ಒಂದು ಕೊಲೆ ಮಾಡಲು ಅನುಮತಿ ಸಿಕ್ಕ ಮೇಲೆ...!
- ಸ್ಮಿತಾ; ಬೆಂಗಳೂರು
[email protected]
ಈಗ ದೇಶದಲ್ಲಿ ಆಗುತ್ತಿರುವ ಕೊಲೆಗಳು ಏನು ಕಡಿಮೆಯೇ, ಹೊಸದಾಗಿ ಕೊಲೆ ಮಾಡಲು ಅನುಮತಿ ಕೇಳಲು? ಕೊಲೆಗಡುಕರಿಗೆ (ಅವರು ಸಿಕ್ಕಿಬಿದ್ದರೆ, ತಪ್ಪು ಸಾಬೀತಾದರೆ... ಮೊದಲಾದ ‘ರೇ’ಗಳನ್ನು ದಾಟಿ) ಶಿಕ್ಷೆ ಇರುವಾಗಲೇ ಇಷ್ಟೊಂದು ಕೊಲೆಗಳು ನಡೆಯುತ್ತಿವೆ ಎಂದ ಮೇಲೆ ಇನ್ನು ಅನುಮತಿ ಇದ್ದರೆ ಇನ್ನೇನು ಆಗಬಹುದು ಅಂತ ಯೋಚನೆಯೇ? ಜನಸಾಮಾನ್ಯರಾದ ನಾವು, ಕೊಲೆ ಮಾಡಿದ ಕನಸು ಕಂಡರೆ ಹೆದರಿ ಸಾಯುತ್ತೇವೆ - ಇನ್ನು ನಿಜವಾಗಲೂ ಕೊಲೆ ಮಾಡುವುದೇ?
ಹಾಗಾದರೆ ನಾವು ಕೊಲೆ ಮಾಡಿಲ್ಲವೇ? ಮಾಡುವುದಿಲ್ಲವೇ? ಇಲ್ಲ ಅಂತೀರಾ. ಆದರೆ ನನಗೆ ಗೊತ್ತು ನಾವೆಲ್ಲಾ ಕೊಲೆ ಮಾಡಿದ್ದೇವೆ ಅಂತ! ಹೆದರಬೇಡಿ, ವಕೀಲರು ಅಥವಾ ಪೊಲೀಸರು ನಿಮ್ಮ ಮನೆ ಬಾಗಿಲು ತಟ್ಟುವುದಿಲ್ಲಾ. ನಾವು ಮಾಡಿದ ಕೊಲೆಗೆ ಶಿಕ್ಷೆ ಇಲ್ಲ. ಗೊತ್ತಾಯ್ತಲ್ಲಾ ನಾನು ಹೇಳುತ್ತಿರುವ ಕೊಲೆಗಳು ಯಾವುದು ಅಂತಾ. ಹೌದು! ಇರುವೆ, ಸೊಳ್ಳೆ, ಜಿರಳೆ, ದೊಡ್ಡದು ಅಂದ್ರೆ ಇಲಿ - ಇನ್ನು ಕೆಲವರು ಅಬ್ಬಬ್ಬಾ ಅಂದ್ರೆ ಹಾವಿನ ಕೊಲೆ ಮಾಡಿರಬಹುದೇನೊ (ಅದೂ ಹಾವು ಸಾಯಬಾರದು, ಕೋಲು ಮುರೀಬಾರದು ಅನ್ನುವ ಇಂಗಿತವಿದ್ದರೂ, ಬೇರೆ ಉಪಾಯವಿಲ್ಲದೆ)!
ದಿನಾ ನಮ್ಮಂಥವರಿಂದ ಈ ರೀತಿ ಎಷ್ಟೋ ಕೀಟಗಳು/ಪ್ರಾಣಿಗಳು ಸಾಯುತ್ತವೆ. ಆದರೆ ಯಾರೂ ಅದರ ಬಗ್ಗೆ ಯೋಚಿಸುವುದಿಲ್ಲ. ಏಕೆ ಅಂದರೆ ಅದಕ್ಕೆ ಶಿಕ್ಷೆ ಇಲ್ಲ. (ನಾನೇನು, ಮೇನಕಾ ಗಾಂಧಿ ತರಹ ವಿಚಾರಲಹರಿ ಹರಿಸುತ್ತಿದ್ದೇನಾ.....!?)
ಅದ್ಸರಿ, ಕೊಲೆ ವಿಚಾರ ಸ್ವಲ್ಪ ಗಂಭೀರವಾಗೇ ಯೋಚಿಸಿದ್ರೆ....
ಪ್ರತಿಯಾಬ್ಬ ಮನುಷ್ಯನಿಗೆ ಇನ್ನೊಬ್ಬ ಮನುಷ್ಯನ ಕೊಲೆಗೆ ಅನುಮತಿ ಇದ್ದರೆ? ನೀವು ಯಾರನ್ನು ಕೊಲ್ಲುವಿರಿ? ಹಾಂ! ಬರೀ ಕೊಲೆ ಮಾಡಿದರೆ ಆಗ್ಲಿಲ್ಲ, ಅದಕ್ಕೆ ಸರಿಯಾದ ಜಸ್ಟಿಫಿಕೇಶನ್ ಕೊಡಬೇಕು. ಬೇರೆಯವರ ದೃಷ್ಟಿಯಲ್ಲೂ ಹೌದು ಇದು ನಡೆಯಲೇಬೇಕಿದ್ದ ಕೊಲೆ ಎಂದೆನಿಸಿಕೊಳ್ಳಲು ಯೋಗ್ಯವಿರಬೇಕು :- ಇಂಥ ಚಾನ್ಸ್ ನನಗೆ ಬಂದರೆ....
ನಾನು ಮೊದಲು ವೀರಪ್ಪನ್ನನ್ನು ಕೊಲ್ಲುವುದು ಅಂದುಕೊಂಡೆ... ಆದರೆ...
- ಅವನನ್ನು ಎಲ್ಲಿ ಹುಡುಕೋದು !?
- ಆತ ಕೆಲ ಮಂದಿಗಾದರೂ ಸಹಾಯಹಸ್ತ ನೀಡಿರುವದಕ್ಕಲ್ಲವೇ ಅವನ ಅಡಗುದಾಣ ಬೇರೆಯವರಿಗೆ ಗೊತ್ತಿಲ್ಲದಂತೆ ಇರುವುದು? ಅಂಥಾ ವೀರಪ್ಪನನ್ನು ಕೊಂದು ಆ ಜನತೆಯನ್ನು ನಾನು ಅನಾಥರನ್ನಾಗಿ ಮಾಡುವುದೇ?
- ಅಷ್ಟೇ ಅಲ್ಲದೇ ಒಂದೊಮ್ಮೆ ನಾನು ಅವನನ್ನು (ವೀರಪ್ಪನ್) ಕೊಂದರೆ ಅವನ ಅಭಿಮಾನಿಗಳು(??) ನನ್ನನ್ನು ಬಿಟ್ಟಾರೆಯೇ?
ಹಾಗಾದರೆ ಬೇರೆ ಯಾರಾದರೂ ದರೋಡೆಕೋರರನ್ನು ಕೊಲೆ ಮಾಡಲೇ?
ಬಟ್, (ನನ್ನ ಎಲ್ಲ ಇಫ್-ಬಟ್ಗಳೇ ಮುಗಿಯಲಾರದವು...)
- ಅವರನ್ನು ನಂಬಿಕೊಂಡ ಪರಿವಾರಕ್ಕಾಗಿ ಅಲ್ಲವೇ ಅವರು ದರೋಡೆಗಿಳಿದಿರುವುದು? ಆವರಿಗೂ ನಮ್ಮ ಹಾಗೇ ಜೀವನೋಪಾಯಕ್ಕೆ ಸರಿಯಾದ ಕೆಲಸ ಇದ್ದರೆ ಹೀಗೆ ಮಾಡುತ್ತಿದ್ದರೇ?
- ಕೆಲವು ಮಂದಿ ಇದಕ್ಕೆ ವ್ಯತಿರಿಕ್ತವಾಗಿ, ಅಂದರೆ ರೆಗ್ಯುಲರ್ ದುಡಿಮೆ ಇದ್ದೂ ದರೋಡೆಕೋರರಾಗಿರಬಹುದು; ಸಂಭಾವಿತರಂತೆ ಸೋಗುಹಾಕಿಕೊಂಡಿರುವ ಅಂಥವರನ್ನು ನಾನು ಹುಡುಕುವುದಾದರೂ ಹೇಗೆ?
ಹೀಗೆ ವಿಷ್ಲೇಸಿಸುತ್ತಾ ಹೋದರೆ, ಪ್ರತಿಯಾಬ್ಬ ಮನುಷ್ಯನೂ ಒಬ್ಬರಲ್ಲ ಇನ್ನೊಬ್ಬರಿಗೆ ಬೇಕಾದವನು, ಹಾಗಾಗಿ ಯಾರನ್ನು ಕೊಲ್ಲುವುದು ಎಂದು ಯಾಚಿಸುವುದೇ ಕಷ್ಟ.
ಅದಕ್ಕಾಗಿ,
‘ಕೊಲ್ಲುವ’ ಬಗೆಗಿನ ನನ್ನ ಯೋಚ(ಜ)ನೆಯನ್ನೇ ಕೊಂದುಹಾಕಿದ್ದೇನೆ; ನಿಶ್ಚಿಂತೆಯಿಂದಿರಿ!












Click it and Unblock the Notifications