ಪೋಷಕರಿದ್ದು ಅನಾಥವಾದ ಕಂದಮ್ಮ: ವಿಚ್ಛೇದನದ ಬಳಿಕ ಅನಾಥಾಶ್ರಮಕ್ಕೆ ಬಿಟ್ಟ ತಂದೆ-ತಾಯಿ, ಕಣ್ಣೀರು ತರಿಸುವ ಕಥೆ
ವಿಧಿ ಬರಹದಿಂದಲ್ಲ, ಜನ್ಮ ನೀಡಿದ ಹೆತ್ತವರಿಂದಲೇ ಮಗುವೊಂದು ಅನಾಥವಾಗಿರುವ ಮನಕಲಕುವ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆ-ತಾಯಿಯ ವಿಚ್ಛೇದನದ ನಂತರ, ಮಗುವಿನ ಜವಾಬ್ದಾರಿಯನ್ನು ಹೊರಲು ಇಬ್ಬರೂ ನಿರಾಕರಿಸಿ, ಆ ಪುಟ್ಟ ಕಂದಮ್ಮನನ್ನು ಅನಾಥಾಶ್ರಮದಲ್ಲಿ ಬಿಟ್ಟು ಹೋಗಿರುವ ಘಟನೆ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ. ವಿಚ್ಛೇದನ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ದಾಂಪತ್ಯದ ಅಂತ್ಯವಾಗಿರಬಹುದು, ಆದರೆ ಅದು ಒಂದು ಮುಗ್ಧ ಮಗುವಿನ ಭವಿಷ್ಯವನ್ನೇ ಹೇಗೆ ಕಸಿದುಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ನಿಜವಾದ ಉದಾಹರಣೆಯಾಗಿದೆ.
ಅನಾಥಾಶ್ರಮದ ಸಿಬ್ಬಂದಿ ಹಾಗೂ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮಗುವಿನ ತಂದೆ ಮತ್ತು ತಾಯಿ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ಬಳಿಕ ಮಗುವನ್ನು ಯಾರು ಸಾಕುವುದು ಎಂಬ ಪ್ರಶ್ನೆ ಬಂದಾಗ, ಇಬ್ಬರೂ ಆ ಜವಾಬ್ದಾರಿಯನ್ನು ಹೊರಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ವರದಿಗಳ ಪ್ರಕಾರ, ತಾಯಿಯು ಮಗುವನ್ನು ಅನಾಥಾಶ್ರಮಕ್ಕೆ ಕರೆತಂದಿದ್ದಳು. ಆ ಮುಗ್ಧ ಮಗು ಆಶ್ರಮದ ಆವರಣದಲ್ಲಿ ಆಟವಾಡುತ್ತಿದ್ದಾಗ, ತಾಯಿಯು ಯಾರಿಗೂ ತಿಳಿಸದೆ, ತಾನು ಮರಳಿ ಬರುತ್ತೇನೆ ಎಂಬ ಯಾವುದೇ ಸೂಚನೆಯನ್ನೂ ಅಲ್ಲಿ ನೀಡದೆ ಮಗುವನ್ನು ಅಲ್ಲಿಯೇ ಬಿಟ್ಟು ಹೊರಟುಹೋಗಿದ್ದಾಳೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಅನಾಥಾಶ್ರಮದ ಸಿಬ್ಬಂದಿ ಮಗುವಿನ ಪೋಷಕರಿಬ್ಬರನ್ನೂ ಸಂಪರ್ಕಿಸಿದ್ದಾರೆ. ಆಗಲೂ ಸಹ, ಮಗುವಿನ ಸಾಕಲು ತಮಗೆ ಇಷ್ಟವಿಲ್ಲ ಎಂದು ಅವರು ನೇರವಾಗಿ ತಿಳಿಸಿದ್ದಾರೆ. ಹೆತ್ತವರೇ ಹೀಗೆ ಮಗುವನ್ನು ತಿರಸ್ಕರಿಸಿರುವುದು ಎಲ್ಲರನ್ನು ಬೆಚ್ಚಿಬೀಳಿಸಿದೆ.
ವಿಚ್ಛೇದನ ಪ್ರಕರಣಗಳಲ್ಲಿ ನ್ಯಾಯಾಲಯಗಳು ಯಾವಾಗಲೂ ಮಗುವಿನ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ಆದರೆ ಇಲ್ಲಿ ಪೋಷಕರಿಬ್ಬರೂ ಮಗುವನ್ನು ಬೇಡವೆಂದು ಹೇಳಿರುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದಲೂ ದೊಡ್ಡ ಅಪರಾಧವಾಗಿದೆ.
ಹೆತ್ತವರ ಪ್ರೀತಿ, ವಾತ್ಸಲ್ಯದಿಂದ ಬೆಳೆಯಬೇಕಾದ ವಯಸ್ಸಿನಲ್ಲಿ, ಆ ಮಗು ಈಗ ಒಂಟಿಯಾಗಿದೆ. ತನ್ನ ಪೋಷಕರು ಯಾರು, ತಾನು ಏಕೆ ಇಲ್ಲಿದ್ದೇನೆ ಎಂಬ ಅರಿವು ಕೂಡ ಆ ಮಗುವಿಗೆ ಇಲ್ಲ. ಆಟವಾಡುತ್ತಾ ತಾಯಿ ಮರಳಿ ಬರುತ್ತಾಳೆಂದು ಕಾಯುತ್ತಿರುವ ಆ ಕಂದನ ಕಣ್ಣುಗಳು ನಮ್ಮ ಸಮಾಜದ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿವೆ.
ಈ ಮನಕಲಕುವ ಘಟನೆಯ ವಿಡಿಯೋ ಮತ್ತು ಮಾಹಿತಿ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ಮತ್ತು ಬೇಸರಕ್ಕೆ ಕಾರಣವಾಗಿದೆ. ನೆಟ್ಟಿಗರು ಮಗುವಿನ ಬಗ್ಗೆ ತೀವ್ರ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಪೋಷಕರು ಈ ರೀತಿ ಮಗುವನ್ನು ಕೈಬಿಡುವುದರಿಂದ ಆ ಎಳೆಯ ಮನಸ್ಸಿನ ಮೇಲೆ ಉಂಟಾಗುವ ಮಾನಸಿಕ ಆಘಾತದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪೋಷಕರ ಜವಾಬ್ದಾರಿ, ಮಕ್ಕಳ ಕಲ್ಯಾಣ ಮತ್ತು ಕುಟುಂಬದ ವಿವಾದಗಳು ಹಾಗೂ ವಿಚ್ಛೇದನದ ಪ್ರಕ್ರಿಯೆಗಳ ಸಮಯದಲ್ಲಿ ಮಕ್ಕಳನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಬಗ್ಗೆ ಅನೇಕ ಕಟುವಾದ ಹಾಗೂ ಭಾವುಕ ಕಾಮೆಂಟ್ಗಳನ್ನು ಮಾಡಿದ್ದಾರೆ. "ಇದು ನಿಜಕ್ಕೂ ಕಣ್ಣೀರು ತರಿಸುತ್ತದೆ. ಆ ಮುಗ್ಧ ಮಗುವಿಗೆ ಪ್ರೀತಿಯ ಅಗತ್ಯವಿದೆ, ಈ ರೀತಿಯ ಶಿಕ್ಷೆಯಲ್ಲ." "ನಿಮಗೆ ಮಗುವನ್ನು ಸಾಕುವ ಇಷ್ಟವಿಲ್ಲದಿದ್ದರೆ, ಅದಕ್ಕೆ ಜನ್ಮ ನೀಡಿದ್ದು ಏಕೆ? ಇದು ಅತ್ಯಂತ ಅಮಾನವೀಯ." ಅಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ "ಅಧಿಕಾರಿಗಳು ಈ ಮಗುವಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಿಕೊಡಬೇಕು. ಜವಾಬ್ದಾರಿಯಿಂದ ನುಣುಚಿಕೊಂಡ ಪೋಷಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. "ವಿಚ್ಛೇದನದಲ್ಲಿ ಗಂಡ-ಹೆಂಡತಿ ಬೇರೆಯಾಗಬಹುದು, ಆದರೆ ಮಗುವಿನ ಪಾಲಿಗೆ ಅವರಿಬ್ಬರೂ ಯಾವಾಗಲೂ ತಂದೆ-ತಾಯಿಯೇ. ಈ ಸತ್ಯವನ್ನು ಅವರು ಮರೆತಿದ್ದಾರೆ." ಎಂದು ಮತ್ತೊಬ್ಬ ಬಳಕೆದಾರರರು ಕಮೆಂಟ್ ಮಾಡಿದ್ದಾರೆ.












Click it and Unblock the Notifications