ಕನ್ನಡ ಮಾಧ್ಯಮ ಶಿಕ್ಷಣ: ಕೋರ್ಟ್ ಮೊರೆಹೋಗಲು ಪ್ರಾಧಿಕಾರ ನಿರ್ಧಾರ
ಬೆಂಗಳೂರು: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಅಳವಡಿಸುವ ರಾಜ್ಯ ಸರಕಾರದ 1994ರ ಆದೇಶಕ್ಕೆ ರಾಜ್ಯ ಹೈಕೋರ್ಟ್ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ.
ಪ್ರಾಧಿಕಾರದ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಸೋಮವಾರ ತಿಳಿಸಿದ್ದಾರೆ. ರಾಜ್ಯ ಸರಕಾರವು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿದೆ. ಆ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಒಂದನೇ ತರಗತಿಯನ್ನು ಕನ್ನಡ ಮಾಧ್ಯಮಕ್ಕೆ ಪರಿವರ್ತಿಸುವುದು ಅನಿವಾರ್ಯವಾಗಿತ್ತು. ರಾಜ್ಯ ಸರಕಾರದ ಈ ಆದೇಶದ ವಿರುದ್ಧ ಶಿಕ್ಷಣ ಸಂಸ್ಥೆಗಳು ಕೋರ್ಟ್ ಮೆಟ್ಟಿಲು ಹತ್ತಿವೆ.
ಪ್ರಸ್ತುತ ವಿಧಾನ ಮಂಡಲದಿಂದ ಅಂಗೀಕೃತವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ 2ನೇ ಅಧ್ಯಾಯದ ಪ್ರಕಾರ ಪ್ರಾಧಿಕಾರವೇ ನ್ಯಾಯಾಯಲಕ್ಕೆ ಹೋಗಲು ಅವಕಾಶವಿದೆ. ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಪ್ರಾಧಿಕಾರದ ಸಭೆ ಸರ್ವಾನುಮತದೊಂದಿಗೆ ನಿರ್ಧರಿಸಿದೆ.
ತಡೆಯಾಜ್ಞೆ ತೆರವುಗೊಳಿಸುವಂತೆ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಕಾನೂನು ಇಲಾಖೆಯ ಗಣ್ಯರು, ಕನ್ನಡಪರ ಹೋರಾಟ ಸಂಘಟನೆಗಳು, ಅಡ್ವಕೇಟ್ ಜನರಲ್ ಅವರನ್ನು ಆಗ್ರಹಿಸಿವೆ. ಆದರೆ ಈ ಆಗ್ರಹಗಳಿಂದ ಯಾವುದೇ ಪ್ರಯೋಜನವಾಗದೇ ಇರುವುದರಿಂದ ಸ್ವತಃ ಪ್ರಾಧಿಕಾರವೇ ಮಧ್ಯ ಪ್ರವೇಶಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)