕ ಕಥೆಗಳನ್ನು ಹೇಳಲಾಗುತ್ತದೆ. ಕಥೆ ಮುಗಿದ ಮೇಲೆ ಮಕ್ಕಳು ಏನನ್ನಾದರೂ ಕೇಳಿ ತಿಳಿದುಕೊಳ್ಳಬಹುದು. ಡಾ|| ಎಚ್.ಕೆ. ರಾಮನಾಥ್ ಕಾಗುಣಿತ ಹಾಗೂ ಭಾಷಾಭ್ಯಾಸವನ್ನೂ ಮಾಡಿಸುತ್ತಾರೆ. ಹೀಗಾಗಿ ಇದೊಂದು ಪ್ರಾಯೋಗಿಕ ಕಾರ್ಯಕ್ರಮವೂ ಆಗಿದೆ. ಇಂದಿನ ಮಕ್ಕಳು ಶುದ್ಧ ಹಾಗೂ ತಪ್ಪಿಲ್ಲದ ಕನ್ನಡವನ್ನು ಆಡಲು, ಬರೆಯಲು ಕಲಿಯಬಹುದಾಗಿದೆ. ಕಥೆಗಾರರಿಗೆ ನೀಡಿರುವ ಸಂಪೂರ್ಣ ಸ್ವಾತಂತ್ರ್ಯ ಅಭಿವ್ಯಕ್ತಿಗೆ ಬಹಳ ನೆರವಾಗಿದೆ, ಮಕ್ಕಳು ಕಥನ ಕಲೆ ಮತ್ತು ಕಥೆ ಹೇಳುವ ಶೈಲಿಗಳನ್ನು ತುಂಬ ಚೆನ್ನಾಗಿ ಗ್ರಹಿಸುತ್ತಿದ್ದಾರೆ.

ಕಥೆ ಕೇಳೋಣ ಬನ್ನಿ' ಆರಂಭವಾದದ್ದು 2007ನೇ ಫೆಬ್ರವರಿ 3ನೇ ತಾರೀಖಿನಂದು (ಶನಿವಾರ); ಇದೀಗ ಎರಡು ವರ್ಷ ತುಂಬುತ್ತಿದೆ. ಈವರೆಗೆ 106 ಮಂದಿ ಪ್ರತಿಭಾವಂತರು ಕಥೆ ಹೇಳಿದ್ದಾರೆ. ಇವರಲ್ಲಿ ನಾಗಲಕ್ಷ್ಮಿ ಹರಿಹರೇಶ್ವರ, ಪ್ರೊ| ಎಚ್.ಎಸ್. ವೆಂಕಟೇಶಮೂರ್ತಿ, ಭಾರ್ಗವಿನಾರಾಯಣ್, ಪ್ರೊ| ಜೆ.ಆರ್.ಲಕ್ಷ್ಮಣರಾವ್, ಮೀರಾನಾಯರ್, ಆರ್.ಟಿ. ರಮಾ, ಯು.ಎಸ್. ರಾಮಣ್ಣ, ಭದ್ರಪ್ಪ-ಶಿ-ಹೆನ್ಲಿ, ಪ್ರೊ| ವಿದ್ಯಾಶಂಕರ್, ಪ್ರೊ| ನೀ. ಗಿರಿಗೌಡ, ಡಾ|| ಎಚ್.ಕೆ. ರಾಮನಾಥ್, ಡಾ||ರಮಾಜಿಬೆನ್ನೂರ್, ಡಾ||ಮೈಲಹಳ್ಳ ರೇವಣ್ಣ, ಸಿ.ವಿ. ಕೇಶವಮೂರ್ತಿ ಮುಂತಾದವರಿದ್ದಾರೆ. ಈಚೆಗಷ್ಟೆ ಕಥಾ ಕಾರ್ಯಕ್ರಮಕ್ಕೆ ನೂರು' ತುಂಬಿದ ಸಂಭ್ರಮ ವಿಶೇಷವಾಗಿ ಜರುಗಿತು. ಅಂದು ರಂಗಮನೆಯಲ್ಲಿ ಹಬ್ಬದ ವಾತಾವರಾಣ, ಸಿಹಿ ಹಂಚಿಕೆ. ನಾಡಿನ ಪ್ರಸಿದ್ಧ ರಂಗಕರ್ಮಿ ಹಾಗೂ ಲೇಖಕ ಬಿ.ಎಸ್. ಕೇಶವರಾವ್ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶತಶತಮಾನಗಳ ಹಿನ್ನೆಲೆ ಇರುವ ಈ ಮೌಖಿಕ ಪರಂಪರೆಯನ್ನು ಕಲಾಸುರುಚಿ' ಸಾರ್ಥಕವಾಗಿ ಬಳಸಿಕೊಳ್ಳುತ್ತಿದೆ, ಹೊಸ ಆಯಾಮ ನೀಡುತ್ತಿದೆ.

ಸಾಹಿತ್ಯ ಚಾವಡಿ

ಇನ್ನೂ ಬೇರೊಂದು ಲೋಕವನ್ನೂ ಪ್ರವೇಶಿಸೋಣ. ಅದು ಮುದ್ದು ಮಕ್ಕಳ ಮುಗ್ಧ ಲೋಕವಲ್ಲ. ಕನಸಿನ ಕಲ್ಪನೆಗಳ ಕಾಮನ ಬಿಲ್ಲುಗಳ ರಂಗು ತುಂಬಿದ ಹೋಳಿ ಸಂಭ್ರಮದ ಜಗತ್ತಲ್ಲ. ಬದಲಾಗಿ ಬೆಳೆದ ಮನಸ್ಸುಗಳ, ಪರಿಪಕ್ವ ವಿಚಾರಧಾರೆಗಳ, ಚಿಂತನಶೀಲತೆಯ ಪ್ರಪಂಚ. ಕಲಾಸುರುಚಿ' ಇದಕ್ಕೂ ವೇದಿಕೆ ಕಲ್ಪಸಿದೆ. ಹೆಸರೇ ಹೇಳುವಂತೆ ಇದು ನಿಜವಾದ ಆಸಕ್ತರ ಸಭೆ. ಅದಕ್ಕೆ ಇದನ್ನೂ ಚಾವಡಿ' ಎನ್ನಲಾಗಿದೆ. ಪ್ರತಿ ತಿಂಗಳ ಕಡೇ ಭಾನುವಾರ ಈ ಕಾರ್ಯಕ್ರಮದ ಏರ್ಪಾಡು. ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆ, ಮುಕ್ತ ಮಾತುಕಥೆ, ನಿರೂಪಣೆಗಳಿರುತ್ತವೆ. ಒಬ್ಬರು ಪ್ರಧಾನ ವ್ಯಕ್ತಿ ನಿರ್ದಿಷ್ಟ ವಿಷಯ ಅಥವಾ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾರೆ. ನಂತರ ಆಸಕ್ತ ಸಹೃದಯರು ಅವರೊಂದಿಗೆ ಸಂವಾದ' ನಡೆಸುತ್ತಾರೆ. ಮ೦ಡನೆ ಹಾಗೂ ವಿನಿಮಯಗಳೆರಡೂ ನಡೆಯುತ್ತವೆ.

ಇದರ ಬೆನ್ನೆಲುಬಾಗಿ ಭದ್ರಪ್ಪ-ಶಿ-ಹೆನ್ಲಿ ಹಾಗೂ ಹರಿಪ್ರಸಾದ್ ನಿಂತಿದ್ದಾರೆ. ಉಳಿದವರೆಲ್ಲ ಕೈಜೋಡಿಸಿದ್ದಾರೆ. ಇದು ಆರಂಭವಾದದ್ದು 2008ನೇ ಮಾರ್ಚ್ 30ರಂದು. ಈವರೆಗೆ ಹನ್ನೊಂದು ಕಾರ್ಯಕ್ರಮಗಳಾಗಿವೆ. ನಾಡಿನ ಹೆಸರಾ೦ತ ಲೇಖಕರು, ವಿದ್ವಾಂಸರು ಇದನ್ನೂ ನಡೆಸಿ ಕೊಟ್ಟಿದ್ದಾರೆ. ಡಾ|| ಡಿ.ಎ. ಶಂಕರ್, ಡಾ|| ಪ್ರಧಾನ್ ಗುರುದತ್ತ, ಡಾ|| ಟಿ.ಆರ್. ಸತ್ಯನಾರಾಯಣ, ಪ್ರೊ|| ಹಿ.ಶಿ. ರಾಮಚಂದ್ರೇಗೌಡ, ಡಾ|| ಶುಭಚಂದ್ರ, ಪ್ರೊ|| ಎಚ್. ಎಸ್ ಉಮೇಶ್, ಕಡವಿನ ಕೋಟೆರಾಮಚಂದ್ರ, ಮಾಲತಿ, ರಾಮಶೇಷು, ಶಶಿಕಲಾ ಹಾಗೂ ಪ್ರೊ|| ಕೆ. ಪ್ರಭುಶಂಕರ್- ಇವರೆಲ್ಲಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾಗಿದ್ದಾರೆ. ಅನುವಾದ, ಜನಪದ, ಕೆ.ವಿ. ಅಯ್ಯರ್, ಜಿ.ಪಿ. ರಾಜರತ್ನಂ, ನಾಟಕ ಜಗತ್ತು- ಹೀಗೆ ಹಲವು ಹನ್ನೊಂದು ವಿಚಾರಗಳು ಬಂದು ಹೋಗಿವೆ. ಆಸಕ್ತರ ಜ್ಞಾನದಿಗಂತವನ್ನೂ ವಿಸ್ತರಿಸಿವೆ.

ಒಟ್ಟಾರೆ ಈ ಎರಡು ಕಾರ್ಯಕ್ರಮಗಳು ಕಲಾಸುರುಚಿ'ಯ ಕಿರೀಟಕ್ಕೆ ಸೇರಿಸಿದ ಚಿನ್ನದ ಗರಿಗಳಾತಿವೆ. ಸಿಂಧುವಳ್ಳಿಯವರ ಕನಸುಗಳು ಇಂದಿಗೂ ಈ ಮೂಲಕ ನನಸಾಗುತ್ತಿವೆ. ರಂಗಮನೆಯ ಘನತೆ, ಗೌರವಗಳನ್ನು ಹೆಚ್ಚೆಸಿವೆ. ಇಂತಹ ಇನ್ನೂ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ಸಂಸ್ಥೆ ಹಮ್ಮಿಕೊಳ್ಳಲಿ ಕಲಾಜಗತ್ತಿಗೆ ಅಪೂರ್ವ ಕೊಡುಗೆ ನೀಡಲಿ. ಇದಕ್ಕೆಲ್ಲಾ ಮೂಲಕಾರಣರಾಗಿರುತ್ತಾ, ತೆರೆಮರೆಯಲ್ಲೆ ನಿಂತು ಆಶೀರ್ವದಿಸುತ್ತಾ, ಮಾರ್ಗದರ್ಶನ ಮಾಡುತ್ತಿರುವ ವಿಜಯಾ ಸಿಂಧುವಳ್ಳಿಯವರಿಗೆ ನಮ್ಮೆಲ್ಲರ ಕೃತಜ್ಞತಾಪೂರ್ವಕ ನಮನಗಳು.

ಲೇಖಕರು : ಪ್ರೊ| ಸಿ.ವಿ. ಶ್ರೀಧರಮೂರ್ತಿ, ಕನ್ನಡ ವಿಭಾಗ ಮುಖ್ಯಸ್ಥರು, ಸಂತಫಿಲೋಮಿನಾ ಪದವಿ ಕಾಲೇಜು, ಮೈಸೂರು-570 015.
ವಿಳಾಸ : 122, 1ನೇ ಮುಖ್ಯ ರಸ್ತೆ, 8ನೇ ತಿರುವು ಕೆಸರೆ, 3ನೇ ಹಂತ ಮೈಸೂರು-570 007. ದೂರವಾಣಿ ಸಂಖ್ಯೆ : 2493438.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+