ಅವಲಂಬನೆಯೇ ದುಃಖ ; ಸ್ವಾವಲಂಬನೆಯೇ ಸುಖ

ಕನ್ನಡದಲ್ಲಿ ಒಂದು ಗಾದೆ ಇದೆ. ‘‘ತಾ ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು’’ ಅಂದರೆ ತನ್ನ ಕೆಲಸನಾ ತಾನೇ ಮಾಡಿಕೊಳ್ಳೋದು ಬಹಳ ಶ್ರೇಷ್ಠ ಅಂತ. ಇಂಗ್ಲೀಷ್‌ನಲ್ಲಿ ಇದಕ್ಕೆ ಸಂವಾದಿಯಾಗಿ ‘‘ಸೆಲ್ಫ್‌ ಹೆಲ್ಪ್‌ ಈಸ್‌ ದ ಬೆಸ್ಟ್‌ ಹೆಲ್ಪ್‌’’ ಅಂತ ಇದೆ. ಬೇರೊಬ್ಬರು ಯಾರ ಸಹಾಯವನ್ನೂ ಅವಲಂಬಿಸದೇ ತಮ್ಮ ಕಾಲ ಮೇಲೆ ತಾವು ನಿಲ್ಲೋದು ಸ್ವಾವಲಂಬನೆ. ಇದು ನಮಗೆ ಕೊಡೋ ಸುಖ ಏನಿದೇ, ಅದಕ್ಕೆ ಸಮನಾದದ್ದು- ಬೇರೆ ಏನೂ ಇಲ್ಲ!

‘‘ಬೇರೆಯವರ ಸಹಾಯದಿಂದ ಆಗುತ್ತೆ ಅಂದುಕೊಳ್ಳುವುದೆಲ್ಲವೂ ದುಃಖಕ್ಕೆ ಕಾರಣವಾದೀತು; ತನ್ನಿಂದಲೇ ಆದದ್ದು, ತಾನೇ ಮಾಡಿದ್ದು ನಿಜವಾದ ಸುಖ. ಇದೇ ಸುಮ್ಮಾನ ದುಮ್ಮಾನಗಳ ಲಕ್ಷಣ, ಚಹರೆ. ಇದನ್ನು ಚೆನ್ನ್ನಾಗಿ ತಿಳಿದುಕೊಳ್ಳಿ!’’- ಅನ್ನುತ್ತದೆ, ಮನುಸ್ಮೃತಿ. (ಸರ್ವಂ ಪರವಶಂ ದುಃಖಮ್‌, ಸರ್ವಂ ಆತ್ಮವಶಂ ಸುಖಮ್‌)

ಹೌದು, ಹಾಗೆ ಕ್ರಿಯಾಶೀಲನಾಗಿದ್ದರೇನೇ ಲಕ್ಷ್ಮಿ ಆ ವ್ಯಕ್ತಿಯನ್ನ ಆಶ್ರಯಿಸುತ್ತಾಳೆ. ‘‘ಉದ್ಯೋಗಿ ನಂ ಹಿ ಉಪೈತಿ ಲಕ್ಷ್ಮೀಃ ।।’’ ಬೇರೆಯವರನ್ನು ಆಶ್ರಯಿಸಿಕೊಂಡು, ಹಿಡಿದ ಕೆಲಸ ಫಲಿಸಲಿಲ್ಲ ಎಂಬುದಕ್ಕೆ, ಬೇರೆ ಯಾರು ಯಾರನ್ನೋ ಹೊಣೆ ಮಾಡುವದು ಆತ್ಮವಂಚನೆ ಮಾತ್ರ. ಮಾಡಿದರೆ ತಾನು ಮಾಡಬೇಕು; ಸೋಲಿಗೂ ಗೆಲುವಿಗೂ ತಾನೇ ಹಕ್ಕುದಾರ ಎಂಬ ಭಾವನೆ ಇಟ್ಟುಕೊಂಡಿರಬೇಕು.

ಬೇರೆಯವರ ಸಹಾಯವನ್ನೇ ಅವಲಂಬಿಸಿಕೊಂಡಿರುವ ವಿಚಾರ ಹಾಗಿರಲಿ, ಕೆಲವರು ‘‘ಅದು ನನ್ನ ಹಣೆಯ ಬರಹ, ನನ್ನ ಪೂರ್ವಾರ್ಜಿತ ಕರ್ಮ ’’- ಅಂತ ಏನೇನೋ ಸಬೂಬು ಹೇಳಿ, ‘ವಿಧಿ’ಯನ್ನೇ ದೂರುವುದೂ ಉಂಟು. ಅಥವಾ ‘‘ದೇವರು ಕರುಣಿಸಲಿಲ್ಲ ! ಏನು ಮಾಡುವುದು?’’- ಎಂದು ಕೈ ಚೆಲ್ಲಿ ಕುಳಿತು ಬಿಡುವುದು. ಇದು ಆತ್ಮವಿಶ್ವಾಸವಿಲ್ಲದವರ ಕಾಪುರಷರ ಲಕ್ಷಣ. (‘‘ದೈವಮ್‌ ನ ದೇಯಮ್‌ ಇತಿ ಕಾಪುರುಷಾಃ ವದನ್ತಿ’’)

ನಮ್ಮ ಬದುಕಿಗೆ ನಾವೇ ನಾಯಕರಾಗಬೇಕು ; ಬೇರೆಯವರಲ್ಲ. ವಿಧಿ ಆಗಬಾರದು, ಪರಾವಲಂಬನೆಯೂ ಹಾಗೇನೇ. ನೀರಮೇಲಣ ಗುಳ್ಳೆ ಇದ್ದ ಹಾಗೆ. ನಮ್ಮ ಪೌರುಷ, ನಮ್ಮ ಆತ್ಮಬಲ, ನಮ್ಮ ಆತ್ಮಸ್ಥೈರ್ಯ, ನಮ್ಮ ಆತ್ಮಗೌರವಗಳೇ ಬಾಳಿನಲ್ಲಿ ನೆಮ್ಮದಿಗೆ, ಸುಖಕ್ಕೆ ಮೂಲ ಕಾರಣ.

ನಮ್ಮ ಸುತ್ತಮುತ್ತಾನೇ ನೋಡಿಕೊಳ್ಳೋಣ ಮನುಷ್ಯರನ್ನ ಬಿಟ್ಟು ಬಿಡಿ. ಪ್ರಾಣಿಗಳನ್ನು ನೋಡಿ ; ಹುಟ್ಟಿದ ಸ್ವಲ್ಪ ಕಾಲ ಆದಕೂಡಲೇ ತಮ್ಮ ಕಾಲ ಮೇಲೆ ತಾವೇ ನಿಂತುಕೊಂಡು ತಮ್ಮ ಕೆಲಸಾನ ತಾವೇ ಮಾಡಿಕೊಳ್ಳುತ್ತವೆ. ಆದರೆ ಮನುಷ್ಯ ಹಾಗಲ್ಲ. ನಿಜ, ಈಗಿನ ಪ್ರಪಂಚದಲ್ಲಿ ಪರಸ್ಪರ ಸಹಾಯ ಅವಲಂಬನೆ ಹಿತಮಿತವಾಗಿಬೇಕು. ಆದರೆ ಎಲ್ಲದಕ್ಕೂ ಬೇರೊಬ್ಬರನ್ನೇ ಆಶ್ರಯಿಸಿಕೊಂಡಿದ್ದರೆ, ಅದರಿಂದ ಬರಬಹುದಾದ ಕಷ್ಟ, ದುಃಖ ಅಷ್ಟಿಷ್ಟಲ್ಲ.

‘ಆಳಾಗ ಬಲ್ಲವನು ಅರಸನಾಗಬಲ್ಲ’- ಅನ್ನೋ ಮಾತಿದೆ. ಇದರರ್ಥ ಏನು? ಅರಸನಾಗಿದ್ದರೂ ಸಹ ತಾನು ಯಾರನ್ನೆಲ್ಲಾ ಆಳುತ್ತಾ ಇರುತ್ತಾನೋ ಅವರೆಲ್ಲರ ಕೆಲಸಾನೂ ತಾನೂ ಮಾಡಬಲ್ಲವನಾಗಿರಬೇಕು- ಅಂತ.

ನೀವು ಒಂದು ಉದ್ಯಮ ನಡೆಸುತ್ತಿದ್ದೀರಿ- ಅಂದುಕೊಳ್ಳಿ. ಚಿಕ್ಕ ಪ್ರಮಾಣದ್ದಿರಬಹುದು ಅಥವಾ ದೊಡ್ಡ ಅಗಾಧ ಗಾತ್ರದ್ದಿರಬಹುದು. ಅದಕ್ಕೆ ಅನುಗುಣವಾಗಿ, ಹಲವಾರು ಕೆಲಸಗಾರರನ್ನ ನಿಯಮಿಸಿಕೊಳ್ಳಬೇಕಾದದ್ದು ಅವಶ್ಯಕ. ಇದು ಪರಾವಲಂಬನೆ ಅಲ್ಲ. ಹಿತಮಿತವಾಗಿ ತನ್ನ ಕೆಲಸವನ್ನ ಬೇರೊಬ್ಬರೊಂದಿಗೆ ಹಂಚಿಕೊಳ್ಳುವ ಒಂದು ವಿಧಾನ. ಆ ಕೆಲಸಗಾರರಲ್ಲಿ, ಏನೋ ಕಾರಣಕ್ಕೆ, ಯಾರೋ ಒಬ್ಬ ಒಂದು ದಿನ ಬರಲಿಲ್ಲ ಅಂದಾಗ ಅಂದುಕೊಳ್ಳಿ, ಆ ಕೆಲಸವನ್ನ ನೀವು ಮಾಡೋದಕ್ಕೆ ನೀವೇ ಸಿದ್ಧರಿರಬೇಕು!

ಸರಿ ಜೀವನವೇ ಒಂದು ಯುದ್ಧ. ಒಂದು ಸ್ಪರ್ಧೆ! ಈ ಸಮರಾಂಗಣದಲ್ಲಿ, ಇನ್ನೊಬ್ಬರನ್ನ ಅವಲಂಬಿಸಿ ತಾನು ಗೆಲ್ಲುತ್ತೀನಿ, ತಾನು ಉಳಿತೀನಿ ಅನ್ನೋ ಮಾತು ಸುಳ್ಳು!

ಸೋಜಿಗದ ವಿಷಯ ಅಂದರೆ ಪ್ರತಿಯಾಬ್ಬ ವ್ಯಕ್ತಿಗೂ ತುಂಬಾ ಸಾಮರ್ಥ್ಯ ಇರುತ್ತೆ. ಆದರೆ ಅದನ್ನ ಆ ವ್ಯಕ್ತಿ ಪೂರ್ತಿ ಉಪಯೋಗಿಸಿಕೊಳ್ತಾ ಇರೋದಿಲ್ಲ. ಉದಾಹರಣೆಗೆ ನೋಡಿ ಪ್ರಾಣಕ್ಕೆ ಅಪಾಯ ಒದಗಿದಾಗ, ಇದು ಜೀವನ್ಮರಣ ಪ್ರಶ್ನೆ ಬಂದಾಗ ಜನಗಳು ಎಷ್ಟೊಂದು ಆಶ್ಚರ್ಯಕರವಾಗಿ ಹಿಂದೆಂದೂ ಮಾಡಿರದ ಕೆಲಸ ಮಾಡಿಬಿಡುತ್ತಾರೆ!

ಸ್ವಾವಲಂಬನೆಗೆ ಅಂತಃಸತ್ವ ಮುಖ್ಯ. ಬೇರೆ ಉಪಕರಣಗಳೆಲ್ಲಾ ನೆಪ ಮಾತ್ರ. ಬಹಳ ಜನ ಯಶಸ್ಸನ್ನು ಗಳಿಸಿಕೊಂಡಿರೋದು ತಮ್ಮ ಅಂತಃಸತ್ವದಿಂದಲೇ. ಅದಕ್ಕೆ ಹೇಳ್ತಾರೆ: ‘‘ಕ್ರಿಯಾ ಸಿದ್ಧಿಃ ಸತ್ವೇ ಭವತಿ ಮಹತಾಂ ನ ಉಪಕರಣೇ’’ ಅಂತ.

ಪ್ರಯತ್ನದಿಂದಲೇ ಎಲ್ಲಾ ಕಾರ್ಯಗಳು ಸಿದ್ಧಿಸುತ್ತವೆ. ಮಂತ್ರಿಸಿದರೆ ಮಾವಿನಕಾಯಿ ಉದುರುವುದಿಲ್ಲ. ಬರಿಯ ಬಯಕೆಯಿಂದ ಬಾಯಿ ಚಪ್ಪರಿಸಲಾಗುವುದಿಲ್ಲ ; ಪ್ರಯೋಜನವಿಲ್ಲ. ಕಾಡಿನಲ್ಲಿ ಮಲಗಿದ ಸಿಂಹದ ಬಾಯಲ್ಲಿ ಮೃಗಗಳು ತಾವಾಗಿಯೇ ಹೋಗಿ ಬೀಳುವುವೇನು? ಆಹಾರ ಬೇಕಿದ್ದರೆ, ತಾನೇ ಎದ್ದು ಹೋಗಿ ಬೇಟೆಯಾಡಬೇಕು. ‘‘ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶನ್ತಿ ಮುಖೇ ಮೃಗಾಃ ।।’’

ಸುಖ ಬೇಕಿದ್ದರೆ ಸ್ವಾವಲಂಬಿಗಳಾಗಿ !

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+