ತುಮಕೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯುನ್ಮಾನ ಕ್ರಾಂತಿ
ತುಮಕೂರು : ಇದು ನಿಜಕ್ಕೂ ಶುಭ ಲಕ್ಷಣ. ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಕೂಡ ಆಧುನಿಕತೆಯ ಗಾಳಿ ಬೀಸುತ್ತಿದೆ. ವಿಘ್ನೕಶ್ವರನ ಮದುವೆಗೆ ನೂರೆಂಟು ವಿಘ್ನ ಎನ್ನುವಂತೆ ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ನೂರೆಂಟು ವಿಘ್ನಗಳು ಬಂದು ಮುಂದೂಡಿಕೆ ಆಗುತ್ತಿದ್ದರೂ ಈ ಬಾರಿ ವಿದ್ಯುನ್ಮಾನ ಕ್ರಾಂತಿಯೇ ನಡೆಯುತ್ತಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಮ್ಮೇಳನದ ಸಮಗ್ರ ಮಾಹಿತಿ ನೀಡುವ ಅಧಿಕೃತ ವೆಬ್ಸೈಟ್ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಸಮ್ಮೇಳನ ಆಯೋಜಿಸಿದರವರಿಗೆ ಇಂಟರ್ನೆಟ್ ಮಹತ್ವ ಅರಿವಾಗಿದೆ.
ಈ ನಿಟ್ಟಿನಲ್ಲಿ ವೆಬ್ಸೈಟ್ ಹೇಗಿರಬೇಕು, ವೆಬ್ಸೈಟ್ನಲ್ಲಿ ಏನೆಲ್ಲಾ ವಿಷಯಗಳಿರಬೇಕು ಎಂಬ ಬಗ್ಗೆ ಜಿಲ್ಲಾ ವಾರ್ತಾಧಿಕಾರಿ ಹಾಗೂ ಪ್ರಚಾರ ಸಮಿತಿ ಗೌರವಾಧ್ಯಕ್ಷ ಎಂ. ಶಿವಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.
ಈವರೆಗೆ ನಡೆದಿರುವ ಎಲ್ಲ ಸಾಹಿತ್ಯ ಸಮ್ಮೇಳನಗಳ ಸಂಕ್ಷಿಪ್ತ ವಿವರ, ತುಮಕೂರು ಜಿಲ್ಲೆಯ ಸಮಗ್ರ ಮಾಹಿತಿ, ಸಮ್ಮೇಳನಾಧ್ಯಕ್ಷರ ವ್ಯಕ್ತಿಚಿತ್ರ, ಸಮ್ಮೇಳನದ ಸಿದ್ಧತೆಯ ಪಕ್ಷಿನೋಟ, ಸಮ್ಮೇಳನದ ವರದಿ ಇತ್ಯಾದಿ ವಿವರಗಳನ್ನು ವೆಬ್ಸೈಟ್ನಲ್ಲಿ ದಾಖಲಿಸಲು ನಿರ್ಧರಿಸಲಾಗಿದೆ.
ಮಾಧ್ಯಮಕೇಂದ್ರ : ಸಮ್ಮೇಳನ ಸಭಾಂಗಣದ ಬಳಿ ಸುಸಜ್ಜಿತ ಮಾಧ್ಯಮ ಕೇಂದ್ರ ತೆರೆಯಲೂ ತೀರ್ಮಾನಿಸಲಾಗಿದೆ. ಈ ಕೇಂದ್ರದಲ್ಲಿ ಫ್ಯಾಕ್ಸ್, ದೂರವಾಣಿ, ಇಂಟರ್ನೆಟ್, ಜೆರಾಕ್ಸ್ ಸೌಲಭ್ಯ ಒದಗಿಸುವುದರ ಜೊತೆಗೆ ವೀಡಿಯೋ ಕ್ಲಿಪ್ಪಿಂಗ್ಸ್ ಹಾಗೂ ಛಾಯಾಚಿತ್ರಗಳನ್ನು ಸಹ ಪೂರೈಸಲು ವ್ಯವಸ್ಥೆ ಮಾಡಲಾಗುತ್ತದೆ.
ಸ್ಥಳೀಯ ಕೇಬಲ್ ಜಾಲದಲ್ಲಿ ಮೂರೂ ದಿನಗಳ ಸಮ್ಮೇಳನದ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಿಸಲೂ ತೀರ್ಮಾನಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಕೇಬಲ್ ಜಾಲದ ಟಿ.ವಿ. ಮುರಳಿಕೃಷ್ಣ ಅವರನ್ನು ಪ್ರಚಾರ ಸಮಿತಿ ಕಾರ್ಯಾಧ್ಯಕ್ಷರನ್ನಾಗಿಯೂ ನೇಮಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications