ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಬೀಜ
*ವಿಶೇಷ ಪ್ರತಿನಿಧಿಯಿಂದ
ಬೆಳಗಾವಿ : ಪ್ರಸಕ್ತ ಸಾಲಿನಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಸಮ್ಮೇಳನದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು , ಈ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವಂತೆ ಪುನರೂರು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರನ್ನು ಸಮ್ಮೇಳನದ ಮೊದಲ ದಿನ (ಮಾ.7) ಆಗ್ರಹಿಸಿದರು.
ಪುನರೂರು ಅವರ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಕೃಷ್ಣ - ವಿಶ್ವ ಕನ್ನಡ ಸಮ್ಮೇಳನದ ಕುರಿತು ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸಿ, ಆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಮತ್ತು ಬೆಳಗಾವಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯ ಪ್ರಭಾಕರ ಕೋರೆ ಹಾಗೂ ಸಂಯುಕ್ತ ಜನತಾದಳದ ಮುಖಂಡ ಪಿಜಿಆರ್ ಸಿಂಧ್ಯಾ ಅವರು ವಿಶ್ವ ಕನ್ನಡ ಸಮ್ಮೇಳನದ ಜವಾಬ್ದಾರಿ ಹೊರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ.
ಸರ್ಕಾರಿ ನೌಕರರಿಂದ ದೇಣಿಗೆ : ವಿಶ್ವ ಕನ್ನಡ ಸಮ್ಮೇಳನ ಏರ್ಪಾಡಾದಲ್ಲಿ ಅದಕ್ಕೆ ಅಗತ್ಯವಾದ ನಿಧಿಯನ್ನು ಸರ್ಕಾರಿ ನೌಕರರ ದೇಣಿಗೆಯಿಂದ ಸಂಗ್ರಹಿಸಿಕೊಡುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸಿಪ್ಪೇಗೌಡ ತಿಳಿಸಿದ್ದಾರೆ.