ಇತಿ ನಾಟಕ ಅಕಾಡೆಮಿ ವಾರ್ಷಿಕ ಸಂಪ್ರದಾಯ ಪೂರ್ಣಂ !
*ನಾಡಿಗೇರ್ ಚೇತನ್
ಕರ್ನಾಟಕ ನಾಟಕ ಅಕಾಡೆಮಿ ಕಳೆದ ಎರಡೂವರೆ ದಶಕದಲ್ಲಿ ಸೃಜನಶೀಲತೆಯ ರಂಗ ಪ್ರಯೋಗ ಮತ್ತು ಸಂಶೋಧನೆಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಅಕಾಡೆಮಿಯ ಮೂಲೋದ್ದೇಶ ಈಡೇರಿಸಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಬಣ್ಣಿಸಿದರು.
ಕರ್ನಾಟಕ ನಾಟಕ ಅಕಾಡೆಮಿಯ 2002 ನೇ ಇಸವಿಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ (ಮಾರ್ಚ್ 28ರ ಶನಿವಾರ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರೊ.ಬಿ.ಕೆ. ಸಿ ಮಾತನಾಡುತ್ತಿದ್ದರು. ಕನ್ನಡ ರಂಗಭೂಮಿಯನ್ನು ನಿಂತ ನೀರಾಗಿಸದೆ ಅನೇಕ ಚಟುವಟಿಕೆಗಳಿಂದ ಜೀವಂತವಾಗಿರುವಂತೆ ನಮ್ಮ ರಂಗ ತಜ್ಞರು ಬಹಳ ಶ್ರಮಪಟ್ಟಿದ್ದಾರೆ ಎಂದು ಅವರು ಹೇಳಿದರು.
ರಂಗಮಾಧ್ಯಮದ ಮೂಲಕ ಶಿಕ್ಷಣ
ಮುಂದಿನ ಶೈಕ್ಷಣಿಕ ವರ್ಷ 2004ರಿಂದ ಯೋಗ, ಸಂಗೀತ, ನಾಟಕ ಮತ್ತು ನೃತ್ಯ ಪ್ರಕಾರಗಳನ್ನು ಐದನೇ ತರಗತಿಯಿಂದ ಕಡ್ಡಾಯಗೊಳಿಸಲು ಸರ್ಕಾರ ಯೋಚಿಸುತ್ತಿದೆ. ಈ ವಿಷಯವಾಗಿ ಆಡಳಿತಾತ್ಮಕ ಗೊಂದಲ ನಿವಾರಣೆಗೆ ಹಲವು ಸಂಘ, ಸಂಸ್ಥೆ ಮತ್ತು ವಿವಿಗಳೊಂದಿಗೆ ಸಮಾಲೋಚನೆ ಮತ್ತು ಪ್ರತ್ಯೇಕ ಕಾನೂನು ಜಾರಿಗೆ ಸರಕಾರದ ಚಿಂತನೆ ನಡೆಸುತ್ತಿದೆ ಎಂದು ಬಿ.ಕೆ.ಸಿ. ಹೇಳಿದರು.
ಶಿಕ್ಷಕರಿಗೆ ಈ ವಿಷಯದಲ್ಲಿ ತರಬೇತಿ ಕೊರತೆ ಇರುವ ಕಾರಣ, ಹೊಸದಾಗಿ 5000 ಶಿಕ್ಷಕರ ನೇಮಕಾತಿ ಮಾಡಲು ಸರ್ಕಾರ ಯೋಚಿಸುತ್ತಿದೆ. ನೇಮಕಾತಿ ಪೂರ್ಣಗೊಂಡ ಬಳಿಕ ಆಯ್ಕೆಯಾದ ಶಿಕ್ಷಕರಿಗೆ 3-4 ತಿಂಗಳು ತರಬೇತಿ ನೀಡಲಾಗುತ್ತದೆ. 5000 ಶಿಕ್ಷಕರಲ್ಲಿ ರಂಗ ಶಿಕ್ಷಣ ಪದವಿ ಪಡೆದ 200 ಮಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಕರ್ನಾಟಕ ಸಾಂಸ್ಕೃತಿಕ ನೀತಿ
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸಾಂಸ್ಕೃತಿಕ ನೀತಿಯಾಂದು ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಹೇಳಿದರು.
ಉದ್ದೇಶಿತ ನೂತನ ನೀತಿ ಜಾರಿಯಾದರೆ ಸಂಘ-ಸಂಸ್ಥೆಗಳಿಗೆ ಶಾಶ್ವತ ಅನುದಾನ ನೀಡುವ ಬಗೆಗಿನ ಗೊಂದಲ ಬಗೆಹರಿಯತ್ತದೆ. ಕೇವಲ 8 ಸಂಸ್ಥೆಗಳಿಗೆ ಮಾತ್ರ ಸರ್ಕಾರ ಅನುದಾನ ನೀಡುವುದು ಸರಿಯೇ ಎನ್ನುವ ಕುರಿತು ಸಾರ್ವಜನಿಕ ಚರ್ಚೆ ಅಗತ್ಯ. ಕೆಲವೇ ಸಂಸ್ಥೆಗಳಿಗೆ ಅನುದಾನ ನೀಡುವ ಬಗೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಮತ್ತು ಹಲವು ವರ್ಷಗಳಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಯಾವುದೇ ಪ್ರೋತ್ಸಾಹ ಸಿಗದಂತಾಗುತ್ತದೆ ಎಂದು ರಾಣಿ ಸತೀಶ್ ತಿಳಿಸಿದರು.
ಹೊಸ ಬೇಡಿಕೆಗಳೂ, ಅದರ ಪೂರೈಕೆಯೂ...
ವೃತ್ತಿ ರಂಗಭೂಮಿಯ ಕಾಯಕಲ್ಪಕ್ಕಾಗಿ ನೀಡುತ್ತಿರುವ ಅನುದಾನವನ್ನು 5 ರಿಂದ 10 ಲಕ್ಷಕ್ಕೇರಿಸುವ ಬೇಡಿಕೆಯ ಪರಿಗಣನೆ, ವೃತ್ತಿ ನಾಟಕ ಕಂಪನಿ ಕ್ಯಾಂಪ್ ಲೈಸನ್ಸ್ ನೀಡಿಕೆ ಸರಳೀಕರಣ, ಕಲಾವಿದರ ವಿಮೆ ಯೋಜನೆ, ಯುವಜನರಿಗೆ ರಂಗಶಿಕ್ಷಣದಲ್ಲಿ ತರಬೇತಿ, ಮುಂತಾದ ಅಕಾಡೆಮಿಯ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ರಾಣಿ ಸತೀಶ್ ಹೇಳಿದರು. ನಾಟಕ ಅಕಾಡೆಮಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿದರೆ ಅದಕ್ಕೆ ವೆಚ್ಚವಾಗುವ ಸಂಪೂರ್ಣ ಹಣವನ್ನು ಸರ್ಕಾರ ನೀಡಲಿದೆ ಎಂದು ಆಶ್ವಾಸನೆ ನೀಡಿದರು. ಅವರು ನಾಟಕ ಅಕಾಡೆಮಿ ಅಧ್ಯಕ್ಷ ಆರ್. ನಾಗೇಶ್ ಮಂಡಿಸಿದ ಬೇಡಿಕೆಗಳಿಗೆ ಪ್ರತಿಕ್ರಿಯಿಸಿ ಈ ಹೇಳಿಕೆ ನೀಡಿದರು.
29 ರಂಗಕರ್ಮಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 5000 ರೂಪಾಯಿ ನಗದು, ನಟರಾಜ ವಿಗ್ರಹ ಹಾಗೂ ಪ್ರಶಸ್ತಿ ಪತ್ರವನ್ನು ನಾಟಕ ಅಕಾಡೆಮಿ ಪುರಸ್ಕಾರ ಒಳಗೊಂಡಿತ್ತು .
ಪ್ರಶಸ್ತಿ ಪುರಸ್ಕೃತರು :
ಅನ್ನದಾನಯ್ಯ, ವಿ.ಎನ್. ಅಕ್ಕಿ, ಕಾಲಭೈರವ ಗಂಗಾಧರ್, ಗಜಾನನ ಉಮೇಶ ಭಟ್ಟ, ಚೆನ್ನವೀರ ಝಳಕಿ, ಕೆ. ಜಯರಾಮ ರೆಡ್ಡಿ, ಕೆ. ಮಂಜುನಾಥ್, ಎಂ. ದ್ವಾರಕನಾಥ್, ನಟರಾಜ ಹೊನ್ನವಳ್ಳಿ, ನಾ. ಶ್ರೀನಿವಾಸ, ಪ್ರಭಾಕರ ದ. ಕೋಪರ್ಡೆ, ಕೆ. ಬಾಲಕೃಷ್ಣ ಪೈ, ಭೀಮಪ್ಪ ಅಣ್ಣಪ್ಪ ಸನದಿ, ಆರ್.ಎಸ್. ರಾಜಾರಾಂ, ಪಿ.ಎಲ್. ರಂಗಸ್ವಾಮಯ್ಯ, ಡಾ. ಹೆಚ್.ಎಸ್. ರಾಜಶೇಖರ, ರಾಜು ತಾಳಿಕೋಟೆ, ವಸಂತ ಬನ್ನಾಡಿ, ಬಿ.ಆರ್. ವೆಂಕಟರಮಣ ಐತಾಳ್, ವೀರಯ್ಯ ಬಸಲಿಂಗಯ್ಯ ಹಿರೇಮಠ ಮಂಡಲಗಿರಿ, ಎಸ್. ವೀರಪ್ಪ ಕುಕ್ಕವಾಡ, ವೈಶಾಲಿ ಕಾಸರವಳ್ಳಿ, ಶೋಭಾ ರಂಜೋಳಕರ್, ಬಿ. ಶಿನಕುಮಾರಿ, ವಿ.ಎಸ್. ಶಿರಹಟ್ಟಿಮಠ, ಕೆ. ಸಣ್ಣೇಗೌಡ, ಸೇತುಮಾಧವ ರಂಗಾಚಾರ್ಯ ಮಾನವಿ , ಹರಿಕೃಷ್ಣ , ಟಿ.ಹೆಚ್. ಹೇಮಲತಾ ಪ್ರಶಸ್ತಿ ಸ್ವೀಕರಿಸಿದರು.
ಸಮಾರಂಭದಲ್ಲಿ ವೃತ್ತಿರಂಗಭೂಮಿಯ ಮಹತ್ತರ ನಾಟಕಗಳು ಎಂಬ ಪುಸ್ತಕವನ್ನು ಹಿರಿಯ ಕವಿ ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು. ರಾಮಕೃಷ್ಣ ಮರಾಠೆ ಮತ್ತು ಗುಡಿಹಳ್ಳಿ ನಾಗರಾಜ್ ಅವರ ಸಂಪಾದಕತ್ವದಲ್ಲಿ ಈ ಪುಸ್ತಕವನ್ನು ನಾಟಕ ಅಕಾಡೆಮಿ ಪ್ರಕಟಿಸಿದೆ.
ಮಗುವಂತೆ ಪೊರೆಯಲಿ
ಬೇರೆ ಯಾವ ಸರ್ಕಾರವೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಮಟ್ಟಿಗಿನ ಪ್ರೋತ್ಸಾಹ ನೀಡಿಲ್ಲ. ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದ್ದು , ಅಕಾಡೆಮಿಯೂ ಸಾಧನೆಯೂ ಸಾಕಷ್ಟಿದೆ. ಆದರೆ ಆಗಬೇಕಾದದ್ದು ಇನ್ನೂ ಸಾಕಷ್ಟಿದೆ. ತಾಯಿ ತನ್ನ ಮಗುವನ್ನು ಪೊರೆಯುವಂತೆ ಸರ್ಕಾರ ಅಕಾಡೆಮಿಯನ್ನು ಪೊರೆಯಬೇಕು ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಆರ್.ನಾಗೇಶ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications