ಮಂಕುತಿಮ್ಮನ ಕಗ್ಗವದು ಕನ್ನಡ ಭಗವದ್ಗೀತೆಯು
ಕುಂದಾಪುರ : ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ, ವಿರಕ್ತ ರಾಷ್ಟ್ರಕ ಡಿ.ವಿ. ಗುಂಡಪ್ಪ ಅವರು ಡಿವಿಜಿ ಎಂದೇ ಖ್ಯಾತರು. ಇವರು ಬರೆದಿರುವ ಮಂಕುತಿಮ್ಮನ ಕಗ್ಗ ಜೀವನದ ಅರ್ಥ ಮತ್ತು ಪರಮಾರ್ಥಗಳನ್ನು ಸೊಗಸಾಗಿ ವರ್ಣಿಸಿರುವ ಅಸಾಧಾರಣ ಕೃತಿ. ಇದು ನಿಜಕ್ಕೂ ಕನ್ನಡದ ಭಗವದ್ಗೀತೆಯೇ ಸರಿ ಎಂದು ವಿದ್ವಾಂಸ ಕೆ. ಮಾಧವ ಪೈ ಇಲ್ಲಿ ಹೇಳಿದ್ದಾರೆ.
ಕನ್ನಡದ ಈ ಮಹಾನ್ ಕೃತಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದನ್ನು ಸಾಬೀತು ಪಡಿಸಿದೆ. ಗಾತ್ರದಲ್ಲಿ ಚಿಕ್ಕದಾದರೂ ಈ ಕೃತಿ ಮನುಷ್ಯನ ಬದುಕನ್ನೇ ಬದಲಾಯಿಸುವ ಶಕ್ತಿ ಉಳ್ಳದ್ದಾಗಿದೆ. ಹೀಗಾಗೇ ಈ ಕೃತಿ ಇಂಗ್ಲಿಷ್, ಹಿಂದಿ, ಸಂಸ್ಕೃತವೇ ಮೊದಲಾದ ಭಾಷೆಗಳಿಗೆ ತರ್ಜುಮೆಯಾಗಿದೆ. ಬದುಕಲ್ಲಿ ಶಾಂತಿ ನೆಮ್ಮದಿ ಕಾಣಲು ಕನ್ನಡಿಗರೆಲ್ಲರೂ ಈ ಅಮೂಲ್ಯ ಗ್ರಂಥದ ಮನನ ಮಾಡಬೇಕು ಎಂದು ಮಂಗಳೂರಿನ ಉದ್ಯಮಿಯೂ, ವಿದ್ವಾಂಸರೂ ಆದ ಪೈ ಹೇಳಿದರು.
ಇಲ್ಲಿನ ಶ್ರೀ ಕುಂದೇಶ್ವರ ಕಲಾಭವನದಲ್ಲಿ ಸೇವಾ ಸಂಗಮ ಮತ್ತು ಶ್ರೀ ಕುಂದೇಶ್ವರ ದೇವಳದ ಸಹಯೋಗದಲ್ಲಿ ನಡೆದ ವಿಚಾರ ಮಂಡಲ ಕಾರ್ಯಕ್ರಮದಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕುರಿತು ಅವರು ಮಾತನಾಡಿದರು. ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಸುಶ್ರಾವ್ಯವಾಗಿ ವಾಚಿಸಿ ವಿವರಣೆ ನೀಡಿದ ಅವರು, ಕಗ್ಗವೆಂಬುದು ಬಿಡಿಸಲಾಗದ ಕಗ್ಗಂಟಲ್ಲ. ಓದುತ್ತಾ ಹೋದರೆ, ಸರಳವಾಗಿ ಎಲ್ಲರಿಗೂ ಅರ್ಥವಾಗುವ ಅಮೂಲ್ಯ ಗ್ರಂಥ ಅದು ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಸೇವಾ ಸಂಗಮದ ಅಧ್ಯಕ್ಷ ಡಾ. ಎಸ್.ಎನ್. ಪಡಿಯಾರ್, ಕಣ್ವಕೆರೆ ಸೂರ್ಯನಾರಾಯಣ ಹೆಬ್ಬಾರ್, ಡಾ. ಎಚ್.ವಿ. ನರಸಿಂಹ ಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.