ಲಾಕ್ಡೌನ್ ಅನುಭವದ ಪುಸ್ತಕ ಬರೆದು ಮೆಚ್ಚುಗೆ ಪಡೆದ ಬೆಂಗಳೂರಿನ ಬಾಲಕಿ
ಕೊರೊನಾ ಸೋಂಕು ಜನರು ಬದುಕುವ ರೀತಿಯನ್ನೇ ಬದಲಿಸಿಬಿಟ್ಟಿದೆ. ಅದರಲ್ಲೂ ಶಾಲೆಗೆ ಹೋಗುತ್ತಾ, ಆಟ ಪಾಠದಲ್ಲಿ ತೊಡಗಿಕೊಂಡಿದ್ದ ಮಕ್ಕಳನ್ನು ಈ ಸೋಂಕು ಮನೆಯೊಳಗೇ ಕೂಡಿ ಹಾಕಿದೆ. ವರ್ಷದಿಂದ ಆನ್ಲೈನ್ ಕ್ಲಾಸ್ ಮೂಲಕವೇ ಪಾಠ ನಡೆಯುತ್ತಿದ್ದು, ಸ್ನೇಹಿತರ ಒಡನಾಟವೂ ಇಲ್ಲವಾಗಿದೆ.
ಪುಟ್ಟ ಮಕ್ಕಳಿಗೆ ಈ ಲಾಕ್ಡೌನ್ ಏನೆಲ್ಲಾ ಅನುಭವಗಳನ್ನು ಕೊಟ್ಟಿರಬಹುದು? ಮಕ್ಕಳು ಏನೆಲ್ಲಾ ಕಲಿತಿರಬಹುದು? ಈ ಪ್ರಶ್ನೆಗೆ ಈ ಪುಟ್ಟ ಹುಡುಗಿಯ ಪುಸ್ತಕ ಉತ್ತರ ನೀಡುವಂತಿದೆ.
ಒಂದಾನೊಂದು ಕಾಲದಲ್ಲಿ... ಪುಟಾಣಿ ಮನಸಿನ ಲಾಕ್ಡೌನ್ ನೆನಪುಗಳು...
ಬೆಂಗಳೂರಿನ ಏಳು ವರ್ಷದ ಜಿಯಾ ಗಂಗಾಧರ್ ತನ್ನ ಲಾಕ್ಡೌನ್ ನೆನಪುಗಳನ್ನು ಪುಸ್ತಕದ ಮೂಲಕ ಹೊರತಂದಿದ್ದಾಳೆ. ಕೊರೊನಾ ಸೋಂಕು, ಲಾಕ್ಡೌನ್, ಆನ್ಲೈನ್ ಕ್ಲಾಸ್, ಸೈಬರ್ ಕ್ರೈಂ ಹೀಗೆ ಹಲವು ವಿಷಯಗಳ ಕುರಿತು ಜಿಯಾ ತನ್ನ ಪುಸ್ತಕದಲ್ಲಿ ಬರೆದಿದ್ದಾಳೆ.
"L ಇಸ್ ಫಾರ್ ಲಾಕ್ಡೌನ್- ಜಿಯಾಸ್ ಜರ್ನಲ್ ಆಫ್ ಲಾಕ್ಡೌನ್ ಲೆಸನ್ಸ್" ಎಂಬ ಶೀರ್ಷಿಕೆಯ ಈ ಪುಸ್ತಕ ಇದೀಗ ಹಲವರ ಮೆಚ್ಚುಗೆ ಗಳಿಸಿಕೊಂಡಿದೆ.
ಈ ಪುಟ್ಟ ಹುಡುಗಿಗೆ ಪುಸ್ತಕ ಬರೆಯಲು ಹಾಗೂ ಪುಸ್ತಕ ಹೊರತರಲು ದಿವ್ಯಾ ಎಎಸ್ ಜೊತೆಯಾಗಿದ್ದಾರೆ. ನಾನ್ ಫಿಕ್ಷನ್ ವಿಭಾಗದಲ್ಲಿ ಈ ಪುಸ್ತಕ ಲಭ್ಯವಿದ್ದು, ಅಮೆಜಾನ್ ಇಂಡಿಯಾದಲ್ಲಿ 158 ರೂಗೆ ಪುಸ್ತಕ ಲಭ್ಯವಿದೆ.
ಜಿಯಾ ಎರಡನೇ ತರಗತಿ ಓದುತ್ತಿದ್ದು, ಜೆಪಿಎನ್ ಈ ಪುಸ್ತಕ ಪ್ರಕಟಣೆ ಮಾಡಿದೆ. ಕೊರೊನಾ ಕಾಲದಲ್ಲಿ ತನ್ನ ಹಲವು ನೆನಪುಗಳನ್ನು, ಅನುಭವಗಳನ್ನು ಜಿಯಾ ಈ ಪುಸ್ತಕದಲ್ಲಿ ಕಲೆ ಹಾಕಿದ್ದಾರೆ. ಹಲವು ಮಂದಿಯೊಂದಿಗೆ ಮಾತುಕತೆ ನಡೆಸಿ, ಅವರ ಅನುಭವಗಳನ್ನು ಕಲೆ ಹಾಕಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಪುಸ್ತಕ ಇಷ್ಟವಾಗುವಂತಿದೆ ಎಂದು ಪ್ರಕಟಕರು ಹೇಳಿದ್ದಾರೆ.
ಒಂದು ವರ್ಷದಲ್ಲಿ ಕೊರೊನಾ ತನಗೆ ನೀಡಿದ ಅನುಭವಗಳೇನು ಎಂದು ಜಿಯಾ ಪುಸ್ತಕದ ಮೂಲಕ ಹೇಳಿಕೊಂಡಿದ್ದಾಳೆ. ಆನ್ಲೈನ್ ಕ್ಲಾಸ್, ಹೋಂ ಸ್ಕೂಲಿಂಗ್, ಈ ಹೊಸ ಜೀವನಕ್ರಮದಲ್ಲಿ ತಾನು ಕಂಡುಕೊಂಡ ದಾರಿಗಳು ಹೀಗೆ ಒಂದೊಂದು ಅನುಭವಗಳನ್ನು ತೆರೆದಿಟ್ಟಿದ್ದಾಳೆ.
ಆರಂಭದಲ್ಲಿ ಜಿಯಾ ತನ್ನ ಅನುಭವಗಳನ್ನು ಬರೆದ ಕೆಲವು ಸಾಲುಗಳನ್ನು ನೋಡಿದ ಜಿಯಾ ತಾಯಿ ಪುಸ್ತಕ ಬರೆಯಲು ಜಿಯಾಗೆ ಪ್ರೇರೇಪಣೆ ನೀಡಿದರು. ಆನಂತರ ಜಿಯಾ ಪುಸ್ತಕ ಹೊರತರಲು ದಿವ್ಯಾ ಎಂಬುವರು ನೆರವಾದರು.
"ನನಗೆ ಬರವಣಿಗೆಯಲ್ಲಿ ತುಂಬಾ ಆಸಕ್ತಿಯಿದೆ. ಮುಂದೆ ಲೇಖಕಿಯಾಗುತ್ತೇನೆ" ಎಂದು ಈ ಪುಟ್ಟ ಹುಡುಗಿ ಆಸೆಗಣ್ಣುಗಳಿಂದ ವಿವರಿಸುತ್ತಾಳೆ. ಇನ್ನೂ ಒಂದು ಪುಸ್ತಕವನ್ನು ಬರೆಯಲು ಜಿಯಾ ಅರಂಭಿಸಿದ್ದಾಳೆ.
ಇದೇ ರೀತಿ ಕೋಲ್ಕತ್ತಾ ಮೂಲದ ಹತ್ತು ವರ್ಷದ ರೇಯಾಂಶ್ ದಾಸ್ ಪುಸ್ತಕ ಬರೆದಿದ್ದನು. "ದಿ ಯೂನಿವರ್ಸ್; ದಿ ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್" ಎಂಬ ಶೀರ್ಷಿಕೆಯ ಪುಸ್ತಕ ಬರೆದು ಮಾಧ್ಯಮದ ಕಣ್ಣು ಸೆಳೆದಿದ್ದ. ರೆಯಾಂಶ್ಗೆ ಐದು ವರ್ಷವಿದ್ದಾಗ ಖಗೋಳಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಈ ಆಸಕ್ತಿಯೇ ಆತನಿಗೆ ಪುಸ್ತಕ ಬರೆಯಲು ಪ್ರೇರಣೆ ನೀಡಿತ್ತು.
Recommended Video
ಇದೇ ರೀತಿ ಒಂದಾನೊಂದು ಕಾಲದಲ್ಲಿ 2020"-ಲಾಕ್ಡೌನ್ ನೆನಪುಗಳು ಎಂಬ ಪುಸ್ತಕವನ್ನು ಬೆಂಗಳೂರಿನ ಹತ್ತು ವರ್ಷದ ಮಾನ್ಯ ಹರ್ಷಾ ಬರೆದಿದ್ದಳು. 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ಮಾನ್ಯ "ಕನ್ನಡದ ಕಿರಿಯ ಲೇಖಕಿ" ಎಂಬ ಪ್ರಶಂಸೆಯನ್ನೂ ಗಿಟ್ಟಿಸಿಕೊಂಡಿದ್ದಾಳೆ. ಈಕೆಯ ಮೊದಲ ಕನ್ನಡ ಕಥೆ "ನೀರಿನ ಪುಟಾಣಿ ಸಂರಕ್ಷಕರು" ಮಕ್ಕಳ ಕಾದಂಬರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಿದ್ದು, "ಕನ್ನಡದಲ್ಲಿ ಪುಸ್ತಕ ಬರೆದಿರುವ ಕಿರಿಯ ಲೇಖಕಿ" ಎಂಬ ಬಿರುದನ್ನು ತಂದುಕೊಟ್ಟಿದೆ.